ರಾಷ್ಟ್ರಪತಿಗಳಿಗೆ ರಾಜ್ಯ ಸರಕಾರ ಭಾಷಣ ಬರೆದುಕೊಡಲು ಸಾಧ್ಯವೇ: ಸಿದ್ದು
ಬೆಂಗಳೂರು, ಅಕ್ಟೋಬರ್ 25: ರಾಷ್ಟ್ರಪತಿಗಳಿಗೆ ನಾವು ಭಾಷಣ ಬರೆದುಕೊಡಲು ಆಗುತ್ತಾ? ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರೇ ಭಾಷಣ ಸಿದ್ಧಪಡಿಸಿಕೊಂಡು ಬಂದಿದ್ದರು. ಕರ್ನಾಟಕದಲ್ಲಿ ನಡೆದ ಇತಿಹಾಸದ ಸತ್ಯವನ್ನು ಹೇಳಿದ್ದಾರೆ. ಬಿಜೆಪಿಯವರು ಸತ್ಯವನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ವಿಧಾನಸೌಧದ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ರಾಷ್ಟ್ರಪತಿಗಳು ಟಿಪ್ಪುವಿನ ಪ್ರಸ್ತಾವ ಮಾಡಿದ್ದಕ್ಕೆ, ಈ ಭಾಷಣವನ್ನು ರಾಜ್ಯ ಸರಕಾರವೇ ಬರೆದುಕೊಟ್ಟಿದೆ ಎಂದು ಬಿಜೆಪಿ ನೀಡಿದ ಹೇಳಿಕೆಯನ್ನು ಸಿದ್ದರಾಮಯ್ಯ ಖಂಡಿಸಿದ್ದಾರೆ,

ರಾಷ್ಟ್ರಪತಿ ಅವರಿಗೆ ರಾಜ್ಯ ಸರಕಾರ ಭಾಷಣ ಬರೆದುಕೊಟ್ಟು, ಬೇಕಂತಲೇ ಟಿಪ್ಪು ಹೆಸರನ್ನು ಸೇರಿಸಿದೆ ಎಂದು ಬಿಜೆಪಿ ನಾಯಕರು ಆರೋಪ ಮಾಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದಾಗ, ಬಿಜೆಪಿಯವರು ಸತ್ಯವನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದು ಜಂಟಿ ಅಧಿವೇಶನದ ಭಾಷಣ ಅಲ್ಲ. ಆದ್ದರಿಂದ ಸರಕಾರ ಭಾಷಣ ಬರೆದುಕೊಡಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, ಕೆಜೆಪಿಯಲ್ಲಿದ್ದಾಗ ಟಿಪ್ಪು ಪೇಟಾ ಹಾಕಿಕೊಂಡು, ಖಡ್ಗ ಹಿಡಿದ ಯಡಿಯೂರಪ್ಪ, ಅಲ್ಲಾಹು ಸಾಕ್ಷಿಯಾಗಿ ಬಿಜೆಪಿಗೆ ಹೋಗೋದಿಲ್ಲ ಅಂದಿದ್ದರು. ಅವರಿಗೆ ಎಷ್ಟು ನಾಲಗೆ? ಇನ್ನು ಜಗದೀಶ್ ಶೆಟ್ಟರ್ ಟಿಪ್ಪು ಕುರಿತಾದ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ ಎಂದರು.












Click it and Unblock the Notifications