ಬೆಂಗ್ಳೂರು ನಿರ್ಮಾತೃ ಕೆಂಪೇಗೌಡ ಹುಟ್ಟುವ ಮೊದಲೇ ಇತ್ತು ಯಲಚೇನಹಳ್ಳಿ
ಇತ್ತೀಚೆಗೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನ ಯಲಚೇನಹಳ್ಳಿಯಲ್ಲಿ ಶಿಲಾ ಶಾಸನವೊಂದು ಪತ್ತೆಯಾಗಿದ್ದು, ಅದು 616 ವರ್ಷಗಳಷ್ಟು ಹಳೆಯದು ಎಂಬುದು ಆಸಕ್ತಿಕರ ಅಂಶ. ಈ ಬಗ್ಗೆ ಇತಿಹಾಸಕಾರರಾದ ಪಿ.ವಿ.ಕೃಷ್ಣಮೂರ್ತಿ ಅಧ್ಯಯನ ಮಾಡಿದ್ದಾರೆ.
ಯಲಚೇನಹಳ್ಳಿಯನ್ನು ಆಗ ಎಳಜೀಯರಹಳ್ಳಿ ಎಂದು ಕರೆಯಲಾಗುತ್ತಿತ್ತು ಎಂಬ ಅಂಶ ತಿಳಿದುಬರುತ್ತದೆ. ಆ ಶಾಸನದಲ್ಲಿ ಕೆರೆ ನಿರ್ಮಾಣದ ಬಗ್ಗೆ ಕೂಡ ಪ್ರಸ್ತಾವ ಇದೆ.
ಇತಿಹಾಸಕಾರರ ಅಭಿಪ್ರಾಯದ ಪ್ರಕಾರ, ಈ ಅಪರೂಪದ ಶಾಸನ ಕೆಂಪೇಗೌಡರ ಕಾಲಕ್ಕಿಂತ ಹಿಂದಿನದು. ಏಕೆಂದರೆ, ಈಚೆಗಷ್ಟೇ ಕೆಂಪೇಗೌಡರ 509ನೇ ಜನ್ಮ ವರ್ಷಾಚರಣೆ ಆಚರಿಸಲಾಗಿತ್ತು. ಪೈಪ್ ಲೈನ್ ರಸ್ತೆಯ ಎಲ್ಲಮ್ಮ ದೇವಸ್ಥಾನದ ಬಳಿ ಅರ್ಧ ಹಾಳಾಗಿರುವ ಶಿಲಾ ಶಾಸನ ಸಿಕ್ಕಿದ್ದು, ಅದನ್ನು ಈಗ ಜೋಪಾನ ಮಾಡಲಾಗಿದೆ.

ಹಳೆಗನ್ನಡದಲ್ಲಿ ಇರುವ ಶಾಸನವವು ಕಿ.ಶ.1402ಕ್ಕೆ ಸೇರಿದ್ದು, ವಿಜಯನಗರ ಅರಸ ಎರಡನೇ ಹರಿಹರನ ಆಳ್ವಿಕೆ ಕಾಲಕ್ಕೆ ಸಂಬಂಧಿಸಿದ್ದಾಗಿದೆ. ಆತನ ಅಧಿಕಾರಿಯಾದ ನಾಗಪ್ಪ ನಾಯಕ ಎಂಬಾತನ ಹತ್ತಿರ ಕೆಲಸ ಮಾಡುತ್ತಿದ್ದ ಮಾರಪ್ಪ ಮತ್ತು ನಾಚಶೆಟ್ಟಿ ನೀರು ಸಂಗ್ರಹಗಾರ ಕಟ್ಟಿ, ಎಳಜೀಯರಹಳ್ಳಿ ಸೀಮೆಗೆ ದ್ವಾರ ನಿರ್ಮಿಸಿ, ಹೆಚ್ಚು ಭೂಮಿ ಮಂಜೂರು ಮಾಡಿದರು ಎಂಬ ಒಕ್ಕಣೆ ಇದೆ.
ಈ ಶಾಸನವು ಬೆಂಗಳೂರು ನಗರ ಹಾಗೂ ಅದರ ನಿರ್ಮಾತೃ ಕೆಂಪೇಗೌಡರಿಗಿಂತ ಹಳೆಯದಾದ ಕಾರಣ ವಿಶೇಷ ಪ್ರಾಶಸ್ತ್ಯ ಇದೆ. ಈ ಬಗ್ಗೆ ಅಧ್ಯಯನ ನಡೆಯಬೇಕು. ಇನ್ನು ಯಲಚೇನಹಳ್ಳಿ ಸ್ಥಳದ ಬಗ್ಗೆ ತಿಳಿದುಕೊಳ್ಳುವುದು ಸಹ ಅಗತ್ಯವಾಗಿದೆ. ಆಗ ನಗರದ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲಲು ಇತಿಹಾಸಕಾರರಿಗೆ ನೆರವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.












Click it and Unblock the Notifications