ಜಯನಗರ ಬಿಜೆಪಿ ಶಾಸಕ ವಿಜಯ್ ಕುಮಾರ್(60) ವಿಧಿವಶ
Recommended Video

ಬೆಂಗಳೂರು, ಮೇ 4 : ಜಯನಗರದ ಜನಪ್ರಿಯ ಶಾಸಕ, ಬಿಜೆಪಿ ನಾಯಕ ಬಿಎನ್ ವಿಜಯ್ ಕುಮಾರ್ (60) ಅವರು ಶುಕ್ರವಾರ ಬೆಳಗಿನ ಜಾವ 1 ಗಂಟೆಗೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ಇತ್ತೀಚೆಗೆ ಅವರಿಗೆ ಸ್ಟಂಟ್ ಅಳವಡಿಸಲಾಗಿತ್ತು. ಗುರುವಾರ ಚುನಾವಣೆಗೆ ಪ್ರಚಾರ ಮಾಡುತ್ತಿದ್ದಾಗಲೇ ಅವರು ಹೃದಯಾಘಾತಕ್ಕೆ ಒಳಗಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಜಯದೇವ ಆಸ್ಪತ್ರೆಯಲ್ಲಿ ಸಾವನಪ್ಪಿದ್ದರು ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್ ಹೇಳಿದ್ದಾರೆ.
ಹಲವು ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಜಯನಗರ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿದ್ದರು. ನಿನ್ನೆ ಚುನಾವಣೆ ಪ್ರಚಾರ ವೇಳೆ ಕುಸಿದು ಬಿದ್ದರು. ಕೂಡಲೇ ಜಯದೇವ ಆಸ್ಪತ್ರೆಗೆ ದಾಖಲಿಸಿಲಾಯಿತು. ಆಸ್ಪತ್ರೆ ಕರೆತಂದಾಗಲೇ ಹೃದಯ ಬಡಿತ, ಬಿಪಿ ಕುಸಿತ ಕಂಡಿತ್ತು.
ಚಿತ್ರಗಳಲ್ಲಿ: ಸಜ್ಜನ ರಾಜಕಾರಣಿ ವಿಜಯಕುಮಾರ್ ಗೆ ಅಂತಿಮ ನಮನ

ಅವರಿಗೆ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸೂಚಿಸಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದ ಅವರಿಗೆ ಕಾರ್ಯಕರ್ತರು ಕೂಡ, ನಿಮ್ಮ ಪರವಾಗಿ ನಾವು ಸುತ್ತಾಡುತ್ತೇವೆ ಎಂದು ಹೇಳಿದ್ದರೂ ಲೆಕ್ಕಿಸದೆ ತಾವೇ ಸ್ವತಃ ಜಯನಗರವನ್ನು ಸುತ್ತುತ್ತ ಮತ ಯಾಚನೆ ಮಾಡುತ್ತಿದ್ದರು. ಪ್ರಚಾರ ಮಾಡುತ್ತಿರುವಾಗಲೇ ಅವರು ಕುಸಿದುಬಿದ್ದಿದ್ದಾರೆ.
ಮುಗಿಲು ಮುಟ್ಟಿದ ಆಕ್ರಂದನ : ವಿಜಯ್ ಕುಮಾರ್ ಅವರ ಪಾರ್ಥೀವ ಶರೀರವನ್ನು ಜಯನಗರ 4ನೇ ಬ್ಲಾಕ್ ನಲ್ಲಿರುವ ಅವರ ನಿವಾಸಕ್ಕೆ ತರಲಾಗಿದ್ದು, ಮನೆಮಂದಿ ಮತ್ತು ಅಲ್ಲಿ ಸೇರಿರುವ ಸಾವಿರಾರು ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದೆ. ವಿಜಯ್ ಕುಮಾರ್ ಅಮರ್ ರಹೇ ಎಂಬ ಕೂಗು ಮುಗಿಲು ಮುಟ್ಟಿದೆ.

ಜನಾನುರಾಗಿ ನಾಯಕ : ಯಾವುದೇ ಸಮಯದಲ್ಲಿ ಫೋನ್ ಮಾಡಿದರೂ ತಾವೇ ಸ್ವತಃ ತೆಗೆದುಕೊಂಡು ಮಾತನಾಡುವಂಥ ಸ್ವಭಾವ ಅವರದಾಗಿತ್ತು. ಕರೆ ಸ್ವೀಕರಿಸದ ಸಂದರ್ಭದಲ್ಲಿ ಅವರೇ ಮೆಸೇಜ್ ಮಾಡುತ್ತಿದ್ದರು. ಅವರ ಕಚೇರಿಗೆ ನೇರವಾಗಿ ಹೋಗಿ ಅವರನ್ನು ಭೇಟಿಯಾಗಬಹುದಾಗಿತ್ತು. ಜಯನಗರದಲ್ಲಿ ಸೈಕಲ್ ಟ್ರಾಕ್ ಅಳವಡಿಸಿದ್ದು ಅವರ ಕಲ್ಪನೆಯಾಗಿತ್ತು.
ನೇತ್ರದಾನ : ವಿಜಯ್ ಕುಮಾರ್ ಅವರ ಇಚ್ಛೆಯಂತೆ ಶ್ರದ್ಧಾ ಐಕೇರ್ ನಲ್ಲಿ ಅವರು ನೇತ್ರವನ್ನು ದಾನ ಮಾಡಲಾಗುತ್ತಿದೆ. ಜಯನಗರದ ಅವರ ನಿವಾಸಕ್ಕೆ ಪಾರ್ಥೀವ ಶರೀರ ತರಲಾಗಿದ್ದು, ಚಾಮರಾಜಪೇಟೆಯ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಅಂತಿಮ ದರ್ಶನ ಪಡೆಯಲಿದ್ದಾರೆ.












Click it and Unblock the Notifications