ಫಿಂಗರ್ ಪ್ರಿಂಟ್ ನೆರವಿನಿಂದ 4 ಕೆ.ಜಿ ಚಿನ್ನ ಪತ್ತೆ ಮಾಡಿದ ಸಿಸಿಬಿ ಪೊಲೀಸರು !
ಬೆಂಗಳೂರು, ಜನವರಿ 02: ದೆಹಲಿಯಿಂದ ಕಾರಿನಲ್ಲಿ ಬೆಂಗಳೂರಿಗೆ ಬಂದು ಸತತ ಮೂರು ವರ್ಷಗಳಿಂದ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲಕದ ಅಂತರಾಜ್ಯ ಕಳ್ಳ ಗ್ಯಾಂಗ್ ನ್ನು ಫಿಂಗರ್ ಪ್ರಿಂಟ್ ನೆರವಿನಿಂದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಸುಮಾರು 2.25 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ವರದಿಯಾಗಿದ್ದ 35 ಮನೆ ಕಳ್ಳತನ ಪ್ರಕರಣಗಳು ಪತ್ತೆಯಾಗಿದ್ದು, ಸಿಸಿಬಿ ಪೊಲೀಸರ ಕಾರ್ಯಾಚರಣೆಯನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಶ್ಲಾಘಿಸಿ ನಗದು ಬಹುಮಾನ ಘೋಷಣೆ ಮಾಡಿದ್ದಾರೆ.ಉತ್ತರ ಪ್ರದೇಶ ಮೂಲದ ಫಯೂಮ್ ಹಾಗೂ ಮುರಸಲೀಂ ಮೊಹಮದ್ ಬಂಧಿತ ಆರೋಪಿಗಳು.
ಹೊಸ ವರ್ಷದ ಹೊಸ್ತಿಲಿನಲ್ಲಿ ಮರೆಯಲಾರದ ಬೆಂಗಳೂರಿನ ಅಪರಾಧ ಲೋಕದ ಹೆಜ್ಜೆಗಳು !
ಬೆಂಗಳೂರಿನ ಅನ್ನಪೂರ್ಣೇಶ್ವರಿನಗರದಲ್ಲಿ ನಡೆದಿದ್ದ ಕಳ್ಳತನ ಪ್ರಕರಣವೊಂದರ ಜಾಡು ಹಿಡಿದು ತನಿಖೆ ನಡೆಸಿದಾಗ ಆರೋಪಿಗಳ ಬೆರಳು ಮುದ್ರೆ ನೆರವಿನಿಂದ ಈ ಪ್ರಕರಣ ಪತ್ತೆಯಾಗಿದೆ. ಈ ಖದೀಮರ ಪತ್ತೆಗಾಗಿ ಉತ್ತರ ಪ್ರದೇಶ ಪೊಲೀಸರು ಬಹುಮಾನ ಘೋಷಣೆ ಮಾಡಿದ್ದರು. ಈ ಖದೀಮರು ಎಟಿಎಂ ದರೋಡೆ ಮಾಡುತ್ತಿದ್ದು, ಎಟಿಎಂ ಫುಯೂಮ್ ಗ್ಯಾಂಗ್ ಎಂದೇ ಖ್ಯಾತಿ ಪಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೂರು ವರ್ಷದಿಂದ ಲೂಟಿ:
ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ವರ್ಷಗಳಿಂದ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದವು. ಸ್ಥಳೀಯ ಕಳ್ಳರನ್ನು ವಿಚಾರಣೆ ನಡೆಸಿದರೂ ಪತ್ತೆಯಾಗಿರಲಿಲ್ಲ. ಅಂತಾರಾಜ್ಯ ಗ್ಯಾಂಗ್ ನ ಕೈವಾಡ ಇರುವ ಬಗ್ಗೆ ಸಿಸಿಬಿ ಡಿಸಿಪಿ ಕೆ.ಪಿ. ರವಿಕುಮಾರ್ ಅವರಿಗೆ ಮಾಹಿತಿ ಸಿಕ್ಕಿತ್ತು. ಇದರ ಜಾಡು ಹಿಡಿದು ತನಿಖೆ ನಡೆಸಲು ಶುರು ಮಾಡಿದ್ದರು. 2016 ರಲ್ಲಿ ಉತ್ತರ ಪ್ರದೇಶದ ಪೊಲೀಸರು ಫಯೂಮ್ ನನ್ನು ಬಂಧಿಸಿದ್ದರು. ನೊಯಿಡಾ ಜೈಲಿನಲ್ಲಿದ್ದಾಗಲೇ ಗ್ಯಾಂಗ್ ಕಟ್ಟಿದ್ದ ಈತ 2017 ರಲ್ಲಿ ಬಿಡುಗಡೆಯಾಗಿದ್ದ. ಅನ್ನಪೂರ್ಣೇಶ್ವರಿ ನಗರದ ಕಳ್ಳತನ ಪ್ರಕರಣ ಸಂಬಂಧ ಬೆರಳು ಮುದ್ರೆ ನೆರವಿನಿಂದ ಇವರ ಬಗ್ಗೆ ಸಂಶಯ ವ್ಯಕ್ತವಾಗಿತ್ತು. ಹೈದರಾಬಾದ್ ನಲ್ಲಿ ಕಳ್ಳತನ ಮಾಡಿ ಬಂಧನಕ್ಕೆ ಒಳಗಾಗಿದ್ದ ಇದೇ ಗ್ಯಾಂಗ್ ನ ಬೆರಳು ಮುದ್ರೆ ಪಡೆದು ಪರಿಶೀಲಿಸಿದಾಗ ಪೊಲೀಸರ ಅನುಮಾನ ಖಚಿತವಾಗಿತ್ತು.
ಬೇಟೆ ಆರಂಭ:
ಡಿಸಿಪಿ ಕೆ.ಪಿ. ರವಿಕುಮಾರ್ ಮಾರ್ಗದರ್ಶನದಲ್ಲಿ ಎಸಿಪಿ ನಾಗರಾಜ್ ಮತ್ತು ತಂಡ ಆರೋಪಿ ಫಯೂಮ್ ನನ್ನು ವಶಕ್ಕೆ ಪಡೆದಿತ್ತು. ವಿಚಾರಣೆ ನಡೆಸಿದಾಗ ಮುರಾದಾಬಾದ್ ನಲ್ಲಿ ಚಿನ್ನ ಇಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದ. ಸತತ ಏಳು ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಸುಮಾರು ನಾಲ್ಕು ಕೆ.ಜಿ ಚಿನ್ನ ವಶಪಡಿಸಿಕೊಂಡಿದ್ದಾರೆ. ಬಂಧಿತರು ಬ್ಯಾಡರಹಳ್ಳಿ, ಸಂಜಯನಗರ, ಹೆಬ್ಬಾಳ, ಗೋವಾ, ಬೆಳಗಾವಿಯಲ್ಲಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ಕಾರ್ ನಲ್ಲಿ ಪ್ರಯಾಣ:
ಉತ್ತರ ಪ್ರದೇಶದಿಂಧ ತನ್ನ ಸಹಚರರೊಂದಿಗೆ ಕಾರಿನಲ್ಲಿ ಬೆಂಗಳೂರಿಗೆ ಬರುತ್ತಿದ್ದ ಫಯೂಮ್, ಬ್ಯಾಗು ಹಾಕಿಕೊಂಡು ವಾಷಿಂಗ್ ಮಷಿನ್ ರಿಪೇರಿ ಹೆಸರಿನಲ್ಲಿ ಯಾರೂ ಇಲ್ಲದ ಮನೆಗಳ ಬೆಲ್ ಹೊಡೆಯುತ್ತಿದ್ದರು. ಯಾರಾದರೂ ಬಾಗಿಲು ತೆಗೆದರೆ ವಾಷಿಂಗ್ ಮಷಿನ್ ರಿಪೇರಿ ಮಾಡುವುದಾಗಿ ಹೇಳುತ್ತಿದ್ದರು. ಯಾರೂ ತೆಗೆಯದಿದ್ದರೆ ಬಾಗಿಲು ಮೀಟಿ ಚಿನ್ನಾಭರಣ ಕಳವು ಮಾಡಿ ಕಾರಿನಲ್ಲಿ ವಾಪಸು ದೆಹಲಿಗೆ ಹೋಗುತ್ತಿದ್ದರು. ದೆಹಲಿ, ಹರ್ಯಾಣದಿಂದ ಗ್ಯಾಂಗ್ ಕಟ್ಟಿಕೊಂಡು ಬಂದು ಫಯೂಮ್ ಕಳ್ಳತನ ಮಾಡುತ್ತಿದ್ದ. ಉತ್ತರ ಪ್ರದೇಶದಲ್ಲಿ ಫಯೂಮ್ ವಿರುದ್ಧ ದರೋಡೆ, ಕೊಲೆ ,, ಕೊಲೆಯತ್ನ ಸೇರಿದಂತೆ ಸುಮಾರು ನಲವತ್ತು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಈತನನ್ನು ಹುಡುಕಿ ಕೊಡುವರಿಗೆ ಬಹುಮಾನ ನೀಡುವುದಾಗಿ ಪೊಲೀಸರು ಘೋಷಣೆ ಮಾಡಿದ್ದರು.
ಹೈದರಾಬಾದ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಫಯೂಮ್ ನ ಬೆರಳು ಮುದ್ರೆ ಹಾಗೂ ಅನ್ನಪೂರ್ಣೇಶ್ವರಿ ನಗರ ಮನೆಗಳ್ಳತನ ಪ್ರಕರಣದ ಬೆರಳು ಮುದ್ರೆ ಪರಿಶೀಲಿಸಿದಾಗ ಅಸಲಿ ಆರೋಪಿಗಳು ಇವರೇ ಎಂದು ಗೊತ್ತಾಯಿತು. 2018 ರಲ್ಲಿ ದಾಖಲಾಗಿದ್ದ ಮನೆ ಕಳ್ಳತನ ಪ್ರಕರಣದಲ್ಲಿ ಸಿ ವರದಿ ಸಲ್ಲಿಸಲಾಗಿತ್ತು. ಬಾಡಿ ವಾರಂಟ್ ಮೂಲಕ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸುಮಾರು ಕಳ್ಳತನ ಪ್ರಕರಣ ಪತ್ತೆಯಾಗಿವೆ ಎಂದು ಡಿಸಿಪಿ ಕೆ.ಪಿ. ರವಿಕುಮಾರ್ ತಿಳಿಸಿದ್ದಾರೆ.
ದಾರಿ ತಪ್ಪಿಸಿದ್ದ ಖದೀಮರು:
ಆರಂಭದಲ್ಲಿ ಸಿಸಿಬಿ ಪೊಲೀಸರಿಗೆ ಈ ಖದೀಮರು ದಾರಿ ತಪ್ಪಿಸಿದ್ದಾರೆ. ಗುರಂಗಾವ್ ನ ಕೊಲೆ ಆರೋಪಿ ಮೂಲಕ ಚಿನ್ನ ಮಾರಾಟ ಮಾಡಿದ್ದಾಗಿ ತಿಳಿಸಿದ್ದಾರೆ. ಗುರಂಗಾವ್ ಪೊಲೀಸರನ್ನು ವಿಚಾರಣೆ ನಡೆಸಿದಾಗ ಆತ ಒಂದು ವರ್ಷದ ಹಿಂದೆ ಕೊಲೆಯಾಗಿದ್ದಾನೆ ಎಂದು ತಿಳಿಸಿದ್ದಾರೆ. ಪೊಲೀಸ್ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಯಲಿಗೆ ಬಂದಿದೆ. ಬಳಿಕ ಫಯೂಮ್ ತನ್ನ ಪಾಲಿನ ಚಿನ್ನವನ್ನು ಸಹೋದರಿಯ ಮನೆಯಲ್ಲಿ ಬಚ್ಚಿಟ್ಟಿದ್ದು, ಸಿಸಿಬಿ ಪೊಲೀಸರು ಅಲ್ಲಿಗೆ ಹೋಗಿ ಜಪ್ತಿ ಮಾಡಿದ್ದಾರೆ.