ಜನತಾ ಕರ್ಫ್ಯೂ ಎಫೆಕ್ಟ್: ಪುರಾಣ ಪ್ರಸಿದ್ಢ ಹುಸ್ಕೂರು ಜಾತ್ರೆ ಸ್ತಬ್ಧ
ಬೆಂಗಳೂರು, ಮಾರ್ಚ್ 22: ಬೆಂಗಳೂರಿನ ಪ್ರಮುಖ ಜಾತ್ರೆಗಳಲ್ಲಿ ಹುಸ್ಕೂರು ಜಾತ್ರೆ ಕೂಡ ಒಂದು. ಆನೇಕಲ್ ತಾಲ್ಲೂಕಿನ ಭಾಗದಲ್ಲಿಯೇ ಅತಿ ದೊಡ್ಡ ಜಾತ್ರೆ ಇದು. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೊಕಿನ ಹುಸ್ಕೂರು ಗ್ರಾಮದಲ್ಲಿ ನಡೆಯುವ ಈ ಜಾತ್ರೆ ಇಂದು ಜನರಿಲ್ಲದೆ ಬಿಕೋ ಎನ್ನುತ್ತಿದೆ.
ಸುತ್ತಮುತ್ತಲಿನ 16 ಗ್ರಾಮಗಳು ಸೇರಿ ನಡೆಸುವ ಈ ಜಾತ್ರೆಯಲ್ಲಿ ಪ್ರತಿ ವರ್ಷ ಒಂದರಿಂದ ಮೂರು ಲಕ್ಷ ಜನರು ಸೇರುವ ಅಂದಾಜಿದೆ. ಆದರೆ, ಇದೇ ಮೊದಲ ವರ್ಷ ಭಕ್ತರಿಲ್ಲದೆ ಮದ್ದೂರಮ್ಮನ ತೇರು ಸಾಗದೆ ನಿಂತಿದೆ. ಇದಕ್ಕೆ ಕಾರಣ ಕೊರೊನಾ ವೈರಸ್ ಭೀತಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಜನತಾ ಕರ್ಫ್ಯೂ.
ದೇಶಾದ್ಯಂತ ಕೊರೊನಾ ಹರಡುವಿಕೆಯ ಭೀತಿ ಇದ್ದರೂ ಹುಸ್ಕೂರು ಜಾತ್ರೆಯಲ್ಲಿ ಯಾವುದೇ ಬದಲಾವಣೆ ಮಾಡದೆ ಉತ್ಸವ ಆಯೋಜಿನೆ ಮಾಡಲಾಗಿತ್ತು. ಶುಕ್ರವಾರ, ಶನಿವಾರದ ಕಾರ್ಯಕ್ರಮಗಳು ನಿರೀಕ್ಷೆಯಂತೆ ನಡೆದಿದ್ದು, ಭಾನುವಾರ ತೇರಿನ ಉತ್ಸವ ನಡೆಯಬೇಕಿತ್ತು. ಆದರೆ, ಜನರಿಲ್ಲದಿರುವುದು ನಿರಾಸೆ ಭಕ್ತರಿಗೆ ನಿರಾಸೆ ತಂದಿದೆ.

ಕಳೆದ ಮೂರು ದಿನಗಳ ಹಿಂದೆಯಷ್ಟೆ ಪ್ರಧಾನಿ ಮೋದಿ ಜನತಾ ಕರ್ಫ್ಯೂ ಕರೆ ನೀಡಿದ್ದು, ಮಾರ್ಚ್ 22 ರಂದು ಭಾನುವಾರ ಯಾರು ಮನೆಯಿಂದ ಹೊರಗೆ ಬರೆಬೇಡಿ ಎಂದು ವಿನಂತಿಸಿದ್ದರು. ಹಾಗಾಗಿ, ಈ ಕರ್ಫ್ಯೂ ಹುಸ್ಕೂರು ಜಾತ್ರೆಗೂ ತಟ್ಟಿದೆ.
ಪ್ರತಿವರ್ಷವೂ ಈ ಜಾತ್ರೆಯಲ್ಲಿ ಹತ್ತಕ್ಕು ಹೆಚ್ಚು ತೇರು ಜಾತ್ರೆಗೆ ಆಗಮಿಸುತ್ತಿತ್ತು. ರಾಸುಗಳೇ ಹಳ್ಳ ಕೊಳ್ಳ ಹೊಲ ಗದ್ದೆಗಳ ಮೇಲೆ ಎಳೆದು ಬರುತ್ತಿದ್ದದ್ದು ಈ ಜಾತ್ರೆಯ ವಿಶೇಷ. ಆದ್ರೆ ಕರೋನಾ ಮತ್ತು ಮೋದಿಯವರ ಜನತಾ ಕರ್ಫ್ಯೂ ಪರಿಣಾಮವಾಗಿ ಪುರಾಣ ಪ್ರಸಿದ್ಧ ಜಾತ್ರೆ ಸ್ತಬ್ಧವಾಗಿದೆ.












Click it and Unblock the Notifications