ಫೋನ್ ಕದ್ದಾಳಿಕೆ ಪ್ರಕರಣ ತನಿಖೆಯಿಂದ ಹಿಂದಕ್ಕೆ ಸರಿದ ಐಪಿಎಸ್ ಅಧಿಕಾರಿ
ಬೆಂಗಳೂರು, ಆಗಸ್ಟ್ 14: ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಫೋನ್ ಕದ್ದಾಲಿಕೆ ಪ್ರಕರಣದ ತನಿಖೆ ನಡೆಸುತ್ತಿದ್ದ ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್ ಅವರು ತನಿಖೆಯಿಂದ ಹಿಂದೆ ಸರಿದಿದ್ದಾರೆ.
ಪ್ರಸ್ತುತ ಬೆಂಗಳೂರು ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಅವರು ಹಾಗೂ ಮಧ್ಯವರ್ತಿ ಫರಾಜ್ ಎಂಬುವರ ನಡುವೆ ನಡೆದಿರುವ ಖಾಸಗಿ ಸಂಭಾಷಣೆಯ ಆಡಿಯೋ ವೈರಲ್ ಆಗಿತ್ತು. ಈ ಆಡಿಯೋದಲ್ಲಿ ಭಾಸ್ಕರ್ ರಾವ್ ಅವರು ಕಮೀಷನರ್ ಹುದ್ದೆಗೆ ಮಾಡಿದ್ದ ಲಾಭಿಯ ವಿವರಗಳು ಇದ್ದವು.
ಭಾಸ್ಕರ್ ರಾವ್ ಅವರು ಬೆಂಗಳೂರು ಕಮೀಷನರ್ ಆದ ನಂತರ ಈ ಆಡಿಯೋ ವೈರಲ್ ಆಗಿತ್ತು. ಕಮೀಷನರ್ ಭಾಸ್ಕರ್ ರಾವ್ ಈ ಆಡಿಯೋ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅವರನ್ನು ನೇಮಿಸಿದ್ದರು. ಆದರೆ ಈಗ ಅವರು ತನಿಖೆಯಿಂದ ಹಿಂದೆ ಸರಿಯುವ ನಿರ್ಣಯ ತೆಗೆದುಕೊಂಡಿದ್ದಾರೆ.

ಈ ಬಗ್ಗೆ ಡಿಐಜಿ ನೀಲಮಣಿ ರಾಜು ಅವರಿಗೆ ಪತ್ರ ಬರೆದಿರುವ ಸಂದೀಪ್ ಪಾಟೀಲ್, ತನಿಖೆಯಿಂದ ನನ್ನನ್ನು ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದಾರೆ. ಮನವಿಯ ಜೊತೆಗೆ ತನಿಖೆಯ ಮಧ್ಯಂತರ ವರದಿಯನ್ನೂ ಕೊಟ್ಟಿರುವ ಸಂದೀಪ್ ಪಾಟೀಲ್, ಪೊಲೀಸ್ ಇಲಾಖೆಯ ದೊಡ್ಡ ದೊಡ್ಡ ಅಧಿಕಾರಿಗಳು ಈ ಪ್ರಕರಣದಲ್ಲಿ ಸಂಬಂದ ಹೊಂದಿರುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
ಈ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ಅಥವಾ ಬೇರೆ ಯಾವುದಾದರೂ ಪ್ರತ್ಯೇಕ ಪೊಲೀಸ್ ಏಜೆನ್ಸಿ ಕಡೆಯಿಂದ ತನಿಖೆ ಮಾಡಿಸುವಂತೆಯೂ ಸಂದೀಪ್ ಪಾಟೀಲ್ ಸಲಹೆ ನೀಡಿದ್ದಾರೆ. ತಮಗಿಂತ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ಪ್ರಕರಣದಲ್ಲಿ ಶಾಮೀಲಾಗಿರುವ ಕಾರಣ ಸಂದೀಪ್ ಪಾಟೀಲ್ ಅವರು ಈ ನಿರ್ಣಯ ಕೈಗೊಂಡಿದ್ದಾರೆ ಎನ್ನಲಾಗಿದೆ.
ಭಾಸ್ಕರ್ ರಾವ್ ಅವರ ಫೋನ್ ಕದ್ದಾಲಿಕೆ ಪ್ರಕರಣದ ಹಿಂದೆ ಮಾಜಿ ಬೆಂಗಳೂರು ಆಯುಕ್ತರ ಕೈವಾಡ ಇದೆ. ಮತ್ತು ಕೆಲವು ರಾಜಕಾರಣಿಗಳ ಕೈವಾಡವೂ ಇದೆ ಎನ್ನಲಾಗುತ್ತಿದೆ.












Click it and Unblock the Notifications