ಶ್ರೀರಂಪಟ್ಟಣದಿಂದ-ಬೆಂಗಳೂರಿಗೆ ಎಚ್ಡಿಕೆ ಪಾದಯಾತ್ರೆ
ಬೆಂಗಳೂರು, ಅ.8 : ಕಾಂಗ್ರೆಸ್ ಸರ್ಕಾರದ ವಿರುದ್ಧ ಮೊದಲ ಹೋರಾಟ ನಡೆಸಲು ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಸಿದ್ಧವಾಗಿದ್ದಾರೆ. ಕಾಲುಬಾಯಿ ರೋಗದಿಂದ ಸಾವನ್ನಪ್ಪಿರುವ ಜಾನುವಾರು ಪರಿಹಾರ ನೀಡುವಂತೆ ಒತ್ತಾಯಿಸಿ ಅ.16ರಿಂದ ಪಾದಯಾತ್ರೆ ನಡೆಸುವುದಾಗಿ ಘೊಷಿಸಿದ್ದಾರೆ.
ವಿಧಾನಸೌಧದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಎಚ್.ಡಿ.ಕುಮಾರಸ್ವಾಮಿ, ರಾಜ್ಯದಲ್ಲಿ ಕಾಲುಬಾರಿ ಜ್ವರದಿಂದ ಮೃತಪಟ್ಟಿರುವ ಹಸುಗಳಿಗೆ ಸರ್ಕಾರ ಅ.15ರೊಳಗೆ ತಲಾ 25 ಸಾವಿರ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಅ.16ರಿಂದ ಹಸುಗಳಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ, ಶ್ರೀರಂಗಪಟ್ಟಣದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡುವುದಾಗಿ ಅವರು ಹೇಳಿದ್ದಾರೆ. ಜೆಡಿಎಸ್ ಪಕ್ಷದಿಂದ ಪ್ರತಿ ಹಸುಗಳಿಗೆ 5 ಸಾವಿರ ಪರಿಹಾರ ನೀಡುವುದಾಗಿ ಅವರು ಘೋಷಿಸಿದ್ದಾರೆ.
ಕಾಲುಬಾಯಿ ರೋಗದಿಂದ ರಾಜ್ಯದಲ್ಲಿ ಇದುವರೆಗೂ 2 ಸಾವಿರಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ. ರಾಮನಗರ, ಮಂಡ್ಯ ಮತ್ತು ಕೋಲಾರ ಜಿಲ್ಲೆಯಲ್ಲಿ ರೋಗ ತೀವ್ರವಾಗಿ ವ್ಯಾಪಿಸುತ್ತಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಕಾಲುಬಾಯಿ ರೋಗ ಕಾಣಿಸಿಕೊಂಡ ತಕ್ಷಣ ಆ ಬಗ್ಗೆ ಎಚ್ಚೆತ್ತು ದನಕರುಗಳಿಗೆ ಲಸಿಕೆ ಹಾಕುವ, ಹಸುಗಳು ಸಾವನ್ನಪ್ಪಿದರೆ, ಅಂತಹ ಕುಟುಂಬಕ್ಕೆ 25 ಸಾವಿರ ರೂ. ಪರಿಹಾರ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಆದರೆ, ಪರಿಹಾರ ಘೋಷಣೆ ಮಾಡಿಲ್ಲ ಎಂದು ದೂರಿದರು.
ರಾಜ್ಯದಲ್ಲಿ 1.40 ಕೋಟಿ ಜಾನುವಾರುಗಳಿದ್ದು, ಒಂದು ಕೋಟಿ ಜಾನುವಾರುಗಳಿಗಷ್ಟೇ ಲಸಿಕೆ ಹಾಕಲಾಗಿದೆ. ಲಸಿಕೆ ಕಳಪೆಯಾಗಿದ್ದು ಇದರಿಂದ ರೋಗ ಕೂಡ ನಿಯಂತ್ರಣವಾಗುತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. (ರಾಮನಗರ : ಹಸುಗಳ ಸಾವು, ಜನರಿಗೆ ಸಂಕಷ್ಟ)
ಕಾಲುಬಾಯಿ ರೋಗದಿಂದ ದನ-ಕರು ಸತ್ತಿರುವ ಕಾರಣಕ್ಕೆ ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ರೈತರಿಗೆ ಆತ್ಮಸ್ಥೈರ್ಯ ತುಂಬಲು ಜೆಡಿಎಸ್ ಪ್ರತಿ ಜಾನುವಾರುಗಳ ಸಾವಿಗೆ 5 ಸಾವಿರ ರೂ. ಪರಿಹಾರ ನೀಡಲಿದೆ ಎಂದು ತಿಳಿಸಿದರು.












Click it and Unblock the Notifications