'ನಾನು ಮಲಾಲಾ' ಕನ್ನಡ ಪುಸ್ತಕ ಬಿಡುಗಡೆ
ಬೆಂಗಳೂರು, ಅ. 18 : ಇಡೀ ರಾಷ್ಟ್ರವೇ ತಾಲಿಬಾನ್ ಕಪಿಮುಷ್ಠಿಯಲ್ಲಿ ನಲುಗುತ್ತಿದ್ದಾಗ, ಏಕಾಂಗಿಯಾಗಿ ಭಯೋತ್ಪಾದನೆಯ ವಿರುದ್ಧ ದನಿಯೆತ್ತಿದ ಪಾಕಿಸ್ತಾನದ ವೀರ ಬಾಲಕಿ ಮಲಾಲಾ ಯೂಸಫ್ಝಾಯಿ ಆತ್ಮಕಥೆ 'ಐ ಆಮ್ ಮಲಾಲಾ' ಪುಸ್ತಕದ ಕನ್ನಡ ಅವತರಣಿಕೆ 'ನಾನು ಮಲಾಲಾ' ಅ.19, ಭಾನುವಾರ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ.
2014ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರವನ್ನು ಮಲಾಲಾ ಪಡೆದಿರುವ ಸಂದರ್ಭದಲ್ಲಿಯೇ ಮಲಾಲಾ ಆತ್ಮಕಥೆ ಕನ್ನಡದಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ. ಕ್ರಿಸ್ಟಿನಾ ಲ್ಯಾಂಬ್ ಮೂಲ ನಿರೂಪಣೆಯಿರುವ ಪುಸ್ತಕವನ್ನು ಕನ್ನಡಕ್ಕೆ ಭಾಷಾಂತರಿಸಿರುವುದು ಪತ್ರಕರ್ತ ಬಿ.ಎಸ್. ಜಯಪ್ರಕಾಶ ನಾರಾಯಣ.

ಕುಮಾರಕೃಪಾ ರಸ್ತೆ, ಶಿವಾನಂದ ಸರ್ಕಲ್ ಬಳಿಯಿರುವ ಚಿತ್ರಕಲಾ ಪರಿಷತ್ತಿನಲ್ಲಿ ಬೆಳಿಗ್ಗೆ 10.30ಕ್ಕೆ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಖ್ಯಾತ ಕವಿ ಸಿದ್ದಲಿಂಗಯ್ಯ ಅವರು ಬಿಡುಗಡೆ ಮಾಡಲಿದ್ದಾರೆ. ಪ್ರಸಿದ್ಧ ಲೇಖಕ ಬೋಳುವಾರು ಮೊಹಮ್ಮದ್ ಕುಂಞ ಮತ್ತು ಸಂಸ್ಕೃತಿ ಚಿಂತಕರಾದ ಡಾ. ಜಿ.ಬಿ. ಹರೀಶ ಅವರು ಉಪಸ್ಥಿತರಿರಲಿದ್ದಾರೆ.
ರಾಜಾಜಿನಗರದ ಆಕೃತಿ ಪುಸ್ತಕ ಪ್ರಕಟಿಸಿರುವ ಈ ಪುಸ್ತಕದ ಬೆಲೆ 250 ರು. ಮಾತ್ರ. [ನೊಬೆಲ್ ಪುರಸ್ಕಾರ ಬಂದಿದ್ದು ಹೇಗೆ?]
ಲಂಡನ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪಾಕಿಸ್ತಾನದ 19 ವರ್ಷದ ದಿಟ್ಟ ಯುವತಿ ಮಲಾಲಾ ಮತ್ತು ಭಾರತದ ಮಕ್ಕಳ ಹಕ್ಕಿಗಾಗಿ ಹೋರಾಟ ನಡೆಸುತ್ತಿರುವ 60 ವರ್ಷದ ಕೈಲಾಶ್ ಸತ್ಯಾರ್ಥಿ ಅವರು ಜಂಟಿಯಾಗಿ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.












Click it and Unblock the Notifications