ಐಟಿ ದಾಳಿ ಮಾಡಿ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ: ಎಚ್ಡಿಕೆ
ಬೆಂಗಳೂರು, ಮಾರ್ಚ್ 28: ಬಿಜೆಪಿಯು ಐಟಿ ದಾಳಿಗಳ ಮೂಲಕ ನಮ್ಮನ್ನು ಹೆದರಿಸಿ ಬಗ್ಗುಬಡಿಯಲು ನೋಡುತ್ತಿದೆ, ಆದರೆ ಅದು ಸಾಧ್ಯವಾಗುವುದಿಲ್ಲ, ಬಿಜೆಪಿ ಅಂತ್ಯಕಾಲ ಸಮೀಪಿಸಿದ್ದು, ಅದರ ಪಥನ ಕರ್ನಾಟಕದಿಂದಲೇ ಪ್ರಾರಂಭವಾಗಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.
ಜೆಡಿಎಸ್-ಕಾಂಗ್ರೆಸ್ ನಾಯಕರ ಮೇಲೆ ಐಟಿ ದಾಳಿ ನಡೆಸಿದ್ದನ್ನು ರಾಜಕೀಯ ಪ್ರೇರಿತ ಎಂದು ಆರೋಪಿಸಿ ನಗರದ ಐಟಿ ಕಚೇರಿ ಮುಂದೆ ಜೆಡಿಎಸ್-ಕಾಂಗ್ರೆಸ್ ನಾಯಕರು ಜಂಟಿಯಾಗಿ ಮಾಡಿದ ಪ್ರತಿಭಟನೆಯನ್ನು ಅವರು ಐಟಿ ನಿರ್ದೇಶಕ ಬಾಲಕೃಷ್ಣ ಮತ್ತು ಬಿಜೆಪಿ ಮೇಲೆ ಆಕ್ರೋಶ ಹೊರಹಾಕಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಇಲ್ಲಿನ ಬಿಜೆಪಿ ಮುಖಂಡನೊಬ್ಬ ಅಮಿತ್ ಶಾ ಗೆ ರಾಜ್ಯದ ಪ್ರಮುಖ ನಾಯಕರುಗಳ ಪಟ್ಟಿ ಕಳಿಸುತ್ತಾರೆ, ಅದನ್ನು ಅಮಿತ್ ಶಾ ನೋಡಿ, ಐಟಿ ಅಧಿಕಾರಿ ಬಾಲಕೃಷ್ಣಗೆ ಕಳಿಸುತ್ತಾರೆ, ಶಾ ಆಜ್ಞೆಯಂತೆ ಇವರು ದಾಳಿಗಳನ್ನು ಮಾಡುತ್ತಾರೆ ಎಂದು ಆರೋಪಿಸಿದ ಅವರು, ಬಾಲಕೃಷ್ಣ ಅವರು ಅಕ್ರಮವಾಗಿ ಎಷ್ಟು ಸಂಪಾದಿಸಿದ್ದಾರೆ ಎಂಬ ಲೆಕ್ಕ ನಮ್ಮ ಬಳಿಯೂ ಇದೆ ಎಂದು ಅವರು ಹೇಳಿದರು.
ಬಿಜೆಪಿಯೇತರ ರಾಜ್ಯಗಳಲ್ಲಿ ಮಾತ್ರವೇ ದಾಳಿಗಳು ನಡೆಯುತ್ತಿರಲು ಕಾರಣವೇನು, ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಸಂವಿಧಾನಬದ್ಧವಾದ ಎಲ್ಲ ಸಂಸ್ಥೆಗಳನ್ನು ಹಿಡಿತಕ್ಕೆ ತೆಗೆದುಕೊಂಡಿದೆ. ಚುನಾವಣಾ ಆಯೋಗ, ಸಿಬಿಐ, ಐಟಿ ಎಲ್ಲವೂ ಬಿಜೆಪಿಯ ಕೈಗೊಂಬೆಗಳಾಗಿವೆ ಎಂದು ಅವರು ಹೇಳಿದರು.

'ದಾಳಿ ಬಗ್ಗೆ ಆಕ್ಷೇಪವಿಲ್ಲ, ಆದರೆ ಇದು ರಾಜಕೀಯ ಪ್ರೇರಿತ'
ತೆರಿಗೆ ವಂಚಕರ ಮೇಲೆ ಮಾಡುವ ದಾಳಿಗೆ ನಮ್ಮ ವಿರೋಧವಿಲ್ಲ, ಆದರೆ ಚುನಾವಣೆ ಸಮಯದಲ್ಲಿ ಉದ್ದೇಶಪೂರ್ವಕವಾಗಿ ಕಾಂಗ್ರೆಸ್-ಜೆಡಿಎಸ್ ಮುಖಂಡರನ್ನೇ ಗುರಿ ಮಾಡಿಕೊಂಡು ದಾಳಿ ಮಾಡಲಾಗಿದೆ. ಕನಕಪುರದಲ್ಲಿ ತಹಶೀಲ್ದಾರ್ ಕಚೇರಿಗೆ ಹೋಗಿ ಸುರೇಶ್ ಅವರ ನಾಮಪತ್ರ ಪರಿಶೀಲನೆ ಮಾಡಿದ್ದಾರೆ, ಲೋಕೋಪಯೋಗಿ ಇಲಾಖೆ ಅಧಿಕಾರಿ ಮನೆ-ಕಚೇರಿಗೆ ಹೋಗಿದ್ದಾರೆ, ಪುಟ್ಟರಾಜು ಮನೆಗೆ ದಾಳಿ ಮಾಡಿದ್ದಾರೆ ಇದೆಲ್ಲವೂ ಏನನ್ನು ಸೂಚಿಸುತ್ತದೆ ಎಂಬುದು ರಾಜ್ಯದ ಜನತೆಗೆ ಗೊತ್ತಾಗುತ್ತದೆ ಎಂದು ಅವರು ಹೇಳಿದರು.

'ನನ್ನ ಮನೆಗೆ ಯಾವಾಗ, ಯಾರು ಬೇಕಾದರೂ ಬರಬಹುದು'
ಕುಮಾರಸ್ವಾಮಿ ಹೆದರಿಬಿಟ್ಟಿದ್ದಾರೆ ಎಂದು ಮಾಧ್ಯಮಗಳವರು ಬೊಬ್ಬೆ ಹೊಡೆದರು, ನನ್ನ ಮನೆಗೆ ಯಾರು ಬೇಕಾದರೂ, ಯಾವ ಸಮಯದಲ್ಲಿ ಬೇಕಾದರೂ ಬರಲಿ ಚಿಂತೆಯಿಲ್ಲ. ಕೆಲವು ತಿಂಗಳಿಂದ ಆಪರೇಷನ್ ಕಮಲದ ಹೆಸರಲ್ಲಿ ನಮ್ಮ ಶಾಸಕರಿಗೆ ಕೋಟ್ಯಂತರ ಹಣ ಆಮೀಷ ಒಡ್ಡುತ್ತಿರುವವರ ಮೇಲೆ ದಾಳಿ ಮಾಡಿಲ್ಲ, ಆಗೆಲ್ಲಾ ಐಟಿ ಅಧಿಕಾರಗಳೇನು ಮಲಗಿ ನಿದ್ದೆ ಮಾಡುತ್ತಿದ್ದರಾ? ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಆಯುಕ್ತ ಬಾಲಕೃಷ್ಣ ಮೇಲೆ ಫುಲ್ ಗರಂ
ತೆರಿಗೆ ಇಲಾಖೆ ಆಯುಕ್ತ ಬಾಲಕೃಷ್ಣ ಅವರ ಮೇಲೆ ಹರಿಹಾಯ್ದ ಕುಮಾರಸ್ವಾಮಿ, ನೀವು ಏನೇನು ಮಾಡುತ್ತಿದ್ದೀರೆಂಬ ಎಲ್ಲ ಮಾಹಿತಿ ನನ್ನ ಬಳಿ ಇದೆ. ದಾಳಿ ಮಾಡಿ ಹಣ ಸೆಟಲ್ ಮಾಡಲು ಎಷ್ಟು ಪಡೆಯುತ್ತೀರಿ, ಎಲ್ಲೆಲ್ಲಿ ಆಸ್ತಿ ಮಾಡಿದ್ದೀರಿ? ಎಲ್ಲವೂ ಗೊತ್ತಿದೆ. ಕೆಲವೇ ತಿಂಗಳಲ್ಲಿ ಬಾಲಕೃಷ್ಣ ನಿವೃತ್ತರಾಗುತ್ತಾರಂತೆ, ಅದಾದ ಮೇಲೆ ಅವರನ್ನು ಯಾವುದೋ ರಾಜ್ಯಕ್ಕೆ ಗೌರ್ನರ್ ಮಾಡುವ ಭರವಸೆಯನ್ನು ಬಿಜೆಪಿ ನೀಡಿದೆ ಹಾಗಾಗಿ ಬಿಜೆಪಿಯನ್ನು ಮೆಚ್ಚಿಸಲು ಅವರು ಈ ದಾಳಿಗಳನ್ನು ನಡೆಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಸಂವಿಧಾನವನ್ನೇ ಮೋದಿ ಬದಲಿಸಿಬಿಡುತ್ತಾರೆ: ಎಚ್ಡಿಕೆ
ಸಂವಿಧಾನಿಕ ಸಂಸ್ಥೆಗಳನ್ನು ವಶಪಡಿಸಿಕೊಂಡಿರುವ ಮೋದಿ, ಮತ್ತೊಮ್ಮೆ ಆಯ್ಕೆಯಾದರೆ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನೇ ಬದಲಾಯಿಸಿ ಬಿಡುತ್ತಾರೆ. ಹಾಗಾಗಿ ಅದನ್ನು ತಡೆಯಲೆಂದು ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಅಣ್ಣ-ತಮ್ಮಂದಿರಂತೆ ಚುನಾವಣೆಯಲ್ಲಿ ಕೆಲಸ ಮಾಡಬೇಕು, ಬಿಜೆಪಿಯನ್ನು ದೇಶದಿಂದ ಅಟ್ಟುವ ಕೆಲಸ ಮಾಡಬೇಕು ಎಂದು ಕುಮಾರಸ್ವಾಮಿ ಕರೆ ನೀಡಿದರು.












Click it and Unblock the Notifications