30 ಲಕ್ಷ ಬಡ ಕನ್ನಡಿಗರಿಗೇ ಸೂರಿಲ್ಲ, ಅಕ್ರಮ ವಲಸಿಗರಿಗೆ ₹11 ಲಕ್ಷದ ಮನೆ: ಜೆಡಿಎಸ್ ಆಕ್ಷೇಪ
ಕೋಗಿಲು ಬಳಿ ಅಕ್ರಮ ಕಟ್ಟಡಗಳ ಒತ್ತುವರಿ ತೆರವು ಮಾಡಿದ ಬಳಿಕ ಆ ಕುಟುಂಬಗಳಿಗೆ ರಾಜ್ಯ ಸರ್ಕಾರವೇ ಮನೆ ಹಂಚಿಕೆ ಮಾಡಲು ಮುಂದಾಗಿದೆ. ಇದಕ್ಕೆ ವಿಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ ನಾಯಕರಿಂದ ಆಕ್ಷೇಪ ವ್ಯಕ್ತವಾಗುತ್ತಿದೆ. 'ವಸತಿ ರಹಿತ ಕನ್ನಡಿಗರಿಗೆ ಮಿಡಿಯದ ಮಾನವೀಯತೆ, ಕೇರಳದ ಅಕ್ರಮ ವಲಸಿಗರಿಗೆ ಮಿಡಿಯುತ್ತಿರುವ ಇಬ್ಭಗೆಯ ನೀತಿಗೆ ಧಿಕ್ಕಾರವಿರಲಿ' ಎಂದು ಜೆಡಿಎಸ್ ಎಕ್ಸ್ ಪೋಸ್ಟ್ನಲ್ಲಿ ಟೀಕಿಸಿದೆ.
'ಇದೊಂದು ಪ್ರಕರಣಕ್ಕೆ ಮಾತ್ರ ಸೀಮಿತ ಎಂದು ತಿಪ್ಪೇಸಾರುವ ಕೇರಳಿಗರ ಚೇಟಾ ಸಿದ್ದರಾಮಯ್ಯ ಅವರು, ವಸತಿ ರಹಿತ ಕನ್ನಡಿಗರಿಗೆ ಮಿಡಿಯದ ಮಾನವೀಯತೆ, ಕೇರಳದ ಅಕ್ರಮ ವಲಸಿಗರಿಗೆ ಮಿಡಿಯುತ್ತಿರುವ ನೀತಿಗೆ ಧಿಕ್ಕಾರವಿರಲಿ. ಹೈಕಮಾಂಡ್ ಆರ್ಡರ್ ಅನ್ನು ತಲೆಬಾಗಿ, ಕುರ್ಚಿ ಕಳೆದುಕೊಳ್ಳುವ ಭೀತಿಯಲ್ಲಿ ಅಕ್ರಮ ವಲಸಿಗರ ಪರವಾಗಿ, ತರಾತುರಿಯಲ್ಲಿ ಸಭೆಗಳನ್ನು ನಡೆಸಿ ಆದೇಶ ಹೊರಡಿಸಿ, ವಸತಿ ರಹಿತ ಕನ್ನಡಿಗರಿಗೆ ಬಗೆದ ವಿಶ್ವಾಸದ್ರೋಹವಲ್ಲವೇ?' ಎಂದು ಪ್ರಶ್ನಿಸಿದೆ.

'ಕರ್ನಾಟಕದಲ್ಲಿ ಸುಮಾರು 30 ಲಕ್ಷಕ್ಕೂ ಹೆಚ್ಚು ವಸತಿರಹಿತ ಬಡ ಕನ್ನಡಿಗರಿಗೆ ಸೂರಿಲ್ಲ. ವಸತಿ ಇಲಾಖೆಯ ಮನೆ ಹಂಚಿಕೆಗಾಗಿ ಅರ್ಜಿ ಸಲ್ಲಿಸಿ, ಲಕ್ಷಾಂತರ ಜನರು ಹಗಲು ರಾತ್ರಿ ದುಡಿದ ಹಣವನ್ನು ಮುಂಗಡ ಕಟ್ಟಿ, ವರ್ಷಾನುಗಟ್ಟಲೇ ಇನ್ನೂ ಕಾಯುತ್ತಿದ್ದಾರೆ. ಇಂತಹ ನಿರ್ಗತಿಕರಿಗೆ ಮನೆಗಳನ್ನು ನೀಡುವ ಮನಸ್ಸು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ' ಎಂದು ದೂರಿದೆ.
ಒಂದು ಸಮುದಾಯದ ಓಲೈಕೆ
ವೋಟ್ ಬ್ಯಾಂಕ್ಗಾಗಿ ಒಂದು ಸಮುದಾಯದ ಓಲೈಕೆ ಮಾಡುತ್ತಿರುವ ಕಾಂಗ್ರೆಸ್ ಪಕ್ಷ, ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಕನ್ನಡಿಗರ ತೆರಿಗೆ ಹಣದಲ್ಲಿ ವಲಸಿಗರಿಗೆ 11.20 ಲಕ್ಷ ರೂಪಾಯಿ ವೆಚ್ಚದ ಮನೆಗಳನ್ನು ನೀಡಿ, ರಾಜ ಮಾರ್ಯಾದೆ ಕೊಡುತ್ತಿರುವುದು ರಾಜ್ಯದ ಜನರಿಗೆ ಮಾಡುತ್ತಿರುವ ವಂಚನೆ ಎಂದು ಆರೋಪಿಸಿದೆ.

ಹೈಕಮಾಂಡ್ನ ತೊಗಲುಗೊಂಬೆಯಾದ ಕಾಂಗ್ರೆಸ್ ಸರ್ಕಾರ, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರನ್ನು ಹೈಕಮಾಂಡ್ ತನ್ನ ಕೈಗೊಂಬೆಯಾಗಿಸಿಕೊಂಡು ಆಟವಾಡಿಸುತ್ತಿದೆ. ಕೇರಳದ ಅಕ್ರಮ ವಲಸಿಗರಿಗೆ ಬೆಂಗಳೂರಿನಲ್ಲಿ 11.20 ಲಕ್ಷ ರೂ. ಮೌಲ್ಯದ ಮನೆ ಗ್ಯಾರಂಟಿ. ಕೇರಳದ ವಯನಾಡಿನ ಸಂತ್ರಸ್ತರಿಗೆ 10 ಕೋಟಿ ರೂ. ವೆಚ್ಚದಲ್ಲಿ 100 ಮನೆ. ಆನೆದಾಳಿಗೆ ಬಲಿಯಾದ ಕೇರಳದ ವ್ಯಕ್ತಿಗೆ 15 ಲಕ್ಷ ರೂಪಾಯಿ ಪರಿಹಾರ ನೀಡುವ ಮೂಲಕ ಕನ್ನಡಿಗರ ವಿರೋಧಿ ಕಾಂಗ್ರೆಸ್ನಿಂದ ರಾಜ್ಯದ ಜನತೆಗೆ ನಿರಂತರ ಅನ್ಯಾಯವಾಗುತ್ತಿದೆ ಎಂದು ಖಂಡಿಸಿದೆ.
ಅಕ್ರಮ ಶೆಡ್ ಭಾಗ್ಯ
ರಾಜ್ಯದಲ್ಲಿ ಅಕ್ರಮ ಶೆಡ್ ಭಾಗ್ಯ ಎನ್ನುವ ಹೊಸ ಸ್ಕೀಮ್ ಶುರುವಾಗಿದೆ ಎಂದು ಬಿಜೆಪಿ ಕೂಡ ವ್ಯಂಗ್ಯವಾಡಿದೆ. ನಿಯತ್ತಿನಿಂದ ಅರ್ಜಿ ಹಾಕಿ ಕಾಯುವ ಬಡ ಕನ್ನಡಿಗರಿಗೆ ಸರ್ಕಾರಿ ಕಚೇರಿಯಲ್ಲಿ ಅಲೆದಾಟ. ಆದರೆ, ಸರ್ಕಾರಿ ಜಾಗ ಕಬಳಿಸಿ ಶೆಡ್ ಹಾಕಿದವರಿಗೆ 2 ದಿನದಲ್ಲಿ ₹11.20 ಲಕ್ಷದ ಫ್ಲಾಟ್ ಉಚಿತ. ಕಾನೂನು ಪಾಲಿಸುವುದು ತಪ್ಪಾ ಸಿದ್ದರಾಮಯ್ಯನವರೇ? ಎಂದು ಕೇಳಿದೆ. ರಾಜ್ಯದ ಬಡವರು ಸೂರಿಲ್ಲದೆ ಸೊರಗುತ್ತಿದ್ದಾರೆ. ರಾಜ್ಯದ ಬಡವರ ಬಗ್ಗೆ ಕಾಳಜಿ ವಹಿಸದ ಸಿದ್ದರಾಮಯ್ಯ ಸರ್ಕಾರ, ಅಕ್ರಮ ವಲಸಿಗರಿಗೆ ಮನೆ ಕೊಡಲು ಮುಂದಾಗಿರುವುದು ದುರಂತವೇ ಸರಿ ಎಂದು ಹೇಳಿದೆ.
ರಾಜ್ಯದಲ್ಲಿ ಹೊಸ ಸ್ಕೀಮ್ ಶುರುವಾಗಿದೆ - "ಅಕ್ರಮ ಶೆಡ್ ಭಾಗ್ಯ"!
— BJP Karnataka (@BJP4Karnataka) December 30, 2025
ನಿಯತ್ತಿನಿಂದ ಅರ್ಜಿ ಹಾಕಿ ಕಾಯುವ ಬಡ ಕನ್ನಡಿಗರಿಗೆ ಸರ್ಕಾರಿ ಕಚೇರಿಯಲ್ಲಿ ಅಲೆದಾಟ. ಆದರೆ, ಸರ್ಕಾರಿ ಜಾಗ ಕಬಳಿಸಿ ಶೆಡ್ ಹಾಕಿದವರಿಗೆ 2 ದಿನದಲ್ಲಿ ₹11.20 ಲಕ್ಷದ ಫ್ಲಾಟ್ ಉಚಿತ! ಕಾನೂನು ಪಾಲಿಸುವುದು ತಪ್ಪಾ @siddaramaiah ನವರೇ? #AkramaBhagya #Appeasement pic.twitter.com/Nj73QEhRr6
ರಾಜ್ಯದಲ್ಲಿ ಅರ್ಜಿ ಹಾಕಿ ಎಷ್ಟೋ ವರ್ಷಗಳಿಂದ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಕನ್ನಡಿಗರಿಗೆ ಮನೆ ಸಿಗುತ್ತಿಲ್ಲ. ಆದರೆ ಕೋಗಿಲು ಬಡಾವಣೆಯ ಅಕ್ರಮ ವಲಸಿಗರಿಗೆ ಕಾಂಗ್ರೆಸ್ ತರಾತುರಿಯಲ್ಲಿ ಮನೆ ಕೊಡುವ ಔಚಿತ್ಯವೇನಿದೆ? ಮತ ಬ್ಯಾಂಕ್ಗಾಗಿ ಇಲ್ಲಿ ತೆರವುಗೊಳಿಸುವ ಮೊದಲೇ ಅವರಿಗಾಗಿ ಬದಲಿ ಮನೆ ಸಿದ್ಧ ಮಾಡಿಡಲಾಗಿತ್ತೇ? ನಾಡಿನ ಬಡ ಜನರಿಗೆ ಸಿಗಬೇಕಾದ ಮನೆಗಳು ಅನ್ಯ ರಾಜ್ಯದ ಅಕ್ರಮ ವಲಸಿಗರಿಗೆ ನೀಡುತ್ತಿರುವುದು ಖಂಡನೀಯ. ಈ ನಾಡದ್ರೋಹಿ ನಿರ್ಧಾರವನ್ನು ರಾಜ್ಯದ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿದೆ.












Click it and Unblock the Notifications