ರಾಜ್ಯಪಾಲರ ಭಾಷಣ ಸುಳ್ಳಿನ ಕಂತೆ: ಜಗದೀಶ್ ಶೆಟ್ಟರ್
ಬೆಂಗಳೂರು, ಫೆಬ್ರವರಿ 05: ವಿಧಾನಮಂಡಲ ಅಧಿವೇಶನದ ಮೊದಲ ದಿನ ಜಂಟಿ ಸದನದಲ್ಲಿ ರಾಜ್ಯಪಾಲ ವಜುಭಾಯ್ ವಾಲಾ ಅವರು ಮಾಡಿದ ಭಾಷಣಕ್ಕೆ ವಿರೋಧ ಪಕ್ಷದ ಅಧ್ಯಕ್ಷ ಜಗದೀಶ್ ಶೆಟ್ಟರ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.
ರಾಜ್ಯಪಾಲರ ಭಾಷಣದ ನಂತರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ಭಾಷಣ ದೂರ ದೃಷ್ಠಿ ಇಲ್ಲದ, ಅವರ ಭಾಷಣದಲ್ಲಿ ಕೇವಲ ತಪ್ಪು ಅಂಕಿ ಸಂಖ್ಯೆಗಳಿದ್ದವು. ಸರ್ಕಾರವು ರಾಜ್ಯಪಾಲರನ್ನು ತಮ್ಮ ಸುಳ್ಳುಗಳನ್ನು ಹೇಳಿಸುವುದಕ್ಕೆ ಬಳಸಿಕೊಂಡಿದೆ ಎಂದು ಆರೋಪಿಸಿದರು.
ಸರ್ಕಾರವು ರಾಜ್ಯಪಾಲರಿಗೆ ಭಾಷಣ ಬರೆದುಕೊಟ್ಟು ಕೇವಲ ಅವರ ಬಾಯಲ್ಲಿ ಸುಳ್ಳು ಹೇಳಿಸಿದೆ ಎಂದು ಆರೋಪಿಸಿದ ಅವರು, ರಾಜ್ಯಪಾಲರ ಭಾಷಣ ಚುನಾವಣಾ ಭಾಷಣದಂತೆ ಇತ್ತು ಎಂದು ದೂರಿದರು.

ರಾಜ್ಯಪಾಲರ ಭಾಷಣದಲ್ಲಿ 371 (ಜಿ) ವಿಧಿ, ಫ್ರೊ ನಂಜುಂಡಪ್ಪ ವರದಿ ಇನ್ನಿತರೆ ವರದಿಗಳ ಪ್ರಸ್ತಾಪ ಇತ್ತು ಆದರೆ ಅದರ ಫಲಿತಾಂಶ ಇರಲಿಲ್ಲ. ಯೋಜನೆಗಳಿಗೆ ಇಷ್ಟು ಕೋಟಿ ಹಣ ನೀಡಲಾಗಿದೆ ಎಂದಷ್ಟೆ ಭಾಷಣದಲ್ಲಿ ಹೇಳಲಾಯಿತು ಆದರೆ ಫಲದ ಮಾತೇ ಇಲ್ಲ ಎಂದರು.
ಭಾಷಣದಲ್ಲಿ ಸರ್ಕಾರದ ಸಾಧನೆಗಳ ಬದಲಿಗೆ ಸರ್ಕಾರ ಎಲ್ಲಿ ಎಡವಿದೆ, ಮುಂದೆ ಏನು ಮಾಡಬೇಕಿದೆ, ಜನರಿಗೆ ಯಾವ ರೀತಿಯ ಆಡಳಿತ ನೀಡಬೇಕಿದೆ ಎಂಬ ಅಂಶ ಇರಬೇಕಿತ್ತು, ಆದರೆ ಕೇವಲ ನಾಲ್ಕು ವರ್ಷ ಸರ್ಕಾರ ಘೋಷಿಸಿರುವ ಯೋಜನೆಗಳನ್ನು ಪುನಃ ಓದಲಾಗಿದೆ ಅಷ್ಟೆ ಎಂದು ಅವರು ಟೀಕಿಸಿದರು.
ವಜುಭಾಯಿ ವಾಲಾ ಅವರು ಗುಜರಾತ್ನ ಹಿರಿಯ ಬಿಜೆಪಿ ಮುಖಂಡರಾಗಿದ್ದು ಅವರೇ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಹೊಗಳಿ ಮಾತನಾಡಿದ್ದು ರಾಜ್ಯ ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ನಾಳೆ ನಡೆಯುವ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಬಿಜೆಪಿಯು ಭಾಷಣಕ್ಕೆ ತೀರ್ವ ವಿರೋಧ ವ್ಯಕ್ತಪಡಿಸುವ ಸಂಭವ ಇದೆ.












Click it and Unblock the Notifications