ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ಕನ್ನಡ ನಟ, ನಟಿಯರು-ಕಾರಣ ಏನು?
ಬೆಂಗಳೂರು, ಸೆಪ್ಟೆಂಬರ್, 05: ಮಲಯಾಳಂ ಚಿತ್ರರಂಗದಲ್ಲಿ ನಟಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತವೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಹಲವರು ನಟಿಯರು ಕೂಡ ಈ ಬಗ್ಗೆ ತನಿಖೆಗೆ ಆಗ್ರಹಿಸಿದ್ದರು. ಇದೀಗ ಕನ್ನಡ ಚಿತ್ರರಂಗದಲ್ಲೂ ಇಂತಹದ್ದೇ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ನಟ, ನಟಿಯರು ಸಿಎಂ ಭೇಟಿಯಾಗಿ ಆಗ್ರಹಿಸಿದರು.
ಹಿರಿಯ ಸಾಮಾಜಿಕ ಕಾರ್ಯಕರ್ತೆ ವಿಜಯಮ್ಮ, ನಟ ಚೇತನ್ ನೇತೃತ್ವದ ಫೈರ್ ನಿಯೋಗದವರು ಇಂದು (ಸೆಪ್ಟೆಂಬರ್ 05) ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದರು.

ಮಲಯಾಳಂ ಸಿನಿಮಾ ರಂಗದಲ್ಲಿ ನಟಿಯರ ಮೇಲಿನ ಲೈಂಗಿಕ ದೌರ್ಜನ್ಯ ಕುರಿತ ತನಿಖೆಗಾಗಿ ಸಮಿತಿ ರಚನೆ ಮಾಡಿದಂತೆ. ಹಾಗೆಯೇ ರಾಜ್ಯ ಸರ್ಕಾರವು ಸಮಿತಿ ರಚಿಸಿ, ಕನ್ನಡ ಚಿತ್ರರಂಗದಲ್ಲಿ ನಟಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಮಗ್ರ ತನಿಖೆ ಮಾಡುವಂತೆ ಇಂದು ಸಿದ್ದರಾಮಯ್ಯಗೆ ನಟ, ನಟಿಯರು ಮನವಿ ಸಲ್ಲಿಸಿದರು.
ಹಿರಿಯ ಸಾಮಾಜಿಕ ಕಾರ್ಯಕರ್ತೆ ವಿಜಯಮ್ಮ, ನಟ ಚೇತನ್ ನೇತೃತ್ವದ ಫೈರ್ ನಿಯೋಗದವರು ಇಂದು ಮುಖ್ಯಮಂತ್ರಿ @siddaramaiah ಅವರನ್ನು ಭೇಟಿಯಾಗಿ, ಮಲಯಾಳಂ ಸಿನೆಮಾ ರಂಗದಲ್ಲಿ ನಟಿಯರ ಮೇಲಿನ ಲೈಂಗಿಕ ದೌರ್ಜನ್ಯ ಕುರಿತ ತನಿಖೆಗಾಗಿ ಸಮಿತಿ ರಚನೆ ಮಾಡಿದಂತೆ, ರಾಜ್ಯ ಸರ್ಕಾರವು ಸಮಿತಿ ರಚಿಸಿ, ಕನ್ನಡ ಚಿತ್ರರಂಗದಲ್ಲಿ ನಟಿಯರ ಮೇಲಿನ ಲೈಂಗಿಕ ದೌರ್ಜನ್ಯ… pic.twitter.com/y7LbTx7ERZ
— CM of Karnataka (@CMofKarnataka) September 5, 2024
ನಟ ಚೇತನ್ ಅಹಿಂಸ, ನಟಿ ಶ್ರುತಿ ಹರಿಹರನ್, ಸಂಗೀತಾ ಭಟ್, ನೀತು ಶೆಟ್ಟಿ ಇನ್ನೂ ಹಲವರು ಇಂದು ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು, ಕರ್ನಾಟಕದಲ್ಲಿಯೂ ಸಹ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿಯೊಂದನ್ನು ನಿರ್ಮಿಸಿ ಎಂದು ಒತ್ತಾಯ ಮಾಡಿದರು.
ಜೊತೆಗೆ ಸಮಿತಿ ನಿರ್ಮಾಣದ ಬಗ್ಗೆ ಇರುವ ಅವಶ್ಯಕತೆಯನ್ನು ಸಹ ಸಿಎಂ ಸಿದ್ದರಾಮಯ್ಯನವರಿಗೆ ಮನಗಾಣಿಸುವ ಪ್ರಯತ್ನವನ್ನು ಚೇತನ್ ಅಹಿಂಸಾ ಹಾಗೂ ಇತರ ನಟಿಯರು ಮಾಡಿದ್ದಾರೆ.
ಇನ್ನೂ ಈ ಬಗ್ಗೆ ನಿರ್ದೇಶಕ ಕೆ.ಎಂ.ಚೈತನ್ಯ ಪ್ರತಿಕ್ರಿಯಿಸಿ, ಕನ್ನಡ ಚಿತ್ರರಂಗಕ್ಕೂ ಇಂಥಹ ಸಮಿತಿಯ ಅವಶ್ಯಕತೆ ಇದೆ. ಈ 5 ವರ್ಷಗಳ ಏನಾಗಿದೆ ಅನ್ನೋದಕ್ಕಿಂತ ಇನ್ಮೇಲೆ ಲೈಂಗಿಕ ದೌರ್ಜನ್ಯ ಘಟನೆಗಳು ಆಗಬಾರದು ಎನ್ನುವುದಷ್ಟೇ ಇದರ ಉದ್ದೇಶವಾಗಿದೆ ಎಂದರು.
ಕವಿತಾ ಲಂಕೇಶ್ ಹೇಳಿದ್ದೇನು?: ಇನ್ನು ಈ ಬಗ್ಗೆ ಫೈರ್ ಸಂಸ್ಥೆಯ ಅಧ್ಯಕ್ಷರು ಮತ್ತು ನಿರ್ದೇಶಕರಾದ ಕವಿತಾ ಲಂಕೇಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದು, "ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯು ಮಲೆಯಾಳಂ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಹಿಂಸೆ ಮತ್ತು ಇತರೆ ಸಮಸ್ಯೆಗಳನ್ನು ಬಹಿರಂಗಪಡಿಸಿದ್ದಾರೆ. ಕರ್ನಾಟಕ ಸರ್ಕಾರವು ಕನ್ನಡ ಚಲನ ಚಿತ್ರೋದ್ಯಮದಲ್ಲಿನ ಈ ರೀತಿಯ ಸಮಸ್ಯೆಗಳನ್ನು ಬಗೆಹರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು," ಆಗ್ರಹಿಸಿದ್ರು.
"ಕನ್ನಡ ಚಲನಚಿತ್ರೋದ್ಯಮದಲ್ಲಿ ದೇಶದ ಮೊದಲ ಚಲನ ಚಿತ್ರೋದ್ಯಮದ ಆಂತರಿಕ ದೂರುಗಳ ಸಮಿತಿಯನ್ನು ಸ್ಥಾಪಿಸುವಲ್ಲಿ ನಮ್ಮ 'ಫೈರ್' ಸಂಸ್ಥೆಯು ಪ್ರಮುಖ ಪಾತ್ರ ವಹಿಸಿದೆ. ಹಾಗೆಯೇ ಲೈಂಗಿಕ ಕಿರುಕುಳದ ಸಂತ್ರಸ್ತರನ್ನು 2017ರಿಂದ ಈವರೆಗೂ ನಮ್ಮ ಸಂಸ್ಥೆ ಬೆಂಬಲಿಸುತ್ತಲೇ ಬಂದಿದೆ. ಸದ್ಯ ಚಲನ ಚಿತ್ರೋದ್ಯಮದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಸುರಕ್ಷಿತವಾದ ಕೆಲಸದ ವಾತಾವರಣವನ್ನು ನೀಡುವುದಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯವಾದ ಅಂಶವೆಂದು ನಾವು ಭಾವಿಸುತ್ತೇವೆ" ಎಂದು ತಿಳಿಸಿದ್ದಾರೆ.












Click it and Unblock the Notifications