ಫಾಲನೇತ್ರಗೆ ಚಿರಂಜೀವಿ ಪ್ರಶಸ್ತಿ, ನಾಗರಾಜ್ ಗೆ ಅರವಿಂದ ಪ್ರಶಸ್ತಿ
ಬೆಂಗಳೂರು, ಅಕ್ಟೋಬರ್ 30: 2018ನೇ ಸಾಲಿನ ಕನ್ನಡ ಚಿರಂಜೀವಿ ಪ್ರಶಸ್ತಿಯು ಕನ್ನಡ ಹೋರಾಟಗಾರ, ಸಂಘಟಕ, ಲೇಖಕ ಫಾಲನೇತ್ರ ಅವರಿಗೆ ಸಂದಿದೆ. ಮೂರು ದಶಕಗಳಿಂದ ಅವರು ಕನ್ನಡಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಫಾಲನೇತ್ರ ಅವರಿಗೆ ಆಳ್ಲ ಚಿರಂಜೀವಿ ಅವರ ಹೆಸರಲ್ಲಿ ನೀಡುವ ಕನ್ನಡ ಚಿರಂಜೀವಿ ಪ್ರಶಸ್ತಿ ಸಂದಿದೆ. ಆಳ್ಲ ಚಿರಂಜೀವಿ 1998ರಲ್ಲಿ ಕಣ್ಮರೆಯಾದರು. ಕೇಂದ್ರ ಅಬಕಾರಿ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಅವರು ಅವಿವಾಹಿತರಾಗಿಯೇ ಉಳಿದು, ತಮ್ಮ ಬಹುಪಾಲು ಸಂಪಾದನೆಯನ್ನು ಕನ್ನಡ ಕೆಲಸಗಳಿಗೆ ವಿನಿಯೋಗಿಸಿದರು.
ಸಾಹಿತ್ಯ, ಸಂಸ್ಕೃತಿಗಳಲ್ಲಿ ಅಪಾರ ಜ್ಞಾನ ಹೊಂದಿದ್ದ ಚಿರಂಜೀವಿ ಬದುಕಿನುದ್ದಕ್ಕೂ ಕನ್ನಡಸೇವೆ ಮಾಡಿದರು. ಸಾಹಿತ್ಯ ಸಮ್ಮೇಳನ, ಕನ್ನಡಪರ ಸಭೆಗಳಲ್ಲಿ ಚಿರಂಜೀವಿ ಅವರ ಘೋಷಣೆಯನ್ನು ಕೇಳಿದವರು ಎಂದೂ ಅವರನ್ನು ಮರೆಯಲಾರರು. ಹಾ.ಮಾ. ನಾಯಕರು ಚಿರಂಜೀವಿಯಿಲ್ಲದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಕಳಾಹೀನವಾಗಿ ಕಂಡಿತು ಎಂದಿದ್ದರು.

ಇನ್ನು ಚಿರಂಜೀವಿ ಪ್ರಶಸ್ತಿಗೆ ಪಾತ್ರರಾಗಿರುವ ಫಾಲನೇತ್ರ ಕನ್ನಡ ಸೇನೆಯ ಸ್ಥಾಪಕ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳ ಉಪ ಸಮಿತಿಗಳ ಸದಸ್ಯರಾಗಿ, ಸದ್ಯ ಕನ್ನಡ ವಿಚಾರ ವೇದಿಕೆಯ ಅಧ್ಯಕ್ಷರಾಗಿ ಮಾಡಿರುವ ಕನ್ನಡ ಕೆಲಸದ ಹರವು ವಿಸ್ತಾರವಾದದ್ದು.
ಕನ್ನಡ ಹೋರಾಟಗಾರ, ಸಂಘಟಕ, ಸಮಾಜ ಸೇವಕ, ಸಾಹಿತಿ ಕೆ.ಎಸ್.ನಾಗರಾಜ್ ಅವರಿಗೆ ಕನ್ನಡ ಅರವಿಂದ ಪ್ರಶಸ್ತಿ ದೊರೆತಿದೆ. ಗೋಕಾಕ್ ಚಳವಳಿಯ ಕಾಲದಿಂದ ಕನ್ನಡ ಚಳವಳಿಯಲ್ಲಿ ಸಕ್ರಿಯವಾಗಿರುವ ನಾಗರಾಜ್ ಶಂಕರಪುರದ ಕನ್ನಡ ಕಟ್ಟೆ, ನಮ್ಮ ನಾಡು ಯುವಕರ ಸಂಘ, ಬಸವನಗುಡಿ ಬರಹಗಾರರ ಬಳಗಗಳ ಮುಂದಾಳಾಗಿ, ಕನ್ನಡಗಡಿ ಜಾಥಾದ ಸಂಚಾಲಕರಾಗಿ ಮಾಡಿರುವ ಕನ್ನಡ ಕಾಯಕ ಅಪಾರ.
ಬಡ ಮಕ್ಕಳ ಶಿಕ್ಷಣಕ್ಕೆ ನೆರವು, ಒಂದಂಕಿ ಲಾಟರಿ ನಿಷೇಧ, ಶಾಲೆಯ ಮುಂದಿದ್ದ ಸಾರಾಯಿ ಅಂಗಡಿ ತೆರವು ಗೊಳಿಸಲು ಚಳವಳಿ ಉಲ್ಲೇಖನೀಯ. ಕನ್ನಡನಾಡು-ನುಡಿಯ ಸಮಸ್ಯೆ, ಅದರ್ಶ ವ್ಯಕ್ತಿಗಳ ಕಿರು ಪರಿಚಯ ಕುರಿತು ಬರೆದ ನೂರಾರು ಲೇಖನಗಳು ನಾಡಿನ ಪ್ರಮುಖ ಪತ್ರಿಕೆಯಲ್ಲಿ ಪ್ರಕಟವಾಗಿವೆ.
ಇಲ್ಲಿಯವರೆಗೆ ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಏಳು ಕಥಾ ಸಂಕಲನ, ಐದು ನಾಟಕಗಳು, ಹರಟೆ, ಲೇಖನಗಳ ಸಂಕಲನ, ವ್ಯಕ್ತಿ ಚಿತ್ರಗಳು, ಇತಿಹಾಸ ಎಲ್ಲ ಸೇರಿವೆ. ಮರಳಿನ ಮನೆ, ಜನಾನುರಾಗಿ ರಾಮಕೃಷ್ಣ ಹೆಗಡೆ, ಈ ಜಗದ ಚಿಂತೆ, ನಮ್ಮ ಟಿ.ಆರ್. ಶಾಮಣ್ಣ, ಕಾಮಿಡಿ ಕರಿಯ, ಬಸವನಗುಡಿ ರಾಜಕೀಯ ದರ್ಶನ ಜನಪ್ರಿಯ ಕೃತಿಗಳು.
ಬೆಳಗಾವಿ ಕನ್ನಡಪರ ಹೋರಾಟಕ್ಕೆ ಗಟ್ಟಿಯ ನೆಲೆ ಒದಗಿಸಿದ ಅರವಿಂದರಾಯ ಜೋಶಿ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕನ್ನಡ ಚಟುವಟಿಕೆಗೆ ವಿಸ್ತಾರವಾದ ವೇದಿಕೆಯನ್ನು ನಿರ್ಮಿಸಿದವರು. ಅಪ್ಪಟ ದೇಶಾಭಿಮಾನಿ, ಸ್ವಾತಂತ್ರ್ಯ ಸೇನಾನಿ, ಬೆಳಗಾವಿಯಲ್ಲಿ ಪ್ರಥಮ ಕನ್ನಡ ಶಾಲೆ ಆರಂಭಿಸಿದವರು, ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದವರು.
ಶಿಕ್ಷಣ ತಜ್ಞರು, ಬೆಳಗಾವಿಯಲ್ಲಿನ ಕನ್ನಡಪರ ಚಟುವಟಿಕೆಗೆ ನಾಂದಿ ಹಾಡಿದವರು, ಕೇಂದ್ರ ಗೃಹ ಸಚಿವರಿಗೆ ಕಾರ್ಯದರ್ಶಿಯಾಗಿ ದೆಹಲಿಯಲ್ಲಿದ್ದಾಗಲೂ ಕರ್ನಾಟಕದ ಹಿತಚಿಂತನೆ ನಡೆಸಿದ ಅರವಿಂದ ಜೋಶಿಯವರ ಹೆಸರಿನಲ್ಲಿ ಕನ್ನಡ ಪರಿಚಾರಕರಿಗೆ ಕನ್ನಡ ಅರವಿಂದ ಪ್ರಶಸ್ತಿಯನ್ನು ಬಳಗವು ನೀಡುತ್ತಾ ಬಂದಿದೆ.
ಈ ಪ್ರಶಸ್ತಿಗಳನ್ನು ನವೆಂಬರ್ 27ರಂದು ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯಲಿರುವ ಕನ್ನಡ ಚಿಂತನೆ ಹಾಗೂ ಕನ್ನಡ ಕಾರ್ಯಕರ್ತರ ಸನ್ಮಾನ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.












Click it and Unblock the Notifications