ಎಸ್ಐಟಿ ವಿಚಾರಣೆ ಬಳಿಕ ರೋಷನ್ ಬೇಗ್ ಪ್ರತಿಕ್ರಿಯೆ ನೀಡಿದ್ದೇನು?
ಬೆಂಗಳೂರು, ಜುಲೈ 16: ಬಹುಕೋಟಿ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾಜಿನಗರದ ಶಾಸಕ ರೋಷನ್ ಬೇಗ್ ಅವರನ್ನು ಕಳೆದ ರಾತ್ರಿ ವಿಶೇಷ ತನಿಖಾ ದಳದವರು ತಮ್ಮ ವಶಕ್ಕೆ ಪಡೆದಿದ್ದರು. ಈ ಬಗ್ಗೆ ಅನೇಕ ಊಹಾ ಪೋಹ, ಅನುಮಾನಗಳು ಎದ್ದಿತ್ತು. ಈ ಬಗ್ಗೆ ಎಸ್.ಐ.ಟಿ ಮುಖ್ಯಸ್ಥರು ಹಾಗೂ ರೋಷನ್ ಬೇಗ್ ಪ್ರತಿಕ್ರಿಯೆ ಇಲ್ಲಿದೆ.
ಸೋಮವಾರ(ಜುಲೈ 15) ರಾತ್ರಿ ವೇಳೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಬೇರೆ ಊರಿಗೆ ಪ್ರಯಾಣಿಸಲು ಯತ್ನಿಸುತ್ತಿದ್ದ ಶಿವಾಜಿನಗರದ ಶಾಸಕ ರೋಷನ್ ಬೇಗ್ ಅವರನ್ನು ಪೊಲೀಸರು ವಶಕ್ಕೆ ಪಡೆದು ಅವರ ವಿಚಾರಣೆ ನಡೆಸಿದ್ದಾರೆ. ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆಯನ್ನು ಜುಲೈ 19ಕ್ಕೆ ನಡೆಸಲಾಗುತ್ತಿದ್ದು, ಖುದ್ದು ಹಾಜರಾಗುವಂತೆ ಸೂಚಿಸಲಾಗಿದೆ ಎಂದು ವಿಶೇಷ ತನಿಖಾ ದಳದ ಮುಖ್ಯಸ್ಥ ರವಿಕಾಂತೇಗೌಡ ಅವರು ತಿಳಿಸಿದ್ದಾರೆ.
ರೋಷನ್ ಬೇಗ್ ಪ್ರತಿಕ್ರಿಯೆ: ವಿಚಾರಣೆ ಬಳಿಕ ಪ್ರತಿಕ್ರಿಯಿಸಿರುವ ಕಾಂಗ್ರೆಸ್ಸಿನ ಉಚ್ಚಾಟಿತ ಶಾಸಕ ರೋಷನ್ ಬೇಗ್, 'ಎಸ್ಐಟಿನವರು ವಿಚಾರಣೆಗಾಗಿ ನನ್ನನ್ನು ಕರೆದುಕೊಂಡು ಹೋಗಿದ್ದರು.

ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ, ನಿನ್ನೆ ಪುಣೆಗೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದೆ, ಆದರೆ, ನಾನು ಊರು ಬಿಟ್ಟು ಎಲ್ಲೋ ಹೋಗುತ್ತಿದ್ದೇನೆ ಎಂದು ನನ್ನನ್ನು ವಶಕ್ಕೆ ಪಡೆದುಕೊಂಡರು. ಈ ಮುಂಚಿತವಾಗಿ ನಾನು ಜುಲೈ 19ರಂದು ವಿಚಾರಣೆಗೆ ಬರುತ್ತೇನೆ ಎಂದು ತಿಳಿಸಿದ್ದೆ, ಅದರಂತೆ ಜುಲೈ 19ರಂದು ವಿಚಾರಣೆ ಎದುರಿಸುತ್ತೇನೆ' ಎಂದರು.
ಶಾಸಕ ಸ್ಥಾನಕ್ಕೆ ಶಿವಾಜಿನಗರದ ಶಾಸಕ ಆರ್ ರೋಷನ್ ಬೇಗ್ ಅವರು ಮಂಗಳವಾರ (ಜುಲೈ 09) ದಂದು ರಾಜೀನಾಮೆ ಸಲ್ಲಿಸಿದ್ದರು. 'ನಾನು ಶಾಸಕನಲ್ಲದಿದ್ದರೂ ನಾನು ಹಜ್ ಸಮಿತಿ ಅಧ್ಯಕ್ಷನಾಗಿದ್ದೇನೆ. ನಾನು ಪ್ರತಿದಿನ ಯಾತ್ರಾರ್ಥಿಗಳ ಜವಾಬ್ದಾರಿಯನ್ನು ನೋಡಿಕೊಳ್ಳಬೇಕಿದೆ' ಎಂದು ನಂತರ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications