'ಆರ್ಟ್ ಆಫ್ ಲಿವಿಂಗ್ ರವಿಶಂಕರ್ ಬಂಧಿಸಿ': ಅಗ್ನಿ
ಬೆಂಗಳೂರು, ನ.4: ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ರವಿಶಂಕರ್ ಗುರೂಜಿಯನ್ನು ಕೂಡಲೇ ಬಂಧಿಸಬೇಕು, ಆಶ್ರಮದಿಂದ ನಡೆದಿರುವ ಭೂ ಒತ್ತುವರಿ ಕುರಿತಂತೆ ಸಿದ್ದರಾಮಯ್ಯ ಸರ್ಕಾರ ಸಮಗ್ರ ತನಿಖೆ ನಡೆಸಬೇಕು ಎಂದು 'ನ್ಯಾಯಕ್ಕಾಗಿ ನಾವು' ಸಮಿತಿಯ ಸಂಚಾಲಕ, ಪತ್ರಕರ್ತ ಅಗ್ನಿ ಶ್ರೀಧರ್ ಒತ್ತಾಯಿಸಿದ್ದಾರೆ
ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಗ್ನಿ ಶ್ರೀಧರ್ ಆವರು, ಆರ್ಟ್ ಆಫ್ ಲಿವಿಂಗ್ ಮೂಲಕ ಹಗಲು ದರೋಡೆ ಮಾಡಲಾಗುತ್ತಿದೆ. ಅಕ್ರಮವಾಗಿ ಭೂ ಒತ್ತುವರಿ ಮಾಡಿಕೊಂಡು ನಕಲಿ ದಾಖಲೆ ಸೃಷ್ಟಿಸಲಾಗಿದೆ. ಆರತಿ ಕೃಷ್ಣಾ ಎಂಬವರ ಸುಮಾರು 11 ಎಕರೆ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರಲ್ಲದೆ ಆಶ್ರಮದ ಸುತ್ತ ಮುತ್ತಲಿನ ಬಡರೈತರ ಜಮೀನುಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ರವಿಶಂಕರ್ ಗುರೂಜಿ ಅವರ ಹಿಂದೆ ಪ್ರಭಾವಿ ರಾಜಕಾರಣಿಗಳು, ಉನ್ನತ ಮಟ್ಟದ ಅಧಿಕಾರಿಗಳು, ವಿದೇಶಿ ವ್ಯಾಪಾರಸ್ಥರು, ಪ್ರಮುಖ ವಕೀಲರು ಹಾಗೂ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಗಣ್ಯಾತಿಗಣ್ಯರು ಬೆಂಬಲಕ್ಕಿದ್ದಾರೆ. ಹೀಗಾಗಿ ಅಕ್ರಮ ಎಸಗಿದರೂ ಬೆಳಕಿಗೆ ಬರುತ್ತಿಲ್ಲ ಎಂದರು.[50 ಕೋಟಿ ಪರಿಹಾರ ಕೋರಿ ಅಗ್ನಿಗೆ ನೋಟಿಸ್]
ರವಿಶಂಕರ್ ಗುರೂಜಿ ಆಶ್ರಮದಲ್ಲಿ ಅನೇಕ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿದ್ದು, ಸರಕಾರ ಸೂಕ್ತ ತನಿಖೆ ನಡೆಸಿ, ಸಮಾಜಕ್ಕೆ ಅಪಾಯವಾಗಿರುವ ರವಿಶಂಕರ್ ಸ್ವಾಮೀಜಿಯನ್ನು ಬಂಧಿಸಿ ಅವರನ್ನು ಗಡಿಪಾರು ಮಾಡಬೇಕು, ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ವಿವಿಧ ಸಂಘಟನೆಗಳು ಒಗ್ಗೂಡಿ ಪತ್ರಿಭಟನೆ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು. [ಶಾಲೆಯ ಶಿಕ್ಷಕನಿಂದ ಅನುಚಿತ ವರ್ತನೆ]
ಆಶ್ರಮದಲ್ಲಿ ಕಾನೂನುಬಾಹಿರ ಚಟುವಟಿಕೆಗಳು?
ರವಿಶಂಕರ್ ಗುರೂಜಿ ಆಶ್ರಮದಲ್ಲಿ ಅನೇಕ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿದ್ದು, ಸರ್ಕಾರ ಸೂಕ್ತ ತನಿಖೆ ನಡೆಸಿ, ಸಮಾಜಕ್ಕೆ ಅಪಾಯವಾಗಿರುವ ರವಿಶಂಕರ್ ಸ್ವಾಮೀಜಿಯನ್ನು ಬಂಧಿಸಿ ಅವರನ್ನು ಗಡಿಪಾರು ಮಾಡಬೇಕು, ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ವಿವಿಧ ಸಂಘಟನೆಗಳು ಒಗ್ಗೂಡಿ ಪತ್ರಿಭಟನೆ ಮಾಡಲಾಗುವುದು ಎಂದು ಅಗ್ನಿ ಶ್ರೀಧರ್ ಅವರು ಎಚ್ಚರಿಸಿದರು.
ಜಮೀನು ಸರ್ವೆ ಮಾಡಲು ಬಿಟ್ಟಿಲ್ಲ
ಜಮೀನು ನಿಯಮದ ಪ್ರಕಾರ (ಸರ್ವೇ ಸಂಖ್ಯೆ 70) ಜಮೀನಿನಲ್ಲಿ ಸರ್ವೇ ಮಾಡಲು ಹೋದವರನ್ನು ಗೇಟಿನ ಬಳಿಯೇ ನಿಲ್ಲಿಸಲಾಗಿದೆ. ರವಿಶಂಕರ್ ಗುರೂಜಿ ಬೆಂಬಲಿಗರು ಅಧಿಕಾರಿಗಳನ್ನು ಒಳಗಡೆ ಹೋಗಲು ಅವಕಾಶ ನೀಡಿಲ್ಲ ಎಂದು ಜಮೀನಿನ ಹೋರಾಟಗಾರ ಎಂ.ಕೃಷ್ಣಾ ತಿಳಿಸಿದ್ದಾರೆ. ಆಶ್ರಮದವರು ಭೂ ಒತ್ತುವರಿ ಮಾಡಿಲ್ಲವಾದರೆ ಭಯವೇಕೆ? ಅಧಿಕಾರಿಗಳನ್ನು ತಡೆಯುವುದು ಎಷ್ಟು ಸರಿ? ಎಂದು ಅಗ್ನಿ ಶ್ರೀಧರ್ ಪ್ರಶ್ನಿಸಿದ್ದಾರೆ.
ಭೂ ಒತ್ತುವರಿ ಆರೋಪ ಮಾಡಿದ ಆರತಿ
ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ ಅವರಿಂದ ಭೂ ಒತ್ತುವರಿಯಾಗಿದೆ. ನನಗೆ ಸೇರಿದ 11 ಎಕರೆ ಆಶ್ರಮದವರು ಬೇಲಿ ಹಾಕಿದ್ದಾರೆ ಎಂದು ವಾಷಿಂಗ್ಟನ್ ರಾಯಭಾರಿ ಕಚೇರಿಯ ನಿವೃತ್ತ ಅಧಿಕಾರಿ ಆರತಿ ಕೃಷ್ಣ ಅವರು ಆರೋಪಿಸಿದ್ದಾರೆ. ಈ ಬಗ್ಗೆ ಸ್ವತಃ ರವಿಶಂಕರ್ ಗುರೂಜಿ ಜೊತೆ ನಡೆಸಿದ ಸಂಭಾಷಣೆ ವಿವರಗಳನ್ನು ಟಿವಿ 9 ಇತ್ತೀಚೆಗೆ ಪ್ರಸಾರ ಮಾಡಿತ್ತು.
ಆರತಿ ಕೃಷ್ಣ ಅವರಿಗೆ ಸೇರಿರುವ ಜಮೀನಿನಲ್ಲಿ ಆರ್ಟ್ ಆಫ್ ಲಿವಿಂಗ್ ಆಶ್ರಮದವರು ಹೆಲಿಪ್ಯಾಡ್, 300 ಹವಾನಿಯಂತ್ರಿತ ಕೊಠಡಿ ನಿರ್ಮಾಣ ಹಾಗೂ 10ಸಾವಿರ ಮಂದಿ ಕುಳಿತುಕೊಳ್ಳುವ ಸ್ಟೇಡಿಯಂ ನಿರ್ಮಾಣ ಮಾಡಿದ್ದಾರೆ.ಅರತಿ ಕೃಷ್ಣ ಅವರು ಭೋಗ್ಯಕ್ಕೆ ಕೊಟ್ಟ ಭೂಮಿ
1985ರಲ್ಲಿ ಕನಕಪುರ ರಸ್ತೆ ಫಾರಂಹೌಸ್ ಬಳಿ 18 ಎಕರೆ ಜಮೀನನ್ನು ಕೈಗಾರಿಕಾ ಸ್ಥಾಪನೆಗಾಗಿ ಖರೀದಿ ಮಾಡಲಾಗಿತ್ತು. ಅಗರದಲ್ಲಿರುವ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (ಕೆಎಸ್ಎಫ್ ಸಿ)ಯಲ್ಲಿ ಸಾಲ ಪಡೆಯಲಾಗಿತ್ತು. 1998ರಲ್ಲಿ ತಾವು ಕಾರ್ಯನಿಮಿತ್ತ ಅಮೆರಿಕಕ್ಕೆ ತೆರಳಿದ್ದ ವೇಳೆ 2001ರ ನಂತರ ಕೈಗಾರಿಕೆ ಸ್ಥಾಪನೆ ಸ್ಥಗಿತಗೊಂಡಿತ್ತು.
ಈ ಸಂದರ್ಭದಲ್ಲಿ ಆಶ್ರಮಕ್ಕೆ ರಸ್ತೆ ಸಂಪರ್ಕಿಸಲು ತಮಗೆ ಒಂದಿಷ್ಟು ಜಾಗ ನೀಡಬೇಕೆಂದು ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ ಮನವಿ ಮಾಡಿದ್ದರು. ಮಾನವೀಯತೆ ದೃಷ್ಟಿಯಿಂದ ನಮ್ಮ ಜಮೀನಿನ ಜಾಗವನ್ನು ಭೋಗ್ಯಕ್ಕೆ ನೀಡಿದ್ದೆವು. ಆದರೆ, ಈಗ ನಮ್ಮ ಜಮೀನಿನ ಭಾಗವನ್ನು ಹಸ್ತಾಂತರ ಮಾಡದೆ ಅತಿಕ್ರಮವಾಗಿ ಬೇಲಿ ಹಾಕಿಕೊಂಡು ಭೂ ಒತ್ತುವರಿ ಮಾಡಿದ್ದಾರೆ ಎಂದು ಅರತಿ ಅವರು ವಿವರಿಸಿದ್ದಾರೆ.