ರಾಷ್ಟ್ರೀಯ ಶಿಕ್ಷಣ ನೀತಿ-2020 ಸ್ವಾಗತಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ
ಬೆಂಗಳೂರು, ಜುಲೈ.30: ಕೇಂದ್ರ ಸರ್ಕಾರದ ಸಚಿವ ಸಂಪುಟವು ಅನುಮೋದನೆ ನೀಡಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ಕರ್ನಾಟಕ ವಿಧಾನಸಭಾ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ವಾಗತಿಸಿದ್ದಾರೆ.
Recommended Video
ಶಿಕ್ಷಣ ಕ್ಷೇತ್ರದಲ್ಲಿ 'ನ ಭೂತೋ, ನ ಭವಿಷ್ಯತಿ' ಎಂಬಂತೆ ಒಂದು ಕ್ರಾಂತಿಕಾರಿ ನಿರ್ಣಯವಾಗಿದ್ದು, ನಮ್ಮ ದೇಶವನ್ನು ಮುಂದಿನ ದಿನಗಳಲ್ಲಿ ವಿಶ್ವಗುರು ಸ್ಥಾನವನ್ನು ಏರಿಸುವ ನಿಟ್ಟಿನಲ್ಲಿ ಸಹಕಾರಿಯಾಗಿದೆ ಎನ್ನಬಹುದು. ಹೊಸ ಪೀಳಿಗೆಯ ಮಕ್ಕಳ ಕಲಿಕಾ ಸಾಮರ್ಥ್ಯದ ಜೊತೆಗೆ ಪ್ರೌಢಶಿಕ್ಷಣ ಹಂತದಲ್ಲಿ ನೆಚ್ಚಿನ ವಿಷಯಗಳ ಆಯ್ಕೆಗೆ ಅವಕಾಶ ನೀಡಿರುವುದು ಉತ್ತಮ ಅಂಶ ಎಂದು ವಿಶ್ವೇಶ್ವರ ಹೆಗಡಿ ಕಾಗೇರಿ ಅವರು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಲಾ ಶಿಕ್ಷಣದಲ್ಲಿ ಏಕರೂಪತೆಗೆ ಅವಕಾಶ ನೀಡುತ್ತದೆ. ಯಾವುದೇ ವಿದ್ಯಾರ್ಥಿ ಒಂದು ಹಂತವನ್ನು ಮುಗಿಸಿದ್ದಲ್ಲಿ, ಶಿಕ್ಷಣದಲ್ಲಿ ತಡೆಯುಂಟಾದಾಗ ಯಾವುದಾದರೊಂದು ಕೌಶಲ್ಯದಲ್ಲಿ ನೈಪುಣ್ಯತೆ ಪಡೆಯಬಹುದು. ಪದವಿಪೂರ್ಮ ಮತ್ತು ಪ್ರೌಢ ಹಂತದಲ್ಲಿ ಒಟ್ಟಿಗೆ ತಂದಿರುವುದರಿಂದ ಈವರೆಗಿನ ಕಲಿಕಾ ಅಂತರ ಹೋಗಲಾಡಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ಶಿಕ್ಷಕರ ಶಿಕ್ಷಣವನ್ನು ಶಾಲಾ ಶಿಕ್ಷಣದ ನಂತರ ನಾಲ್ಕು ವರ್ಷಗಳ ಪದವಿಯಾಗಿ ನಿರ್ಧರಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದರಿಂದ ಶಿಕ್ಷಣದ ಗುಣಮಟ್ಟ ಸುಧಾರಿಸುತ್ತದೆ. ನಿಜವಾಗಿಯೂ ಶಿಕ್ಷಕರಾಗಬೇಕು ಎಂಬ ಆಸಕ್ತಿ ಮತ್ತು ಹಂಬಲ ಉಳ್ಳವರು ಮಾತ್ರ ಇಂಥ ಪದವಿಗೆ ಸೇರುತ್ತಾರೆ.
ಪದವಿ ಹಂತದಲ್ಲಿ 1ನೇ, 2ನೇ ವರ್ಷದಲ್ಲಿ ಕಾರಣಾಂತರಗಳಿಂದ ಶಿಕ್ಷಣ ಮೊಟಕುಗೊಳಿಸಿದರೂ ಅವರಿಗೆ ಒಂದು ಹಂತದ ಶಿಕ್ಷಣ ಮುಕ್ತಾಯವಾಗಿ ಪ್ರಮಾಣ ಪತ್ರ ದೊರೆಯುತ್ತದೆ. ಇದರಿಂದ ಅಂಥವರಲ್ಲಿ ಕೀಳರಿಮೆ ಹೋಗುವುದರ ಜೊತೆಗೆ ಉದ್ಯೋಗವಕಾಶವೂ ಸಿಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ನೆಚ್ಚಿನ ಭಾಷೆಯಲ್ಲಿ ಅಂದರೆ ಮಾತೃಭಾಷೆಯಲ್ಲಿ ನೀಡುವುದರಿಂದ ಶಿಕ್ಷಣದ ಅಡಿಪಾಯ ಗಟ್ಟಿಯಾಗುತ್ತದೆ.
ಪರೀಕ್ಷೆಗಳನ್ನು ಪ್ರತಿ ಹಂತದ ಕೊನೆಯಲ್ಲಿ ಮಾತ್ರ ಇರುವುದರಿಂದ ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಿ ಕಲಿಕೆಯ ಬದಲು ಸ್ಮರಣಶಕ್ತಿ ನೀಡಲಾದ ಈವರೆಗಿನ ಪದ್ಧತಿ ಹೋಗಿ ಮಕ್ಕಳು ನಿರ್ಭಯವಾಗಿ ಕಲಿಯಲು ಸಹಕಾರಿಯಾಗುತ್ತದೆ. ಪರೀಕ್ಷ ಪದ್ಧತಿ ಸುಧಾರಣೆಗೆ ಒತ್ತು ನೀಡಿದ್ದು, ತಿಳುವಳಿಕೆ ಮತ್ತು ಅನ್ವಯ ಕೌಶಲ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದು ಶಿಕ್ಷಣ ಗುಣಮಟ್ಟದ ಸುಧಾಕರಣೆಗೆ ಪೂರಕವಾಗಿರುತ್ತದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications