ಉದ್ಘಾಟನೆಗೆ ಸಜ್ಜಾದ ಹೊಸಕೆರೆಹಳ್ಳಿ ಮೇಲ್ಸೇತುವೆ
ಬೆಂಗಳೂರು, ಆಗಸ್ಟ್ 23: ನಗರದ ಹೊರವರ್ತುಲ ರಸ್ತೆಯ ಹೊಸಕೆರೆಹಳ್ಳಿ ಸಮೀಪದ 300 ಮೀಟರ್ ಗಳ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಮೇಲ್ಸೇತುವೆ ಉದ್ಘಾಟನೆಗೆ ಇನ್ನೂ ಮುಹೂರ್ತ ನಿಗದಿಯಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುವು ಮಾಡಿಕೊಂಡರೆ, ಆಗಸ್ಟ್ ತಿಂಗಳ ಅಂತ್ಯಕ್ಕೆ ಮೇಲ್ಸೇತುವೆಯಲ್ಲಿ ವಾಹನಗಳ ಸಂಚಾರ ಸಾಧ್ಯವಿದೆ.
ಸುಮಾರು 16 ತಿಂಗಳುಗಳ ವಿಳಂಬದ ಬಳಿಕ ಕೆ.ಇ.ಬಿ ಜಂಕ್ಷನ್ನಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಕೊನೆಗೂ ಪೂರ್ಣಗೊಂಡಿದೆ.
ಸಿಲ್ಕ್ಬೋರ್ಡ್ನಿಂದ ಮೈಸೂರು ರಸ್ತೆ ಜಂಕ್ಷನ್ ತನಕದ ಹೊರ ವರ್ತುಲ ರಸ್ತೆಯ ಸಿಗ್ನಲ್ ಫ್ರೀ ಕಾರೀಡಾರ್ ನ ಭಾಗವಾಗಿರುವ ಈ ಮೇಲ್ಸೇತುವೆ ನಿರ್ಮಾಣದಿಂದಾಗಿ ಈ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ಉಲ್ಬಣವಾಗಿತ್ತು.
ಮುಖ್ಯಮಂತ್ರಿ ಅವರ ನಗರೋತ್ಥಾನ ಅನುದಾನದಡಿ ಹೊರವರ್ತುಲ ರಸ್ತೆಯನ್ನು ತಡೆರಹಿತ ಸಂಚಾರದ ಯೋಜನೆಯನ್ನು ಕೈಗೊಳ್ಳಲಾಗಿತ್ತು. ಆದರೆ, ಯೋಜನೆಯ ಕಾಮಗಾರಿ ಮಾತ್ರ ಪ್ರಗತಿ ಕಾಣದೆ ಕುಂಟುತ್ತಾ ಸಾಗಿತ್ತು. ಹೊಸಕೆರೆಹಳ್ಳಿ ಸಿಗ್ನಲ್ ಬಳಿಯ ಅಂಡರ್ ಪಾಸ್ ಕಾಮಗಾರಿ ಸ್ಥಗಿತಗೊಂಡಿದ್ದು, ಸಮಸ್ಯೆ ಇನ್ನೂ ಹೆಚ್ಚಾಗುವಂತೆ ಮಾಡಿತ್ತು.

2016ರ ಮಾರ್ಚ್ 1ಕ್ಕೆ ಮುಗಿಯಬೇಕಿತ್ತು
ಹೊಸಕೆರೆ ಹಳ್ಳಿ ಜಂಕ್ಷನ್ ಫ್ಲೈ ಓವರ್ ಕಾಮಗಾರಿ 2016ರ ಮಾರ್ಚ್ 1ಕ್ಕೆ ಪೂರ್ಣಗೊಳಿಸಬೇಕಿತ್ತು. ಸುಮಾರು 17.82 ಕೋಟಿ ರು ವೆಚ್ಚದ ಸೇತುವೆ ನಿರ್ಮಾಣದ ಗುತ್ತಿಗೆಯನ್ನು ಎಂ. ವೆಂಕಟರಾವ್ ಇನ್ಫ್ರಾ ಪ್ರಾಜೆಕ್ಟ್ ಕಂಪೆನಿ ಪಡೆದುಕೊಂಡಿತ್ತು. 2015ರ ಸೆಪ್ಟೆಂಬರ್ 1ರಂದು ಕಾಮಗಾರಿಗೆ ಚಾಲನೆ ನೀಡಲಾದರೂ ಕಾಮಗಾರಿ ವಿಳಂಬವಾಗಿ ಕೊನೆಗೂ ಪೂರ್ಣಗೊಂಡಿದೆ.

ಬನಶಂಕರಿ ಕಡೆಯಿಂದ ಮೈಸೂರು ರಸ್ತೆ ಕಡೆಗೆ
ಬನಶಂಕರಿ ಕಡೆಯಿಂದ ಮೈಸೂರು ರಸ್ತೆ ಕಡೆಗೆ ಸಾಗುವ ಮೇಲ್ಸೇತುವೆಯ ರಸ್ತೆಗೆ ವಿಭಜಕ, ತಡೆಗೋಡೆ, ಡಾಂಬರೀಕರಣ ಪೂರ್ಣಗೊಂಡಿದೆ. ವಿದ್ಯುತ್ ದೀಪಗಳನ್ನು ಎರಡು ದಿನಗಳ ಹಿಂದೆ ಅಳವಡಿಸಲಾಗಿದೆ. ಸೇತುವೆ ಹೊರ ಭಾಗಕ್ಕೆ ತಿಳಿ ನೀಲಿ ಬಣ್ಣವನ್ನು ಬಳಿಯಲಾಗಿದೆ. ಪ್ರಯೋಗಿಕವಾಗಿ ವಾಹನ ಸಂಚಾರ ಇನ್ನೂ ಆರಂಭಿಸಬೇಕಿದೆ.

ಬೆಸ್ಕಾಂ ಮೇಲೆ ಆರೋಪ
ರಸ್ತೆಯ ಪಕ್ಕದಲ್ಲೇ ಹಾದು ಹೋಗಿರುವ ಹೈಟೆನ್ಷನ್ ಕಂಬಗಳನ್ನು ಸ್ಥಳಾಂತರಿಸುವ ವಿಷಯದಲ್ಲಿ ಉಂಟಾದ ಸಮಸ್ಯೆಯಿಂದ ಮೇಲ್ಸೇತುವೆ ಕಾಮಗಾರಿ ವಿಳಂಬವಾಗಿತ್ತು. ರಸ್ತೆ ಬದಿಯ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ನೆಲದಡಿ ಕೇಬಲ್ ಅಳವಡಿಸಲಾಗುತ್ತಿದೆ. ಅದೇ ರೀತಿ ನೀವೂ ನೆಲದಡಿ ಕೇಬಲ್ ಅಳವಡಿಸಬೇಕು ಎಂದು ಬೆಸ್ಕಾಂ ಅಧಿಕಾರಿಗಳು ಸೂಚಿಸಿದ್ದರು. ಇದರಿಂದ ಕಾಮಗಾರಿ ವಿಳಂಬವಾಯಿತು ಬಿಬಿಎಂಪಿ ಕಾರ್ಯಪಾಲಕ ಎಂಜಿನಿಯರ್ (ಮೂಲಸೌಕರ್ಯ) ಶ್ರೀನಿವಾಸಮೂರ್ತಿ ಹೇಳಿದ್ದಾರೆ.

ಸಂಚಾರ ದಟ್ಟಣೆ ಕಡಿಮೆ
ಕೆ.ಇ.ಬಿ ಜಂಕ್ಷನ್ನಲ್ಲಿ ಬೆಳಗಿನ ದಟ್ಟಣೆ ಅವಧಿಯಲ್ಲಿ ಗಂಟೆಗೆ ಸರಾಸರಿ 10,000 ವಾಹನಗಳು ಚಲಿಸುತ್ತವೆ. ಸಂಜೆ 6ರಿಂದ 7ರ ಅವಧಿಯಲ್ಲಿ ಸರಾಸರಿ 9,000 ವಾಹನಗಳು ಓಡಾಡುತ್ತವೆ. ಈ ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾದರೆ ಬನಶಂಕರಿ, ಕತ್ರಿಗುಪ್ಪೆ, ಗಿರಿನಗರ, ಆವಲಹಳ್ಳಿ, ನಾಯಂಡಹಳ್ಳಿ ಮಾರ್ಗದ ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ.

ನಾಗರೀಕರ ಅಸಮಾಧಾನ
ಮೇಲ್ಸೇತುವೆ ನಿರ್ಮಾಣಕ್ಕಾಗಿ ಕತ್ರಿಗುಪ್ಪೆಯಿಂದ ಇಲ್ಲಿ ತನಕ ಅನೇಕ ಮರಗಳು ನಾಶವಾಗಿವೆ. ಅಂಗಡಿ-ಮುಂಗಟ್ಟುಗಳ ಮುಂಭಾಗ ಒಡೆದಿದ್ದಾರೆ. ಪಕ್ಕದ ರಸ್ತೆ ವಿಸ್ತರಣೆ ಮಾಡಿಲ್ಲ. ಒಂದು ಕಡೆ ಮಾತ್ರ ಸೇತುವೆ ನಿರ್ಮಿಸಲಾಗಿದೆ. ಎರಡೂ ಕಡೆ ಸೇತುವೆ ಮಾಡಿದ್ದರೆ ಹೆಚ್ಚು ಅನುಕೂಲವಾಗುತ್ತದೆ. ಹೊಸಕೆರೆಹಳ್ಳಿ ಸಿಗ್ನಲ್ ಅಂಡರ್ ಪಾಸ್ ಆಗುವ ತನಕ ತೊಂದರೆ ತಪ್ಪಿದ್ದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.












Click it and Unblock the Notifications