ಕೇರಳದ ಇಬ್ಬರು ಸಚಿವರಾಗಿದ್ದಾಗ ಓಕೆ, ಈಗ ಮೇಯರ್ ನಾಟ್ ಓಕೆನಾ?
ನಿರೀಕ್ಷೆಯಂತೆ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ (ಬಿಬಿಎಂಪಿ) ಚುಕ್ಕಾಣಿಯನ್ನು ಬಿಜೆಪಿ ಹಿಡಿದಿದೆ. ಜೋಗುಪಾಳ್ಯ ವಾರ್ಡಿನ ಗೌತಮ್ ಕುಮಾರ್ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ನೂತನ ಮೇಯರ್ ಆಯ್ಕೆಯ ವಿಚಾರದಲ್ಲಿ ಸಾಮಾಜಿಕ ತಾಣದಲ್ಲಿ ಬಿಸಿಬಿಸಿ ಪರವಿರೋಧ ಚರ್ಚೆಗಳು ನಡೆಯುತ್ತಿದೆ. ಕಾರಣ, ಗೌತಮ್ ಕುಮಾರ್ ಕನ್ನಡೇತರರಾಗಿರುವುದು.
ಕೆಲವು ತಿಂಗಳ ಹಿಂದೆ ಜೈನ ಸಮುದಾಯದ ಕಾರ್ಯಕ್ರಮವೊಂದು ನಡೆಯುತ್ತಿತ್ತು. ಆ ಕಾರ್ಯಕ್ರಮದ ಬ್ಯಾನರ್ ನಲ್ಲಿ ಕನ್ನಡ ಇರಲಿಲ್ಲ ಎಂದು ಕನ್ನಡಪರ ಸಂಘಟನೆಗಳು ಬ್ಯಾನರ್ ಹರಿದು ಹಾಕಿ ಪ್ರತಿಭಟನೆ ನಡೆಸಿದ್ದವು.
ಜೈನ (ಮಾರ್ವಾಡಿ) ಸಮುದಾಯದ ಗೌತಮ್ ಕುಮಾರ್ ಅವರನ್ನು ಮೇಯರ್ ಆಗಿ ಆಯ್ಕೆ ಮಾಡಿರುವುದಕ್ಕೆ ಕನ್ನಡಿಗರು ಯಾರೂ ಸಿಗಲಿಲ್ಲವೇ ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಳ್ಳಲಾಗುತ್ತಿದೆ. ಇನ್ನೊಂದೆಡೆ, ಇಬ್ಬರು ಕೇರಳ ಮೂಲದವರು ಸಚಿವರಾಗಿದ್ದಾಗ ಓಕೆ, ಈಗ ನಾಟ್ ಓಕೆನಾ ಎಂದೂ ಪ್ರಶ್ನಿಸಲಾಗುತ್ತಿದೆ.

ಗೌತಮ್ ಆಯ್ಕೆ ಹಿಂದೆಯೇ ಮತ್ತೆ ಕನ್ನಡ-ಉತ್ತರ ಭಾರತ ಚರ್ಚೆ
ಗೌತಮ್ ಆಯ್ಕೆ ಹಿಂದೆಯೇ ಮತ್ತೆ ಕನ್ನಡ-ಉತ್ತರ ಭಾರತ ಚರ್ಚೆ ಮುನ್ನೆಲೆಗೆ ಬಂದಿದೆ. 'ವೀ ವಾಂಟ್ ಕನ್ನಡಿಗ ಮೇಯರ್' (#wewantkannadigamayor) ಹ್ಯಾಷ್ಟ್ಯಾಗ್ ಟ್ರೆಂಡಿಂಗ್ ಆಗಿದ್ದು, ಕನ್ನಡಿಗರೇ ಮೇಯರ್ ಆಗಲಿ ಎಂಬ ಒತ್ತಾಯ ನೆಟ್ಟಿಗರಿಂದ ಕೇಳಿ ಬಂದಿದೆ. ಇದಕ್ಕೆ ವಿರುದ್ದವಾದ ಪ್ರತಿಕ್ರಿಯೆಗಳೂ ಬರುತ್ತಿವೆ.

ಬೆಂಗಳೂರಿನ ಆಡಳಿತವನ್ನು ಮಾರ್ವಾಡಿಗಳ ಕೈಗೆ ನೀಡಲಾಗಿದೆ
'ಬೆಂಗಳೂರಿನ ಆಡಳಿತವನ್ನು ಮಾರ್ವಾಡಿಗಳ ಕೈಗೆ ನೀಡಲಾಗಿದೆ' ಎಂದು ಕನ್ನಡಪರ ಸಂಘಟನೆಗಳು ಈಗಾಗಲೇ ಆಕ್ರೋಶ ವ್ಯಕ್ತಪಡಿಸುತ್ತಿವೆ. 'ಇದು ಕರ್ನಾಟಕ, ರಾಜಸ್ಥಾನವಲ್ಲ, ಈ ನಿಮ್ಮ ಮೇಯರ್ ಆಯ್ಕೆ ಬಿಜೆಪಿಯಲ್ಲಿ ಯಾವ ಗಟ್ಟಿ ನಾಯಕನೂ ಇಲ್ಲ ಎಂಬುದನ್ನು ತೋರಿಸುತ್ತಿದೆ' ಎಂದು ಟೀಕಿಸಲಾಗುತ್ತಿದೆ.

ಕೇಳಚಂದ್ರ ಜೋಸೆಫ್ ಜಾರ್ಜ್ (ಕೆ.ಜೆ.ಜಾರ್ಜ್)
ಕೇಳಚಂದ್ರ ಜೋಸೆಫ್ ಜಾರ್ಜ್ (ಕೆ.ಜೆ.ಜಾರ್ಜ್) ಅವರು ಎಚ್.ಡಿ.ಕುಮಾರಸ್ವಾಮಿ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದರು. ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನೆ, ಗೃಹ ಸಚಿವರೂ ಆಗಿದ್ದರು. ಜಾರ್ಜ್, ಆಗಸ್ಟ್ 24, 1949ರಲ್ಲಿ ಕೇರಳದ ಕೊಟ್ಟಾಯಂನಲ್ಲಿ ಹುಟ್ಟಿದರು. ನಂತರ ಕೊಡಗು ಜಿಲ್ಲೆಗೆ ಇವರ ಕುಟುಂಬ ಸ್ಥಳಾಂತರಗೊಂಡಿತು.

ನಲಪ್ಪಾಡ್ ಅಹಮದ್ ಹ್ಯಾರಿಸ್
ನಲಪ್ಪಾಡ್ ಅಹಮದ್ ಹ್ಯಾರಿಸ್ ( ಎನ್.ಎ.ಹ್ಯಾರಿಸ್) ಸತತವಾಗಿ ಶಾಂತಿನಗರ ಅಸೆಂಬ್ಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಕಳೆದ ಕುಮಾರಸ್ವಾಮಿ ಸರಕಾರದಲ್ಲಿ ಹ್ಯಾರಿಸ್, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಂಡಿ ಆಗಿದ್ದರು. ಹ್ಯಾರಿಸ್, ಕೇರಳದ ಕಾಸರಗೋಡಿನಲ್ಲಿ ಜನಿಸಿದರು. ನಂತರ, ಭದ್ರಾವತಿಗೆ ಶಿಫ್ಟ್ ಆದರು.

ಕೇರಳ ಮೂಲದ ಇಬ್ಬರು ಸಚಿವರಾಗಿದ್ದಾಗ ಓಕೆನಾ
ಕೇರಳ ಮೂಲದ ಇಬ್ಬರು ಸಚಿವರಾಗಿದ್ದಾಗ ಕನ್ನಡ ಮತ್ತು ಕರ್ನಾಟಕದ ಬಗ್ಗೆ ಗೊತ್ತಿರಲಿಲ್ಲವೇ? ನಿಮ್ಮ ಈ ಹೋರಾಟಗಳು ಬಿಜೆಪಿಯ ವಿರುದ್ದವೇ ಅಥವಾ ಕನ್ನಡದ ಬಗ್ಗೆಯೇ ಎಂದು ಸಾಮಾಜಿಕ ತಾಣದಲ್ಲಿ ಮರುಪ್ರಶ್ನೆ ಹಾಕಲಾಗುತ್ತಿದೆ. "ಕನ್ನಡಕ್ಕೆ ಯಾವುದೇ ಚ್ಯುತಿ ಬರದಂತೇ, ಮೇಯರ್ ಆಗಿ ಕಾರ್ಯನಿರ್ವಹಿಸುತ್ತೇನೆ" ಎಂದು ನೂತನ ಮೇಯರ್ ಹೇಳಿದ್ದಾರೆ.












Click it and Unblock the Notifications