ಕೊರೊನಾದಿಂದ ಮೃತಪಟ್ಟ ಪೊಲೀಸರಿಗೆ 1 ಕೋಟಿ ಪರಿಹಾರಕ್ಕೆ ಒತ್ತಾಯ
ಬೆಂಗಳೂರು, ಜುಲೈ 7: ಕೊರೊನಾ ವೈರಸ್ ಹೋರಾಟದಲ್ಲಿ ಪೊಲೀಸ್ ಇಲಾಖೆಯ ಕರ್ತವ್ಯ ಬಹಳ ಪ್ರಮುಖವಾಗಿದೆ. ಲಾಕ್ಡೌನ್ ಅಂತಹ ಸಂದರ್ಭದಲ್ಲಿ ರಾತ್ರಿ-ಹಗಲು ಎನ್ನದೇ ಮನೆ, ಕುಟುಂಬ ಬಿಟ್ಟು ಕೆಲಸ ಮಾಡುತ್ತಿದ್ದಾರೆ.
ಹಾಗಾಗಿ, ಕೊರೊನಾದಿಂದ ಮೃತಪಟ್ಟ ಪೊಲೀಸರಿಗೆ 1 ಕೋಟಿ ರೂ ಪರಿಹಾರ ನೀಡುವಂತೆ ದಾಸರಹಳ್ಳಿ ಜೆಡಿಸ್ ಶಾಸಕ ಆರ್.ಮಂಜುನಾಥ್ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಸೋಂಕಿಗೆ ಒಳಗಾಗಿ ಮೃತಪಟ್ಟರೆ 1 ಕೋಟಿ ಹಾಗೂ ಕೊವಿಡ್ ಪೀಡಿತ ಪೊಲೀಸರಿಗೆ 5 ಲಕ್ಷ ರೂ ಪರಿಹಾರ ನೀಡುವಂತೆ ಶಾಸಕ ಆರ್.ಮಂಜುನಾಥ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಈ ಹಿಂದೆ ಕರ್ನಾಟಕದಲ್ಲಿ ಕೊವಿಡ್ ಸೋಂಕಿನಿಂದ ಮೃತಪಟ್ಟ ಪೊಲೀಸರ ಕುಟುಂಬಕ್ಕೆ 30 ಲಕ್ಷ ಘೋಷಣೆ ಮಾಡಿತ್ತು ರಾಜ್ಯ ಸರ್ಕಾರ. ಆದರೆ, ಸೋಂಕಿನಿಂದ ಮೃತಪಟ್ಟ ಕುಟುಂಬಕ್ಕೆ ತಲಾ ಒಂದು ಕೋಟಿ ನೀಡುವಂತೆ ಶಾಸಕರು ಮನವಿ ಮಾಡಿದ್ದಾರೆ.
'ಈವರೆಗೂ ರಾಜ್ಯದಲ್ಲಿ 5 ಜನ ಪೊಲೀಸರು ಮೃತಪಟ್ಟಿದ್ದು 450ಕ್ಕೂ ಹೆಚ್ಚು ಪೊಲೀಸರು ಕೋವಿಡ್ನಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪೊಲೀಸರನ್ನು ನಂಬಿದ ಕುಟುಂಬ ಹಾಗೂ ಪೋಷಕರನ್ನು ಗಮನದಲ್ಲಿರಿಸಿಕೊಂಡು ಸರ್ಕಾರ ಕನಿಷ್ಡ 5 ಲಕ್ಷ ಪರಿಹಾರ ನೀಡವಂತೆ' ಮಾಜಿ ಪೊಲೀಸ್ ಅಧಿಕಾರಿಯಾಗಿರುವ ಶಾಸಕ ಮಂಜುನಾಥ್ ಮುಖ್ಯಮಂತ್ರಿಗೆ ಒತ್ತಾಯ ಮಾಡಿದ್ದಾರೆ.

ಅಂದ್ಹಾಗೆ, ಕೊರೊನಾ ವೈರಸ್ ವಿರುದ್ಧ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮೃತಪಟ್ಟ ಪೊಲೀಸ್ ಕಾನ್ಸ್ ಟೇಬಲ್ಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಒಂದು ಕೋಟಿ ಪರಿಹಾರ ಘೋಷಿಸಿದ್ದರು.
ತಮಿಳುನಾಡಿನಲ್ಲಿ ಕೊವಿಡ್ ಹೋರಾಟಗಾರರು (ವೈದ್ಯರು, ಪೊಲೀಸ್, ಪೌರಕಾರ್ಮಿಕರು ಸೇರಿದಂತೆ) ಮೃತಪಟ್ಟರೆ ಕುಟುಂಬಕ್ಕೆ 50 ಲಕ್ಷ ಹಣ ಹಾಗೂ ಸರ್ಕಾರಿ ಉದ್ಯೋಗ ನೀಡುವುದಾಗಿ ಘೋಷಣೆ ಮಾಡಿದ್ದರು.












Click it and Unblock the Notifications