ಸ್ವಂತ ಶಕ್ತಿಯಿಂದಲೇ ಅಧಿಕಾರಕ್ಕೆ: ಕುಮಾರಸ್ವಾಮಿ ವಿಶ್ವಾಸ
ಬೆಂಗಳೂರು, ಡಿಸೆಂಬರ್ 06 : ಚುನಾವಣೆಯಲ್ಲಿ ಹಿನ್ನಡೆಯಾಗಲು ಕಾರಣವಾದ ಅಂಶಗಳ ಪಟ್ಟಿ ಮಾಡಿಕೊಂಡಿದ್ದೇವೆ. 105 ಕ್ಷೇತ್ರದಲ್ಲಿ 70ರಿಂದ 80 ಸ್ಥಾನ ಗೆಲ್ಲಲೇಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿ ಬುಧವಾರ ಮಾತನಾಡಿದ ಅವರು, ಇಪ್ಪತ್ತರಿಂದ ಮೂವತ್ತು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪೈಪೋಟಿ ಇದೆ. ಅಂತಹ ಕಡೆ ಆಕಾಂಕ್ಷಿಗಳ ನಡುವೆ ಸೌಹಾರ್ದತೆ ಮೂಡಿಸಬೇಕು. ಕಳೆದ ಬಾರಿ ಆದ ತಪ್ಪುಗಳು ಮರುಕಳಿಸಬಾರದು ಎಂದರು.
ಡಿಸೆಂಬರ್ 15ರಂದು ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
ಹಾಗಾಗಿ ಎ, ಬಿ, ಸಿ ಕೆಟಗರಿ ಅಂತಾ ಮಾಡಿಕೊಂಡಿದ್ದೇವೆ ಈ ಬಾರಿ ನಾವು ಕಷ್ಟಪಡದೇ ಇದ್ದರೂ ಅರವತ್ತರಿಂದ ಎಪ್ಪತ್ತು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಆದರೆ ಸರ್ಕಾರ ರಚನೆಗೆ ಬೇಕಾದ ಸಂಖ್ಯೆ ತಲುಪುವುದು ನಮ್ಮ ಗುರಿ. 114 ಸ್ಥಾನ ಗೆದ್ದರಷ್ಟೇ ರಾಜ್ಯಪಾಲರು ನಮಗೆ ಅವಕಾಶ ನೀಡುತ್ತಾರೆ ಎಂದು ಅವರು ನುಡಿದರು.
ಬೇರೆ ಪಕ್ಷದ ಬಾಗಿಲು ತಟ್ಟಲು ನಮಗೆ ಇಷ್ಟ ಇಲ್ಲ. ಸಮ್ಮಿಶ್ರ ಸರ್ಕಾರ ಬಂದರೆ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿನ ಕಾರ್ಯಕ್ರಮಗಳನ್ನು ಜಾರಿ ತರೋದು ಕಷ್ಟ. ಗುಜರಾತ್ ಚುನಾವಣೆ ಫಲಿತಾಂಶದ ನಂತರ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ಫಲಿತಾಂಶದ ನಂತರ ರಾಷ್ಟ್ರೀಯ ಪಕ್ಷಗಳಿಂದ ಹಲವರು ಜೆಡಿಎಸ್ ಸೇರಬಹುದು ಎಂದು ಅವರು ಭವಿಷ್ಯ ನುಡಿದರು.
ಕಳೆದ ಹತ್ತು ವರ್ಷಗಳಲ್ಲಿ ಎರಡು ಸಾರ್ವತ್ರಿಕ ಚುನಾವಣೆ ಎದುರಿಸಿದ್ದೇನೆ. ಲೋಪದೋಷ ಹಾಗೂ ಅನುಭವದ ಆಧಾರದಲ್ಲಿ ವಿಂಗಡಣೆ ಕನಿಷ್ಟ 70-80 ಕ್ಷೇತ್ರಗಳಲ್ಲಿ ಗೆಲ್ಲಬೇಕು. ಸುಲಭವಾಗಿ 30 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕುತ್ತೇವೆ ಎಂದು ಎಚ್ಡಿಕೆ ವಿವರಿಸಿದರು.
ದೇವೇಗೌಡರ ಕುಟುಂಬದಿಂದ ಚುನಾವಣೆಗೆ ಇಳಿಯೋದು ಇವರಿಬ್ಬರೆ
ಆದರೆ ಎಲ್ಲ ಕಡೆ ಗೆಲ್ಲಲು ಸಾಧ್ಯವಿಲ್ಲ. 113 ಸೀಟು ಗೆಲ್ಲುವ ಗುರಿ ಇದೆ, ಹಾಗಾದ್ರೆ ಮಾತ್ರ ರಾಜ್ಯಪಾಲರು ನಮಗೆ ಗೇಟ್ ಓಪನ್ ಮಾಡ್ತಾರೆ. ಇಲ್ಲವಾದ್ರೆ ಬೇರೆ ಪಕ್ಷದ ಬಾಗಿಲಿಗೆ ಹೋಗುವ ಸ್ಥಿತಿ ಬರುತ್ತದೆ ಎಂದು ಕುಮಾರಸ್ವಾಮಿ ವಾಸ್ತವವನ್ನು ತೆರೆದಿಟ್ಟರು.
ಉತ್ತರ ಕರ್ನಾಟಕದಲ್ಲಿ ಪಕ್ಷ ದುರ್ಬಲ ಇರೋದು ನಿಜ. ಆದರೆ ಹಳೆ ಮೈಸೂರು ಭಾಗದಲ್ಲಿ ಗರಿಷ್ಠ ಸೀಟು ಗೆಲ್ಲುತ್ತೇವೆ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ನಮ್ಮ ಸ್ಥಿತಿ ಉತ್ತಮ ಇದೆ. ಹಾವೇರಿ, ಗದಗ ಸೇರಿ ಮುಂಬೈ ಕರ್ನಾಟಕ ಭಾಗದಲ್ಲಿ ಸಾಕಷ್ಟು ದುರ್ಬಲ ಇದೆ. ಬಲಪಡಿಸುವ ನಿಟ್ಟಿನಲ್ಲಿ ಹೆಚ್ಚಿನ ಶ್ರಮ ಹಾಕುತ್ತೇವೆ ಎಂದು ವಿವರಿಸಿದರು.