ಲೋನ್ ಆಪ್‌ಗಳ ಮೀಟರ್ ಬಡ್ಡಿ ಕೇಸಿಗೆ ಪೊಲೀಸರು ಎಳ್ಳುನೀರು ಬಿಟ್ಟರೇ ?

ಬೆಂಗಳೂರು, ಮಾರ್ಚ್‌ 08: ಮೀಟರ್ ಬಡ್ಡಿ ವಸೂಲಿ ಮಾಡುವ ಮೂಲಕ ಬಡವರ ರಕ್ತ ಹೀರುತ್ತಿರುವ ಆನ್‌ಲೈನ್ ತುರ್ತು ಸಾಲ ಆಪ್‌ಗಳ ಅಕ್ರಮಕ್ಕೆ ಅಂಕುಶ ಹಾಕುವಲ್ಲಿ ಸಿಸಿಬಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ. ಆನ್‌ಲೈನ್ ಲೋನ್ ಆಪ್‌ಗಳ ಅಕ್ರಮಕ್ಕೆ ಇತಿಶ್ರೀ ಹಾಡುವ ನಿಟ್ಟಿನಲ್ಲಿ ಸಿಸಿಬಿ ಪೊಲೀಸರು ಲೋನ್ ಆಪ್‌ ಕಚೇರಿ ಹಾಗೂ ಕಾಲ್ ಸೆಂಟರ್ ಗಳ ಮೇಲೆ ದಾಳಿ ಮಾಡಿದ್ದರು. ಆರಂಭ ಶೂರತ್ವ ತೋರಿದ್ದ ಸಿಸಿಬಿ ಪೊಲೀಸರು ಇದೀಗ ಪ್ರಕರಣದ ತನಿಖೆ ಕೈ ಬಿಟ್ಟಂತೆ ಕಾಣುತ್ತಿದೆ. ಬಿಡಿಗಾಸು ಸಾಲ ಪಡೆದು ಸಾಮಾಜಿಕ ಮಾಧ್ಯಮದಲ್ಲಿ ಮಾನ ಕಳೆದುಕೊಂಡ ಸಾಲಗಾರರಿಗೆ ಮತ್ತೆ ತುರ್ತು ಸಾಲ ಲೋನ್ ಆಪ್ ಗಳು ಕಾಟ ಕೊಡುತ್ತಿವೆ. ಲಕ್ಷಾಂತರ ಮಂದಿ ಸಾಲಗಾರರು ಮತ್ತೆ ಲೋನ್ ಆಪ್‌ಗಳ ಕಿರುಕುಳ ತಾಳಲಾರದೇ ನರಕ ಅನುಭವಿಸುತ್ತಿದ್ದಾರೆ.

ಕೊರೋನಾ ಸಂಕಷ್ಟ ಮತ್ತು ಸಾಲ

ಕೊರೋನಾ ಸಂಕಷ್ಟ ಮತ್ತು ಸಾಲ

ಕರೋನಾ ಸಂಕಷ್ಟ ಕಾಲದಲ್ಲಿ ಜನರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಈ ವೇಳೆ ಅಣಬೆಗಳಂತೆ ಹುಟ್ಟಿಕೊಂಡ ತುರ್ತು ಸಾಲ ಲೋನ್ ಆಪ್‌ಗಳು ಒಂದೇ ನಿಮಿಷದಲ್ಲಿ ಸಾಲ ಕೊಡಲು ಮುಂದಾದವು. ಕೇವಲ ಸಂಪರ್ಕ ಸಂಖ್ಯೆ ಮಾನದಂಡ ಇಟ್ಟುಕೊಂಡೇ ಸಾಲ ನೀಡಲು ಮುಂದಾದವು. ಕಷ್ಟ ಕಾಲದಲ್ಲಿ ಜನರು ಬಿಡಿಗಾಸು ಸಾಲ ಪಡೆದರು. ಆದರೆ, ಐದು ಸಾವಿರ ಸಾಲಕ್ಕೆ ಬಡ್ಡಿ ರೂಪದಲ್ಲಿ ಐದು ಸಾವಿರ ಪಾವತಿಸಿದರೂ ಜನರ ಸಾಲ ತೀರಲಿಲ್ಲ. ಬಡ್ಡಿಗೆ ಮೀಟರ್ ಬಡ್ಡಿ ಹಾಕಿ ವಸೂಲಿಗೆ ನಿಂತ ಆಪ್ ಗಳ ಉಪಟಳಕ್ಕೆ ಸಾಲಗಾರರು ಹೈರಾಣ ಆದರು. ಸಾಲಗಾರರ ಮರ್ಯಾದೆ ತೆಗೆದು ಆಪ್ತರ ಸಂಪರ್ಕ ಸಂಖ್ಯೆಗಳಿಗೆ ಕಳಿಸಿ ಲೋನ್ ಆಪ್‌ಗಳೂ ಮರ್ಯಾದೆ ತೆಗೆದವು. ಮರ್ಯಾದೆಗೆ ಅಂಜಿ ಎಷ್ಟೋ ಮಂದಿ ಆತ್ಮಹತ್ಯೆಗೆ ಶರಣಾದರು. ಇದು ಪೊಲೀಸರ ಕಣ್ಣು ತೆರೆಸಿತ್ತು.

ತನಿಖೆಯಲ್ಲಿ ಅಕ್ರಮಗಳ ಸರಮಾಲೆ

ತನಿಖೆಯಲ್ಲಿ ಅಕ್ರಮಗಳ ಸರಮಾಲೆ

ಕಾನೂನು ಪ್ರಕಾರ ಸಾಲ ನೀಡುವ ಸಂಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ನೋಂದಣಿ ಮಾಡಿರಬೇಕು. ಇಲ್ಲವೇ ಆಯಾ ರಾಜ್ಯ ಕಾನೂನು ಅಡಿ ನೋಂದಣಿ ಮಾಡಿ ನಿಗದಿತ ಬಡ್ಡಿ ದರಕ್ಕೆ ಸಾಲ ನೀಡಬೇಕಿತ್ತು. ಎಲ್ಲಾ ನಿಯಮ ಗಾಳಿಗೆ ತೂರಿದ್ದ ಚೀನಾ ಮೂಲದ ಕಂಪನಿಗಳು ಆಪ್‌ಗಳ ಮೂಲಕ ಸಾಲ ನೀಡಿ ನಿಯಮ ಉಲ್ಲಂಘನೆ ಮಾಡಿದ್ದವು. ಐಟಿ ಕಾಯ್ದೆ ಉಲ್ಲಂಘಸಿ ಸಾಲಗಾರರ ಸಂಪರ್ಕ ಸಂಖ್ಯೆಗಳ ಡಾಟಾ ಕದ್ದು ಅಕ್ರಮ ಎಸಗಿದ್ದವು. ಸಾಲ ಪಾವತಿಸದವರ ಭಾವ ಚಿತ್ರ ದುರ್ಬಳಕೆ ಮಾಡಿಕೊಂಡು ಮರ್ಯಾದೆ ತೆಗೆದು ಸಾಮಾಜಿಕ ಜಾಲ ತಾಣದಲ್ಲಿ ಪ್ರಚಾರ ಮಾಡಿ ಅಕ್ರಮ ಎಸಗಿದವು. ಮರ್ಯಾದೆ ತೆಗೆಯಲು ಅವಾಚ್ಯ ಪದಗಳಿಂದ ಬಯ್ಯಲಿಕ್ಕೆ ಕಾಲ್ ಸೆಂಟರ್‌ಗಳನ್ನು ತೆರೆದವು. ಹೆಜ್ಜೆ ಹೆಜ್ಜೆಗೂ ಕಾನೂನು ಉಲ್ಲಂಘಿಸಿದ್ದ ಲೋನ್ ಆಪ್‌ ಕಂಪನಿಗಳ ವಿರುದ್ಧ ಪೊಲೀಸರು ಸರಣಿ ದೂರು ದಾಖಲಿಸಿದ್ದರು.

ಮೂರು ರಾಜ್ಯಗಳಲ್ಲಿ ತನಿಖೆ

ಮೂರು ರಾಜ್ಯಗಳಲ್ಲಿ ತನಿಖೆ

ನೆರೆ ರಾಜ್ಯ ತೆಲಂಗಾಣದಲ್ಲಿ ಸುಮಾರು 400 ಲೋನ್ ಆಪ್ ಗಳ ವಿರುದ್ಧ ಕೇಸು ದಾಖಲಿಸಿದರು. ಕೆಲವು ಅಕ್ರಮ ಆಪ್‌ಗಳನ್ನು ಗೂಗಲ್ ಪ್ಲೇ ಸ್ಟೋರ್ ನಿಂದಲೇ ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಕ್ರಮ ಜರುಗಿಸಿದರು. ಅಂತೂ ಪ್ರಕರಣಕ್ಕೆ ಒಂದು ತಾರ್ಕಿಕ ಅಂತ್ಯ ಕಾಣಿಸುವಲ್ಲಿ ತೆಲಂಗಾಣ ಸೈಬರಾಬಾದ್ ಪೊಲೀಸರು ಯಶಶ್ವಿಯಾದರು. ತಮಿಳುನಾಡು ಪೊಲೀಸರು ಕೂಡ ಅಷ್ಟೇ ಪ್ರಾಮಾಣಿಕವಾಗಿ ತನಿಖೆ ನಡೆಸಿ ಆನ್‌ಲೈನ್ ಲೋನ್ ಆಪ್‌ಗಳಿಗೆ ಬುದ್ಧಿ ಕಲಿಸಿದರು. ಆದೇ ರೀತಿ ರಾಜ್ಯದಲ್ಲಿ ಕೂಡ ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದ್ದರು. ಆನ್‌ಲೈನ್ ಲೋನ್ ಆಪ್ ಕಚೇರಿಗಳ ಮೇಲೆ ದಾಳಿ ನಡೆಸಿ ಜಪ್ತಿ ಮಾಡಿದರು. ಇದನ್ನು ನೋಡಿ ಸಾಲಗಾರರು ನಿಟ್ಟುಸಿರು ಬಿಟ್ಟಿದ್ದರು. ಆದರೆ, ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸದೇ ಸಿಸಿಬಿ ಪೊಲೀಸರು ಅರ್ಧದಲ್ಲಿ ಕೈ ಬಿಟ್ಟಿದ್ದಾರೆ. ಲಕ್ಷಾಂತರ ಮಂದಿ ಹಿತಾಸಕ್ತಿ ಅಡಗಿರುವ ಪ್ರಕರಣದ ತನಿಖೆಯೇ ಕೈ ಬಿಟ್ಟಿದ್ದಾರೆ. ಇದರಿಂದ ಆನ್‌ಲೈನ್ ಲೋನ್ ಆಪ್‌ಗಳ ಉಪಟಳ ಮತ್ತೆ ಶುರುವಾಗಿದೆ.

ಸಿಸಿಬಿ ತನಿಖೆ ಹಳ್ಳ ಹತ್ತಿಸಿದ್ದು ಯಾಕೆ ?

ಸಿಸಿಬಿ ತನಿಖೆ ಹಳ್ಳ ಹತ್ತಿಸಿದ್ದು ಯಾಕೆ ?

ಅಕ್ರಮವಾಗಿ ತಲೆಯೆತ್ತಿರುವ ಲೋನ್ ಆಪ್‌ಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಿಸಿಬಿ ಪೊಲೀಸರು ಆರಂಭಿಸಿದ್ದ ತನಿಖೆ ಸಂಪೂರ್ಣವಾಗಿ ಹಳ್ಳ ಹತ್ತಿದೆ. ಸಿಸಿಬಿ ಹಿರಿಯ ಪೊಲೀಸ್ ಅಧಿಕಾರಿಗಳು ಆಸಕ್ತಿ ತೋರದ ಕಾರಣ ಈ ಪ್ರಕರಣದ ತನಿಖೆ ನಿರ್ಲಕ್ಷ್ಯತೆಗೆ ಒಳಗಾಗಿದೆ. ಕೇವಲ ಎರಡು ದಾಳಿ ಮಾಡಿದ್ದ ಸಿಸಿಬಿ ಪೊಲೀಸರು ಕೊನೆಗೆ ತನಿಖೆಯನ್ನೇ ಸ್ಥಗಿತಗೊಳಿಸಿದ್ದಾರೆ ಎಂದು ಉನ್ನತ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಲಕ್ಷಾಂತರ ಬಡವರ ಹಿತಾಸಕ್ತಿ ಅಡಗಿರುವ ಈ ಪ್ರಕರಣಕ್ಕೆ ಪೊಲೀಸರು ತಾರ್ಕಿಕ ಅಂತ್ಯ ಕಾಣಿಸುವರೇ ? ಲೋನ್ ಆಪ್‌ಗಳ ಅಕ್ರಮಗಳ ಸರಮಾಲೆಗೆ ಬ್ರೇಕ್ ಹಾಕಲಿದ್ದಾರೆ ಎಂಬ ಜನರ ನಿರೀಕ್ಷೆ ಹುಸಿಯಾಗಿದೆ. ಸಿಸಿಬಿ ಪೊಲೀಸರು ಈ ಪ್ರಕರಣದ ಬಗ್ಗೆ ನಿರ್ಲಕ್ಷ್ಯತೆ ತೋರಿದರೋ ದೇವರೇ ಬಲ್ಲ. ಸಿಸಿಬಿ ಪೊಲೀಸರ ಮೌನಕ್ಕೆ ಹೋಗುತ್ತಿದ್ದಂತೆ ಇದೀಗ ನಕಲಿ ಲೀಗಲ್ ನೋಟಿಸ್ ಕೊಟ್ಟು ಹೆದರಿಸುವ ಕಾರ್ಯವನ್ನು ಆಪ್‌ಗಳು ಕೈಗೆತ್ತಿಕೊಂಡಿವೆ. ಸಾಲ ಮತ್ತು ಬಡ್ಡಿ ಪಾವತಿಸದಿದ್ದರೆ ನಿಮ್ಮ ಮೇಲೆ ಕೇಸು ದಾಖಲಿಸುವುದಾಗಿ ಹೆದರಿಸುತ್ತಿವೆ. ಇದರ ಜತೆಗೆ ಮರ್ಯಾದೆ ತೆಗೆಯುವ ಕೆಲಸವನ್ನು ಮತ್ತೆ ಆರಂಭಿಸಿವೆ ಎಂದು ಸಂತ್ರಸ್ತ ಸಾಲಗಾರ ಖಾಸಗಿ ಉದ್ಯೋಗಿ ತಮ್ಮ ನೋವನ್ನು ಒನ್ ಇಂಡಿಯಾ ಕನ್ನಡ ಜತೆ ತೋಡಿಕೊಂಡರು.

Recommended Video

    'ಬಜೆಟ್ ನಲ್ಲಿ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಲಾಗಿದೆ'- ಸಿಎಂ ಬಿ ಎಸ್ ವೈ | Oneindia Kannada
    ಸಿಐಡಿ ಪೊಲೀಸರದ್ದು ಅದೇ ಕಥೆ

    ಸಿಐಡಿ ಪೊಲೀಸರದ್ದು ಅದೇ ಕಥೆ

    ಇನ್ನು ಸಿಸಿಬಿ ಪೊಲೀಸರು ತನಿಖೆ ಆರಂಭಿಸುತ್ತಿದ್ದಂತೆ ಅತ್ತ ರಾಜ್ಯ ಮಟ್ಟದ ತನಿಖೆ ನಡೆಸಲು ಸಿಐಡಿ ಸೈಬರ್ ಪೊಲೀಸರು ಮುಂದಾಗಿದ್ದರು. ಒಂದೇ ಸಲ ಎರಡು ತನಿಖೆ ಆರಂಭವಾಗಿತ್ತು. ಆದರೆ, ಸಾಲ ಕಟ್ಟಿದವರು ವಾಪಸು ಕಟ್ಟಲಿ ಬಿಡಿ ಎಂಬ ಮನಸ್ಥಿತಿಗೆ ಸಿಐಡಿ ಸೈಬರ್ ಪೊಲೀಸರು ತೀರ್ಮಾನಕ್ಕೆ ಬಂದಂತಿದ್ದಾರೆ. ಅವರು ಸಹ ನೆಪಕ್ಕೆ ತನಿಖೆ ಮಾಡಿ ಕೈ ಕಟ್ಟಿ ಕೂತಿದ್ದಾರೆ. ಲಕ್ಷ ಲಕ್ಷ ಸಾಲಗಾರರ ಜೀವನದಲ್ಲಿ ಭರವಸೆ ಮೂಡಿಸಿದ್ದ ಪೊಲೀಸರು ಮಹತ್ವದ ಪ್ರಕರಣಗಳ ತನಿಖೆ ಕೈ ಬಿಟ್ಟಿರುವುದು ಸಾರ್ವಜನಿಕ ವಲಯದಲ್ಲಿಲ ಆಕ್ರೋಶಕ್ಕೆ ಕಾರಣವಾಗಿದೆ. ಕಣ್ಣೆದರು ಅಕ್ರಮ ನಡೆಯುತ್ತಿದೆ. ಬಡ- ಮಧ್ಯಮ ವರ್ಗದ ಜನ ಮೀಟರ್ ಬಡ್ಡಿ ಕಟ್ಟಲಾಗದೇ ತತ್ತರಿಸುತ್ತಿದ್ದಾರೆ. ಸಿಸಿಬಿ ಹಾಗೂ ಸಿಐಡಿ ಪೊಲೀಸರು ಈಗಲಾದರೂ ಎಚ್ಚೆತ್ತುಕೊಳ್ಳುತ್ತಾರಾ ಕಾದು ನೋಡಬೇಕು.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+