ಬೆಂಗಳೂರಲ್ಲಿ ಒಂದು ಅಪರೂಪದ ಯಕ್ಷಗಾನ - 'ಇಂದ್ರ ನಾಗ'
ಬೆಂಗಳೂರು, ಆಗಸ್ಟ್ 08 : ಕರ್ನಾಟಕದ ಕರಾವಳಿಯಲ್ಲಿ ಯಕ್ಷಗಾನ ಪ್ರದರ್ಶನಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಬೆಂಗಳೂರಿನಲ್ಲಿ ಅಪರೂಪ. ಅಂತಹುದರಲ್ಲಿ ಇಲ್ಲಿನ ಯಕ್ಷಗಾನ ಆಸಕ್ತಿರಿಗಾಗಿ ಅಪರೂಪವಾದ ಯಕ್ಷಗಾನ 'ಇಂದ್ರ ನಾಗ' ಶನಿವಾರ, ಆಗಸ್ಟ್ 8ರಂದು ಪ್ರದರ್ಶಿತವಾಗುತ್ತಿದೆ.
'ಇಂದ್ರ ನಾಗ' - ಒಂದು ದೇವಾಲಯದ ಕಥೆಯ ಆಧಾರದ ಮೇಲೆ ಧರ್ಮಶಾಲಾ ಸ್ಥಳ ಪುರಾಣಕ್ಕೆ ಸಂಬಂಧಿಸಿದಂತೆ ಈ ಪ್ರಸಂಗ ರಚಿತವಾಗಿದ್ದು, ಹಲವಾರು ಅತೀ ಅಪರೂಪವಾದ ಹಾಗೂ ಪ್ರಸ್ತುತ ಯಕ್ಷಗಾನದಲ್ಲಿ ಅತೀ ವಿರಳವಾಗಿರುವ ವಿಶೇಷಗಳನ್ನು ನಿಮ್ಮ ಮುಂದೆ ತರಲಿದೆ.
ರಾಘವೇಂದ್ರ ಆಚಾರ್ ಜನ್ಸಾಲೆ ಹಾಗೂ ಬ್ರಹ್ಮೂರು ಶಂಕರ ಭಟ್ ರ ಮುದನೀಡುವ ಗಾನಸುಧೆಯೊಂದಿಗೆ ಪೆರ್ಡೂರು ಮೇಳದ ಕಲಾವಿದರಿಂದ ಪ್ರಥಮ ಪ್ರದರ್ಶನ ಇದೇ ಆಗಸ್ಟ್ 8ರ ಶನಿವಾರ, ರವೀಂದ್ರ ಕಲಾಕ್ಷೇತ್ರದಲ್ಲಿ ರಾತ್ರಿ 10.30ರಿಂದ ಪ್ರದರ್ಶಿತವಾಗಲಿದೆ. ಯಕ್ಷಲೋಕದಲ್ಲಿ ಕಲಾತ್ಮಕ ಪಯಣಕ್ಕೆ ಸಿದ್ಧರಾಗಿ.
ರಾಜಧಾನಿಯಲ್ಲಿ ಅಪರೂಪದ ಯಕ್ಷ ವೈವಿಧ್ಯಗಳಾದ ಅಟ್ಟಳಿಕೆ ರಂಗಸ್ಥಳ, ಏಳು ಸಾಂಪ್ರದಾಯಿಕ ಬಣ್ಣದ ವೇಷಗಳ ತೆರೆ ಕುಣಿತ, ಕೋರೆ ಮುಂಡಾಸಿನ ತೆರೆ ಒಡ್ಡೋಲಗ, ಗುಹನ ಒಡ್ಡೋಲಗ, ಈಶ್ವರನ ತಾಂಡವ ನೃತ್ಯ ಮುಂತಾದವುಗಳು ಸಂಭವಿಸಲಿವೆ. [ಬೆಂಗಳೂರಿನ ಯಕ್ಷದಶಾಹಕ್ಕೆ ಹೋಗೋಣ ಬನ್ನಿ]
ಮಣೂರು ವಾಸುದೇವ ಮಯ್ಯ ಮತ್ತು ಪುಷ್ಪಾ ವಿ ಮಯ್ಯ ಹಾಗೂ 'ಮಯ್ಯ ಯಕ್ಷ ಕಲ್ಯಾಣ ನಿಧಿ'ಯ ಸದಸ್ಯರ ಈ ಪರಿಕಲ್ಪನೆಯ ಪ್ರಸಂಗದ ಆಯೋಜನೆ 'ಮಯ್ಯ ಯಕ್ಷ ಕಲ್ಯಾಣ ನಿಧಿ'. ರಂಗರೂಪ ನೀಡಿ ಸಂಯೋಜಿಸಿದವರು ರಮೇಶ್ ಬೇಗಾರ್ ಶೃಂಗೇರಿ. ಪ್ರಸಾದ್ ಮೊಗೆಬೆಟ್ಟುರವರ ಪದ್ಯರಚನೆ ಇದ್ದು, ಭಾಗವತ ರಾಘವೇಂದ್ರ ಆಚಾರ್ ಜನ್ಸಾಲೆಯವರ ದಕ್ಷ ನಿರ್ದೇಶನದಲ್ಲಿ ಪೆರ್ಡೂರು ಮೇಳ ಹಾಗೂ ಅತಿಥಿ ಕಲಾವಿದರು ಬಣ್ಣ ಹಚ್ಚಲಿದ್ದಾರೆ. (ಟಿಕೆಟ್ ದರ ಇರುತ್ತದೆ).