ಪಂ.ಗಣಪತಿ ಭಟ್ ಗೆ ಇನ್ಫೋಸಿಸ್-ಬಾಲೇಖಾನ್ ಸ್ಮರಣಾರ್ಥ ಪ್ರಶಸ್ತಿ
ಬೆಂಗಳೂರು, ಸೆಪ್ಟೆಂಬರ್ 6: ಗ್ವಾಲಿಯರ್ ಹಾಗೂ ಕಿರಾಣಾ ಘರಾಣಾದ ಪ್ರಸಿದ್ಧ ಹಿಂದುಸ್ತಾನಿ ಗಾಯಕ ಪಂ. ಗಣಪತಿ ಭಟ್ ಹಾಸಣಗಿಯವರು ಈ ಬಾರಿಯ "ಇನ್ಫೋಸಿಸ್ - ಸಿತಾರ್ ನವಾಜ್ ಉಸ್ತಾದ್ ಬಾಲೇಖಾನ್ ಸ್ಮರಣಾರ್ಥ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸಿತಾರ್ ನವಾಜ್ ಉಸ್ತಾದ್ ಬಾಲೇಖಾನ್ ಮೆಮೋರಿಯಲ್ ಫೌಂಡೇಷನ್ ಟ್ರಸ್ಟ್ ವತಿಯಿಂದ ಸೆ.10, ಭಾನುವಾರದಂದು ಬೆಂಗಳೂರಿನ ಜೆಎಸ್ ಎಸ್ ಸಭಾಂಗಣದಲ್ಲಿ ಸ್ಮರಣೆ, ಸಂಗೀತ ಕಾರ್ಯಕ್ರಮ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ ಪದ್ಮಶ್ರಿ ಪುರಸ್ಕೃತ ಕವಿ ನಾಡೋಜ ಡಾ. ಕೆ. ಎಸ್ ನಿಸಾರ್ ಅಹ್ಮದ್ ಮತ್ತು ಬಿಎನ್ ಎಂ ಚಾರಿಟೀಸ್ ನ ಟ್ರಸ್ಟಿ ಮತ್ತು ಕಾರ್ಯದರ್ಶಿ ನಾರಾಯಣ್ ರಾವ್ ಆರ್. ಮಾನೆ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಬೆಂಗಳೂರಿನ ಜಯನಗರದ 8ನೇ ಬ್ಲಾಕ್ ನ ಜೆಎಸ್ ಎಸ್ ಸಭಾಂಗಣದಲ್ಲಿ ಸಂಜೆ 5ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಪರ್ವೀನ್ ಜೆ.ಶೇಖ್ ಮತ್ತು ಅನೀಸಾ ಖಾನ್ ಸೌದಾಗರ್ ಅವರಿಂದ ಹಾಡುಗಾರಿಕೆ ಇರಲಿದೆ. ಶೈಲೇಶ್ ಶೆಣೈ ತಬಲಾ, ಹರ್ಷದಾ ಅವರು ಹಾರ್ಮೋನಿಯಂ ನುಡಿಸಲಿದ್ದಾರೆ. ನಂತರ ಇನ್ಫೋಸಿಸ್ ಸಿತಾರ್ ನವಾಜ್ ಉಸ್ತಾದ್ ಬಾಲೇಖಾನ್ ಸ್ಮಾರಕ ಪ್ರಶಸ್ತಿಯನ್ನು ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕ ಪಂಡಿತ್ ಗಣಪತಿ ಭಟ್ ಹಾಸಣಗಿ ಅವರಿಗೆ ಪ್ರದಾನ ಮಾಡಲಾಗುತ್ತದೆ.

ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹ್ಮದ್, ಬಿಎನ್ ಎಂ ಚಾರಿಟೀಸ್ ನ ಟ್ರಸ್ಟಿ ಮತ್ತು ಕಾರ್ಯದರ್ಶಿ ನಾರಾಯಣ್ ರಾವ್ ಆರ್. ಮಾನೆ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ರೈಸ್ ಬಾಲೇಖಾನ್ ಮತ್ತು ಹಫೀಸ್ ಬಾಲೇಖಾನ್ ಅವರು ಹಾಡಿರುವ ಮತ್ತು ಉಸ್ತಾದ್ ರಫೀಕ್ ಖಾನ್ ಮತ್ತು ಪಂಡಿತ್ ಶ್ರೀನಿವಾಸ್ ಜೋಶಿ ಅವರು ಸಂಗೀತ ಸಂಯೋಜನೆಯನ್ನು ಮಾಡಿರುವ ವಚನ ಸ್ವರಧಾರೆ ಸಿಡಿಯನ್ನು ಬಿಡುಗಡೆ ಮಾಡಲಾಗುವುದು.
ಇದೇವೇಳೆ, ಎಂ.ಆರ್.ಕಲಾವತಿ ಅವರಿಗೆ ಸೌಭಾಗ್ಯ ಲಕ್ಷ್ಮಿ ವಸಂತರಾವ್ ಜಾಜೀ ಶಿಷ್ಯವೇತನವನ್ನು, ಬಿ.ಕೆ.ಮಮತಾ ಅವರಿಗೆ ಹಮೀದಾ ಬೇಗಂ ಬಾಲೇಖಾನ್ ಶಿಷ್ಯವೇತನವನ್ನು ನೀಡಿ ಗೌರವಿಸಲಾಗುವುದು.
ಇದಾದ ನಂತರ ಪಂಡಿತ್ ಗಣಪತಿ ಭಟ್ ಹಾಸಣಗಿ ಅವರಿಂದ ಹಾಡುಗಾರಿಕೆ ಇರಲಿದ್ದು, ಶ್ರೀಧರ್ ಮಾಂಡ್ರೆ ತಬಲ ಮತ್ತು ಗುರುಪ್ರಸಾದ್ ಹೆಗ್ಡೆ ಅವರು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.












Click it and Unblock the Notifications