ಜೆಡಿಎಸ್ ಕಾರ್ಯಕರ್ತರಿಂದ ಸಚಿವರ 'ಕತ್ತೆ' ಮೆರವಣಿಗೆǃ
ಬೆಂಗಳೂರು, ಅ.29: ಜನಪ್ರತಿನಿಧಿಗಳನ್ನು ಕತ್ತೆಗೆ ಹೋಲಿಸಿ ಹೇಳಿಕೆ ನೀಡಿದ್ದ ಸಚಿವರಾದ ಎಚ್.ಆಂಜನೇಯ ಹಾಗೂ ಶಿವರಾಜ್ ತಂಗಡಗಿ ಕ್ರಮ ಖಂಡಿಸಿ ಬಿಬಿಎಂಪಿ ಜೆಡಿಎಸ್ ಯುವ ಘಟಕ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಆನಂದರಾವ್ ವೃತ್ತದ ಬಳಿಯಿರುವ ಮಹಾತ್ಮಗಾಂಧಿ ಪ್ರತಿಮೆ ಬಳಿ ಎರಡು ಜೀವಂತ ಕತ್ತೆಗಳಿಗೆ ಸಚಿವ ಆಂಜನೇಯ ಹಾಗೂ ಶಿವರಾಜ್ ತಂಗಡಗಿ ಅವರ ಭಾವಚಿತ್ರ ಹಾಕಿ ವಿನೂತನ ಮೆರವಣಿಗೆ ಮಾಡಲಾಯಿತು. ಬಿಬಿಎಂಪಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ಯುವ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.[ಶಂಕರ ಬಿದರಿ ಮಾತಿಗೆ ಕುಮಾರಣ್ಣ ಸಾಥ್]
ಕಾಂಗ್ರೆಸ್ ಹೆಸರಿನಲ್ಲಿ ಕತ್ತೆ ನಿಲ್ಲಿಸಿದರೂ ಗೆಲ್ಲುತ್ತದೆ ಎಂದು ಈ ಸಚಿವದ್ವಯರು ಹೇಳಿಕೆ ನೀಡಿ ಶಾಸಕರನ್ನು ಅಪಮಾನಿಸಿದ್ದಾರೆ. ಕಾಂಗ್ರೆಸ್ ನಿಂದ ಗೆದ್ದು ಸಚಿವರಾಗಿರುವ ಇವರು ಹಾಗಾದರೆ ಕತ್ತೆಗಳೇ? ಎಂದು ರಮೇಶ್ ಗೌಡ ಪ್ರಶ್ನಿಸಿದರು. ದೇಶಾದ್ಯಂತ ಕಾಂಗ್ರೆಸ್ ನೆಲಕಚ್ಚಿದ್ದರೂ ಇಂಥ ಹೇಳಿಕೆ ನೀಡುತ್ತಿದ್ದಾರೆ. ತಕ್ಷಣವೇ ಇಬ್ಬರು ಸಚಿವರು ಜನರ ಮತ್ತು ಜನಪ್ರತಿನಿಧಿಗಳ ಕ್ಷಮೆ ಕೋರಬೇಕೆಂದು ಆಗ್ರಹಿಸಿದರು.[ಗೌಡರ ಕುಟುಂಬ ಗಾಜಿನ ಮನೆಯಲ್ಲಿಲ್ಲ, ಬೀದಿಯಲ್ಲಿದೆ!]
ಮೆರವಣಿಗೆಯಲ್ಲಿ ನೂರಾರು ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದ್ದರು.