ಹಣ ದ್ವಿಗುಣಗೊಳಿಸುವ ಆಸೆ ಹೆಸರಿನಲ್ಲಿ ಹೂಡಿಕೆ ಮಾಡಿಸಿಕೊಂಡು ಮೋಸ!
ಬೆಂಗಳೂರು, ಸೆ. 11: ಜನರಿಗೆ ಅಧಿಕ ಬಡ್ಡಿ ಕೊಡಿಸುವ ಆಸೆ ಹುಟ್ಟಿಸಿ ಜನರಿಗೆ ಸುಮಾರು ಐದು ಕೋಟಿ ರೂ. ಅಧಿಕ ಹಣ ವಂಚನೆ ಮಾಡಿರುವ ಮತ್ತೊಂದು ಪ್ರಕರಣ ಬೆಳಕಿಗೆಬಂದಿದೆ. ಅಧಿಕ ಬಡ್ಡಿ ಆಸೆ ತೋರಿಸಿ ಲಕ್ಷ ಲಕ್ಷ ಹಣ ಹೂಡಿಕೆ ಮಾಡಿಸಿಕೊಂಡು ಕೈ ಎತ್ತಿರುವ ನಾಲ್ವರನ್ನು ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ತಿಲಕ್ ನಗರದಲ್ಲಿ ಇಕ್ರ ವೆಲ್ತ್ ಮ್ಯಾನೇಜ್ನಮೆಂಟ್ ಹೆಸರಿನಲ್ಲಿ ಕಂಪನಿ ತೆರೆದಿದ್ದ ಅಬ್ದುಲ್ ನಜೀಮ್, ಹಿದಾಯತ್ ಉಲ್ಲಾ, ನಜೀಮ್, ಅಲಿಂ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ತಿಲಕ್ ನಗರದ ಸ್ವಾಗತ್ ರಸ್ತೆಯಲ್ಲಿ ಇಕ್ರಾ ವೆಲ್ತ್ ಮ್ಯಾನೇಜ್ ಮೆಂಟ್ ಎಂಬ ಕಂಪೆನಿ ತೆರೆದಿದ್ದರು. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹಣ ಹೂಡಿಕೆ ಮಾಡಿದರೆ ಶೇ. 15 ರಿಂದ 30 ರಷ್ಟು ಬಡ್ಡಿ ಕೊಡುವುದಾಗಿ ನಂಬಿಸಿದ್ದರು. ಜನರು ಹೂಡಿಕೆ ಮಾಡುವ ಹಣವನ್ನು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭಾಂಶ ಮಾಡಿಕೊಡುವ ಆಸೆ ಹುಟ್ಟಿಸಿದ್ದರು. ಇದನ್ನು ನಂಬಿದ್ದ ಜನರು ತಲಾ ಐದು ಲಕ್ಷ ರೂ. ಹತ್ತು ಲಕ್ಷ ರೂ. ನಂತೆ ಹೂಡಿಕೆ ಮಾಡಿಸಿದ್ದರು. ಕಮೀಷನ್ ಆಸೆ ಹುಟ್ಟಿಸಿ ಹಣ ಹೂಡಿಕೆ ಮಾಡಿದ ಅವರ ಆಪ್ತರ ಮೂಲಕವೂ ಹೂಡಿಕೆ ಮಾಡಿಸಲಾಗಿತ್ತು.

ಒಂದು ವರ್ಷದಿಂದ ಹೂಡಿಕೆ ಮಾಡಿಸಿಕೊಂಡು ನಾಮ: ಕಳೆದ ಒಂದು ವರ್ಷದಿಂದ ಇಕ್ರಾ ವೆಲ್ತ್ ಮ್ಯಾನೇಜ್ ಮೆಂಟ್ ಕಂಪನಿ ಹೆಸರಿನಲ್ಲಿ ಸಾರ್ವಜನಿಕರಿಂದ ಹೂಡಿಕೆ ಮಾಡಿಸಿಕೊಳ್ಳಲಾಗಿತ್ತು. ಹೂಡಿಕೆ ಮಾಡಿದ ಆರು ತಿಂಗಳ ಬಳಿಕ, ಒಂದು ವರ್ಷದ ಬಳಿಕ ಲಾಭಾಂಶ ನೀಡುವ ಪ್ಲಾನ್ ಗಳನ್ನು ಪರಿಚಯಿಸಿದ್ದರು.
ಹಣ ಪಡೆದು ಒಂದು ವರ್ಷ ವಾದರೂ ಅಸಲು ಕೊಟ್ಟಿಲ್ಲ.ಬಡ್ಡಿಯನ್ನೂ ನೀಡಿಲ್ಲ. ಅಬ್ದುಲ್ ನಜೀಮ್ ಮತ್ತು ಇದಾಯತ್ ಉಲ್ಲಾ ಅವರ ಮಾತು ಕೇಳಿ ನೂರಾರು ಮಂದಿ ಹೂಡಿಕೆ ಮಾಡಿದ್ದು, ಹಣ ವಾಪಸು ನೀಡದೇ ಕಂಪನಿ ರದ್ದು ಮಾಡಲಾಗಿದೆ ಎಂದು ನೋಟಿಸ್ ಹಾಕಲಾಗಿದೆ. ಇದರಿಂದ ಹೂಡಿಕೆದಾರರು ಗಾಬರಿಗೊಂಡು ತಿಲಕ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇಕ್ರ ಕಂಪನಿಯ ಅಬ್ದುಲ್ ನಾಜಿಮ್ ಮೇಖ್ರಿ ಸೇರಿ ನಾಲ್ವರ ವಿರುದ್ಧ ಬಡ್ಸ್ ಆಕ್ಟ್- 2019, ಸೆಕ್ಷನ್ 9 ಕೆಪಿಐಡಿ ಆಕ್ಟ್ ಹಾಗೂ ಐಪಿಸಿ 506, 420 ಅಡಿ ಕೇಸ್ ದಾಖಲಿಸಿಕೊಳ್ಳಲಾಗಿದೆ. ಇಕ್ರ ವೆಲ್ತ್ ಮ್ಯಾನೇಜ್ಮೆಂಟ್ ನ ನಾಲ್ವರು ಆರೋಪಿಗಳಾದ ಅಬ್ದುಲ್ ನಜೀಮ್, ಹಿದಾಯತ್ ಉಲ್ಲಾ, ನಜೀಮ್, ಅಲಿಂ ರನ್ನು ಬಂಧಿಸಲಾಗಿದೆ. ವಂಚನೆ ಮಾಡುವ ಉದ್ದೇಶದಿಂದಲೇ ಕಂಪನಿ ಹುಟ್ಟಿ ಹಾಕಿ ಮೋಸ ಮಾಡಿದ್ದಾರೆ.

ಸದ್ಯಕ್ಕೆ ನಲವತ್ತು ಮಂದಿಯಿಂದ ಹೂಡಿಕೆ ಮಾಡಿಸಿಕೊಂಡು 2 ಕೋಟಿ ರೂ. ಗೂ ಅಧಿಕ ಮೊತ್ತ ಮೋಸ ಮಾಡಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ಆದರೆ, ನೂರಾರು ಮಂದಿಯಿಂದ ಹೂಡಿಕೆ ಮಾಡಿಸಿಕೊಂಡಿರುವ ಸಾಧ್ಯತೆಯಿದ್ದು, ಮುಂದಿನ ದಿನಗಲಲ್ಲಿ ಎಷ್ಟು ಮಂದಿ ದೂರು ನೀಡುತ್ತಾರೆ ಎಂಬುದರ ಮೇಲೆ ಆಧಾರ ಪಟ್ಟಿದೆ. ಆರೋಪಿತರು ಹೂಡಿಕೆ ಮಾಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆರೋಪಿಗಳ ಹೆಸರಿನಲ್ಲಿರುವ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಬುದ್ಧಿ ಕಲಿಯದ ಜನ: ಮೋಸ ಹೋಗುವರು ಇರುವ ವರೆಗೂ ಮೋಸ ಮಾಡುವರು ಇರುತ್ತಾರೆ.ವರ್ಷದ ಹಿಂದಷ್ಟೇ ಸಾವಿರಾರು ಮಂದಿ ಐಎಎಂದಿಂದ ಬೀದಿಗೆ ಬಿದ್ದಿದ್ದರು. ಹಣದಾಸಗೆ ಹೂಡಿಕೆ ಮಾಡಿ ಬೀದಿಗೆ ಬಿದ್ದಿದ್ದರು. ಹಣದಾಸೆಗೆ ಬಿದ್ದು ನಾಲ್ವರು ಸ್ನೇಹಿತರು ಇಕ್ರಾ ಹೆಸರಿನಲ್ಲಿ ಕಂಪನಿ ತೆಗೆದು ನಾಮ ಹಾಕಿದ್ದಾರೆ.
ಅತಿ ಬೇಗ ಶ್ರೀಮಂತರಾಗುವ, ಸುಖವಾಗಿ ಹಣ ಸಂಪಾದನೆ ಮಾಡುವ ಬಗ್ಗೆ ಆಲೋಚನೆ ಮಾಡುವರು ಇಂತಹ ಬ್ಲೇಡ್ ಸ್ಕೀಮ್ ಗಳಲ್ಲಿ ಹಣ ಹೂಡಿಕೆ ಮಾಡಿ ದುಡಿದಿದ್ದನ್ನು ಕಳೆದುಕೊಳ್ಳುತ್ತಾರೆ. ಅಡ್ಡ ಮಾರ್ಗದಿಂದ ಹಣ ಸಂಪಾದನೆ ಮಾಡುವುದು ಕಷ್ಟವಿದೆ ಎಂದು ಜನ ಸಾಮಾನ್ಯರು ಪರಿಗಣಿಸಬೇಕು. ದುಪ್ಪಟ್ಟು ಹಣ ನೀಡುವ ಬ್ಲೇಡ್ ಸ್ಕೀಮ್ ಗಳನ್ನು ನಂಬಿ ಯಾರೂ ಹಣ ಹೂಡಿಕೆ ಮಾಡಬಾರದು ಎಂದು ಹಿರಿಯ ಪೊಲೀಸ್ ಅಧಿಕಾರಿ ಕಿವಿಮಾತು ಹೇಳಿದ್ದಾರೆ.












Click it and Unblock the Notifications