'ಇನ್ಮುಂದೆ ಯಾವ ಅಭ್ಯರ್ಥಿಯನ್ನೂ ಬೆಂಬಲಿಸಲ್ಲ'

(ಸಂತೋಷ್ ಹೆಗ್ಡೆ ಸಂದರ್ಶನದ ಮುಂದುವರಿದ ಭಾಗ)

ಒನ್ಇಂಡಿಯಾ : ಲೋಕಾಯುಕ್ತ ಹುದ್ದೆಗೆ ರಾಜೀನಾಮೆ ನೀಡಿದ ಮೇಲೆ ಆರೋಪಿಗಳ ವಿರುದ್ಧದ ವಿಚಾರಣೆ, ತನಿಖೆ ತುಂಬಾ ನಿಧಾನಗತಿಯಲ್ಲಿ ನಡೆಯುತ್ತಿದೆ ಎಂದು ಅನಿಸಿದೆಯಾ?

ಸಂತೋಷ್ ಹೆಗ್ಡೆ : ವಿಚಾರಣೆ ಲೋಕಾಯುಕ್ತ ಸಂಸ್ಥೆಯಲ್ಲಿ ಆಗುವಾಗ ಕೆಲವು ವಿಚಾರಣೆ ಬೇಗನೆ ಆಗುತ್ತವೆ. ಕೆಲವು ಮೌಖಿಕವಾಗಿ ಬಂದ ಹೇಳಿದ ಕಂಪ್ಲೇಂಟ್ ಗಳನ್ನು ಆವಾಗಲೇ ಫೋನ್ ನಲ್ಲಿ ಮಾತನಾಡಿ ಬಗೆಹರಿಸುತ್ತೇವೆ. ಇನ್ನು ಕ್ರಮ ತೆಗೆದುಕೊಳ್ಳುವುದು ಸರಕಾರಕ್ಕೆ ಬಿಟ್ಟ ವಿಚಾರ. ನಾವು ಬರೀ ಅವರಿಗೆ ಸಲಹೆ ಕೊಡಬಹುದು, ವರದಿ ಕಳಿಸಬಹುದು. ಅದನ್ನು ಅವರು ಒಪ್ಪಬಹುದು, ಒಪ್ಪದೆಯೂ ಇರಬಹುದು. ಈಗ ಗಣಿ ವರದಿಯನ್ನು ತೆಗೆದುಕೊಳ್ಳಿ, 2011ರಲ್ಲಿ ವರದಿ ಕೊಟ್ಟಿದ್ದು ಇವತ್ತಿನವರೆಗೂ ಏನೂ ಕ್ರಮ ತೆಗೆದುಕೊಂಡಿಲ್ಲ.

ಆದರೆ, ಸುಪ್ರೀಂ ಕೋರ್ಟ್ ನವರು ಅದನ್ನು ಗಮನಕ್ಕೆ ತೆಗೆದುಕೊಂಡು ಸಿಇಸಿಗೆ ವರದಿ ನೀಡಲು ಹೇಳಿದರು ಮತ್ತು ತನಿಖೆ ನಡೆಸಲು ಸಿಬಿಐಗೆ ಆದೇಶ ನೀಡಿದರು. ಬಹಳಷ್ಟು ಬೆಳವಣಿಗೆ ಅಲ್ಲಿ ಆಗಿದೆ. ಕೆಲವರು ಜೈಲು ಸೇರಿದ್ದಾರೆ. ಅದರಿಂದ ಮೈನಿಂಗ್ ಇನ್ನೂ ಆರಂಭವಾಗಿಲ್ಲ. ಕಷ್ಟಪಟ್ಟು 26 ಸಾವಿರ ಪುಟಗಳ ವರದಿಯನ್ನು ಜಾರಿ ಮಾಡಿದೆ. ಕೆಲವು ನನ್ನ ಜೊತೆ ಕೆಲಸ ಮಾಡಿದ ಅಧಿಕಾರಿಗಳ ಜೊತೆ ಯಾವುದೇ ಹೆದರಿಕೆ ಇಲ್ಲದೆ, ಭಾರೀ ಮಹತ್ವಾಕಾಂಕ್ಷೆಯಿಂದ ತಯಾರು ಮಾಡಿದ ವರದಿ ಅದು. ಅದನ್ನು ಕೂಡ ಜಾರಿಗೆ ತರದಿದ್ದರಿಂದ ಬೇಜಾರು ಕೂಡ ಆಗಿದೆ.

Justice Santosh Hegde interview

ಒನ್ಇಂಡಿಯಾ : ಲೋಕಾಯುಕ್ತ ವರದಿ ಜಾರಿಯಾಗದಿದ್ದರಿಂದ, ಭ್ರಷ್ಟರಿಗೆ ಶಿಕ್ಷೆ ಆಗದಿದ್ದರಿಂದ, ನೀವು ಬೆಂಬಲಿಸಿದ ಅಭ್ಯರ್ಥಿ ಸೋತಿದ್ದರಿಂದ ಭ್ರಮನಿರಸನ, ಖಿನ್ನತೆ, ಆತಂಕ ನಿಮ್ಮನ್ನು ಆವರಿಸಿದೆಯಾ?

ಸಂತೋಷ್ ಹೆಗ್ಡೆ : ಗ್ರಾಜ್ಯುಯೇಟ್ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಅಶ್ವಿನ್ ಮಹೇಶ್ ಅವರನ್ನು ಪ್ರಯೋಗಾತ್ಮಕವಾಗಿ ಬೆಂಬಲಿಸಿದ್ದೆ. ಆದರೆ, ಈ ರೀತಿ ಹಿಂದೆ ಮಾಡಿರಲಿಲ್ಲ, ಇನ್ನು ಮುಂದೆ ಯಾರನ್ನೂ ಬೆಂಬಲಿಸುವುದಿಲ್ಲ. ಅಶ್ವಿನ್ ಮಹೇಶ್ ಅವರೇ 12 ಸಾವಿರ ಜನರನ್ನು ಮತದಾರರನ್ನಾಗಿ ಮಾಡಿದ್ದರು. ಆದರೂ ಅವರಾರೂ ಮಹೇಶ್ ಅವರಿಗೆ ಮತ ಹಾಕಲಿಲ್ಲ. ಅವರಿಗೆ ಬಂದಿದ್ದು ಬರೀ ನಾಲ್ಕು ಸಾವಿರ ವೋಟ್. ಗೆದ್ದವರು ಬೇರೆ ಕಾರಣಕ್ಕಾಗಿ ಗೆದ್ದರು. ಇದನ್ನು ನೋಡಿದಾಗ ನಾನು ನಿರಾಶನಾದೆ. ಇದರಿಂದ ಏನೂ ಪ್ರಯೋಜನ ಇಲ್ಲವೆಂದು ಆಗ ಅನಿಸಿದ್ದು ನಿಜ.

ಏನೇ ಆಗ್ಲಿ, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದೆ. ಕಳೆದ ಇಪ್ಪತ್ತು ಮೂವತ್ತು ವರ್ಷಗಳಿಂದ ಅದರ ರೀತಿ ಬದಲಾಗುತ್ತಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವ ಇಚ್ಛೆಯಂತೂ ಇದ್ದೇ ಇದೆ. ಮುಂದೆ ಬದಲಾವಣೆ ಆಗುತ್ತದೆಂಬ ಆಸೆ ಇದೆ. ಇದಕ್ಕಾಗಿ ಯುವ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಲೇ ಬಂದಿದ್ದೇನೆ. ಸುಮಾರು 700ಕ್ಕೂ ಜಾಸ್ತಿ ಶಾಲಾಕಾಲೇಜುಗಳಿಗೆ ಹೋಗಿದ್ದೇನೆ. ಭ್ರಷ್ಟಾಚಾರ ಪ್ರೋತ್ಸಾಹಿಸಬೇಡಿ ಎಂದು ಹೇಳುತ್ತಲೇ ಬಂದಿದ್ದೇನೆ. ಪ್ರಜಾಪ್ರಭುತ್ವಕ್ಕಿಂತ ಉತ್ತಮ ರಾಜನೀತಿ ಇನ್ನೊಂದಿಲ್ಲ. ಇದನ್ನು ಉಳಿಸಬೇಕು ಎಂಬ ನಿಟ್ಟಿನಲ್ಲಿ ನನ್ನ ಪ್ರಯತ್ನ ನಿರಂತರವಾಗಿ ಸಾಗಿದೆ.

ಒನ್ಇಂಡಿಯಾ : ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ದೆಹಲಿಯಲ್ಲಿ ಆಪ್ ಸರಕಾರ ಬಂದಿದೆ. ಕರ್ನಾಟಕದಲ್ಲಿ ಬಿಜೆಪಿ ಹೋಗಿ ಕಾಂಗ್ರೆಸ್ ಬಂದಿದೆ. ಕೇಂದ್ರದಲ್ಲಿ ಏನಾಗುತ್ತದೋ? ಈ ದೃಷ್ಟಿಯಿಂದ ನಿಮಗೆ ಮುಂದೆ ನಮ್ಮ ಭ್ರಷ್ಟ ರಾಜಕೀಯ ವ್ಯವಸ್ಥೆಯೂ ಸುಧಾರಣೆಯಾಗುತ್ತದೆಂಬ ಆಶಾಭಾವನೆ ಮೂಡಿದೆಯಾ?

ಸಂತೋಷ್ ಹೆಗ್ಡೆ : ಖಂಡಿತ. ಇಲ್ಲದಿದ್ದರೆ ನಾನು ಏಳುನೂರು ಶಾಲಾಕಾಲೇಜುಗಳಿಗೆ ಹೋಗುತ್ತಿರಲಿಲ್ಲ. ನಿರಾಶನಾಗಿದ್ದರೆ ಅವರೊಂದಿಗೆ ಸಂವಾದ ಮಾಡುತ್ತಿರಲಿಲ್ಲ. ಮುಂದೆ ಬದಲಾವಣೆ ಆಗುತ್ತದೆಂಬ ಆಶಾಭಾವನೆ ಖಂಡಿತ ಇದೆ. ಆದರೆ, ಸದ್ಯಕ್ಕೆ ಇದು ಆಗುವುದಿಲ್ಲ ಎಂಬ ವಾಸ್ತವಾಂಶವೂ ತಿಳಿದಿದೆ. ಏಕೆಂದರೆ, ಇದು ಇನ್ನೂ ಯುವಕರ ಹಿಡಿತಕ್ಕೆ ಬಂದಿಲ್ಲ. ಇನ್ನೂ ನಮ್ಮಂಥವರ ಬಳಿಯೇ ಇದೆ. ಎಲ್ಲಕ್ಕಿಂತ ಮುಖ್ಯವಾದುದು, ಇದಕ್ಕೆ ದೊಡ್ಡ ಕಾರಣ ನಮ್ಮ ಕೆಟ್ಟುಹೋಗಿರುವ ಸಮಾಜ. ಇಂದು ಸಮಾಜ ಹಣವನ್ನು ಪೂಜಿಸುತ್ತಿದೆ.

ಎಲ್ಲರೂ ಸಮಾಜದಲ್ಲಿ ಇರುವ ದೊಡ್ಡವರನ್ನು, ಅಧಿಕಾರ ಇರುವವರನ್ನು, ಹಣವಿರುವ ಶ್ರೀಮಂತರನ್ನು ಕರೆದು ವೇದಿಕೆಯ ಮೇಲೆ ಕೂರಿಸಿ ಪೂಜೆ ಮಾಡುತ್ತಿದ್ದಾರೆ. ಪ್ರಾಮಾಣಿಕರಿಗೆ ಬೆಲೆ ಇಲ್ಲ ಇಲ್ಲಿ. ಅವರಿಂದ ಏನೂ ಆಗಲ್ಲ ಎಂಬ ಭಾವನೆ ಮನೆಮಾಡಿದೆ. ಎಂದು ಸಮಾಜ ಇಂಥವರನ್ನು ಬಹಿಷ್ಕರಿಸುತ್ತದೋ ಅಂದು ನಾವು ಬದಲಾವಣೆಯನ್ನು ಕಾಣಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+