ಕೂರೊನಾ ಸಾವಿನಲ್ಲಿ ತಪ್ಪು ಲೆಕ್ಕ: ಬಿಬಿಎಂಪಿ ಆಯುಕ್ತರ ಸ್ಪಷ್ಟನೆ
ಬೆಂಗಳೂರು, ಏಪ್ರಿಲ್ 30: ಕೊರೊನಾದಿಂದ ಸಾವನ್ನಪ್ಪುತ್ತಿರುವ ಸಂಖ್ಯೆಯನ್ನು ಸರಕಾರ ಮುಚ್ಚಿಡುತ್ತಿದೆ ಎನ್ನುವ ಸಾರ್ವಜನಿಕ ವಲಯದಲ್ಲಿ ಮತ್ತು ವಿರೋಧ ಪಕ್ಷಗಳ ಆರೋಪದ ಬಗ್ಗೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಸ್ಪಷ್ಟನೆಯನ್ನು ನೀಡಿದ್ದಾರೆ.
ಪ್ರತೀದಿನ ಸರಕಾರ ನೀಡುತ್ತಿರುವ ವರದಿ ಮತ್ತು ಚಿತಾಗಾರಗಳಲ್ಲಿ ದಹನವಾಗುತ್ತಿರುವ ಶವಗಳ ಲೆಕ್ಕದಲ್ಲಿ ಭಾರೀ ವ್ಯತ್ಯಾಸ ಕಂಡು ಬರುತ್ತಿದೆ ಎಂದು ಕಾಂಗ್ರೆಸ್ ಪಕ್ಷವು ಸತತವಾಗಿ ಆರೋಪಿಸುತ್ತಿದೆ.
ವಿಚಾರದ ಬಗ್ಗೆ ಮಾತನಾಡಿರುವ ಆಯುಕ್ತರು, "ಸುಳ್ಳು ಸಾವಿನ ಲೆಕ್ಕವನ್ನು ನೀಡುವ ಯಾವ ಅನಿವಾರ್ಯತೆಯೂ ಬಿಬಿಎಂಪಿಗಾಗಲಿ ಸರಕಾರಕ್ಕಾಗಲಿ ಇಲ್ಲ. ನಾವು ಎಲ್ಲಾ ಮಾಹಿತಿಗಳನ್ನು ಸರಕಾರಕ್ಕೆ ನೀಡುತ್ತಿದ್ದೇವೆ"ಎಂದು ಗುಪ್ತಾ ಹೇಳಿದ್ದಾರೆ.

"ಸಹಜ ಸಾವಿನ ಲೆಕ್ಕವನ್ನು ನಾವು ನೀಡುತ್ತಿಲ್ಲ. ಬೇರೆ ಬೇರೆ ರಾಜ್ಯಗಳಿಂದ ರಾಜ್ಯಕ್ಕೆ ವೈದ್ಯಕೀಯ ಸೌಲಭ್ಯವನ್ನು ಪಡೆಯಲು ಬಂದು, ಇಲ್ಲಿ ಕೊರೊನಾದಿಂದ ಸಾವನ್ನಪ್ಪುವವರು ಇಲ್ಲೇ ಅಂತ್ಯಕ್ರಿಯೆಯನ್ನು ನಡೆಸುತ್ತಿದ್ದಾರೆ"ಎಂದು ಗೌರವ್ ಗುಪ್ತಾ ಹೇಳಿದ್ದಾರೆ.
"ಬೆಂಗಳೂರು ಹೊರವಲಯದ ರಾಮನಗರ, ದೇವನಹಳ್ಳಿ, ಬಿಡದಿ, ಆನೇಕಲ್ ಕಡೆಯಿಂದಲೂ ಶವಸಂಸ್ಕಾರಕ್ಕೆ ಬಿಬಿಎಂಪಿ ವ್ಯಾಪ್ತಿಗೆ ಬರುತ್ತಿದ್ದಾರೆ. ಎಲ್ಲಾ ಆಸ್ಪತ್ರೆಗಳಿಂದ ಬರುವ ಮಾಹಿತಿಯನ್ನು ದಿನಂಪ್ರತಿ ಆರೋಗ್ಯ ಇಲಾಖೆಗೆ ನೀಡುತ್ತಿದ್ದೇವೆ"ಎಂದು ಗೌರವ್ ಗುಪ್ತಾ ಸ್ಪಷ್ಟನೆಯನ್ನು ನೀಡಿದ್ದಾರೆ.
ರಾಜಧಾನಿಯ ವಿವಿಧ ಚಿತಾಗಾರಗಳು ದಿನಾ ಹದಿನಾರು ಗಂಟೆ ಕಾರ್ಯನಿರ್ವಹಿಸುತ್ತಿದ್ದರೂ, ಶವಗಳ ದಹನಕಾರ್ಯ ಮುಗಿಯುತ್ತಿಲ್ಲ. ದಿನವೊಂದಕ್ಕೆ 150-160 ಅಂತ್ಯಕ್ರಿಯೆ ನಡೆಯುತ್ತಿದ್ದರೂ, ಬಿಬಿಎಂಪಿ 100-120 ಎಂದು ಲೆಕ್ಕ ತೋರಿಸುತ್ತಿದೆ.












Click it and Unblock the Notifications