ದುಬೈಗೆ ಹಾರಿದ ಐಎಂಎ ಜ್ಯುವೆಲ್ಸ್ ವಂಚನೆ ಕೇಸ್ ಆರೋಪಿ ಮನ್ಸೂರ್
ಬೆಂಗಳೂರು, ಜೂನ್ 14: ಬಹುಕೋಟಿ ಐ.ಎಂ.ಎ. ಜ್ಯುವೆಲ್ಸ್ ವಂಚನೆ ಪ್ರಕರಣದ ಮುಖ್ಯ ಆರೋಪಿ ಮನ್ಸೂರ್ ಖಾನ್ ಕೆಲ ದಿನಗಳ ಹಿಂದೆ ಬೆಂಗಳೂರು ತೊರೆದು ಯುಎಇಗೆ ಹಾರಿರುವ ಸುದ್ದಿ ಖಚಿತವಾಗಿದೆ.
ಪ್ರತಿ ದಿನ ಜಯನಗರ ಸೇರಿದಂತೆ ವಿವಿಧೆಡೆಯಿರುವ 'ಐ ಮಾನಿಟರಿ ಅಡ್ವೈಸರಿ ಜ್ಯೂವೆಲ್ಸ್' (ಐಎಂಎ ಜ್ಯುವೆಲ್ಸ್) ಕಚೇರಿ ಎದುರು ನೂರಾರು ಜನ ಜಮಾಯಿಸುತ್ತಿದ್ದಾರೆ. ಐಎಂಎ ಕಚೇರಿಗಳಿಗೆ ಬೀಗ ಜಡಿಯಲಾಗಿದೆ. ಐ.ಎಂ.ಎ ಜ್ಯುವೆಲ್ಸ್ ಹಾಗೂ ಖಾನ್ ವಿರುದ್ಧ ಪೊಲೀಸರಲ್ಲಿ ಸಾವಿರಾರು ದೂರುಗಳು ದಾಖಲಾಗಿವೆ.
ಖಾನ್ ಆಡಿಯೋ ಕೇಳಿ ಬರುತ್ತಿದ್ದರೂ ಎಲ್ಲಿದ್ದಾನೆ ಎಂಬುದು ಇನ್ನೂ ಪತ್ತೆಯಾಗಿರಲಿಲ್ಲ. ಆದರೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಎಮಿರೇಟ್ಸ್ ವಿಮಾನ ಹತ್ತಿ ಜೂನ್ 8 ರಂದು ರಾತ್ರಿ 8.45 ರ ವೇಳೆಗೆ ಯುಎಇಗೆ ಖಾನ್ ಹಾರಿದ್ದಾನೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
2,000 ಕೋಟಿ ವಂಚನೆ ಜಾಲಕ್ಕೆ ಸಿಲುಕಿಸಿದ ಮೊಹ್ಮದ್ ಮನ್ಸೂರ್ ಖಾನ್ ಯಾರು?
ಖಾನ್ ಒಂದೆರಡು ಆಡಿಯೋ ರಿಲೀಸ್ ಮಾಡಿ ಇಲ್ಲೇ ಇದ್ದೀನಿ ಎಂದು ನಂಬುವಂತೆ ಮಾಡಿದ್ದ. ಆಡಿಯೋ ಪ್ರಕಾರ IMAಗೆ ಸೇರಿದ 1050 ಕೋಟಿ ರುಪಾಯಿ ಮೌಲ್ಯದ ಆಸ್ತಿ ಬೆಂಗಳೂರಿನಲ್ಲಿದೆ ಇನ್ನು ಈ ಸಮೂಹಕ್ಕೆ 7 ಸಾವಿರ ಗ್ರಾಹಕರಿದ್ದಾರಂತೆ.
ಮನ್ಸೂರ್ ಖಾನ್ ಆಡಿಯೋ ಸಂದೇಶಗಳು
ನಾಸಿರ್ ಹುಸೇನ್, ನವೀದ್ ಅಹ್ಮದ್ ನಟ್ಟಮ್ ಕರ್, ನಿಜಾಮುದ್ದೀನ್ ಅಜೀಮುದ್ದೀನ್, ಅಫ್ಷಾನ್ ತಬುಸ್ಸುಮ್, ಅಫ್ಸರ್ ಪಾಷಾ ಹಾಗೂ ಅರ್ಷಾದ್ ಖಾನ್ ಆಡಳಿತ ಮಂಡಳಿಯ ನಿರ್ದೇಶಕರು. ಹಾಗೂ ನನ್ನ ಕುಟುಂಬ ಎಲ್ಲಿಯೂ ಓಡಿ ಹೋಗಿಲ್ಲ. ನನ್ನನ್ನು ಇಲ್ಲಿಂದ ಓಡಿಸಲು ಸಂಚು ರೂಪಿಸಲಾಗುತ್ತಿದೆ ಎಂದಿದ್ದಾರೆ. ನಾನು ತೆಗೆದುಕೊಂಡಿರುವ ನ್ಯಾಯವಾದ ದುಡ್ಡು ಎಲ್ಲರಿಗೂ ವಾಪಸ್ ಸಿಗಲಿದೆ. ಶಾಸಕ ರೋಷನ್ ಬೇಗ್, ಶಕೀಲ್ ಅಹಮದ್ ಹಾಗೂ ರಾಹೀಲ್ ನನ್ನನ್ನು ಇಲ್ಲಿಂದ ಓಡಿಸಲು ಸಂಚು ರೂಪಿಸುತ್ತಿದ್ದಾರೆ ಎಂದು ಆಡಿಯೋ ಸಂದೇಶ ಮೂಲಕ ತಿಳಿಸಿದ್ದ.
ಬೆಂಗಳೂರು ಪೊಲೀಸರ ಹೇಳಿಕೆ
ಮನ್ಸೂರ್ ಖಾನ್ ವಾಟ್ಸಾಪ್ ಆಡಿಯೋ ಪರಿಶೀಲನೆ ಮಾಡಲಾಗಿದೆ. ಪ್ರಾಥಮಿಕ ತನಿಖೆ ನಂತರ ಜೂನ್ 08ರಂದು ರಾತ್ರಿ 8.45ಕ್ಕೆ ಕೆಐಎಎಲ್ ನಿಂದ ದುಬೈಗೆ ಹಾರಿರುವುದು ಖಚಿತವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಸದ್ಯಕ್ಕೆ ನೀಡಲು ಸಾಧ್ಯವಿಲ್ಲ. ಐಎಂಎ ಖಾತೆಯಿಂದ 19 ಕೋಟಿ ರುಗಳನ್ನು ತನ್ನ ವೈಯಕ್ತಿಕ ಖಾತೆಗೆ ಕಳಿಸಿಕೊಂಡಿದ್ದಾನೆ, ನಂತರ ವಿದೇಶ ಪ್ರಯಾಣಕ್ಕೆ ಯೋಜನೆ ಹಾಕಿಕೊಂಡಿದ್ದ. ಐಎಂಎ ಜ್ಯುವೆಲ್ಸ್ ನ ಚಿನ್ನ ಹಾಗೂ ವಜ್ರಗಳನ್ನು ಕರಗಿಸಿ ನಗದು ರೂಪ ಮಾಡಿಕೊಂಡು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಕಮರ್ಷಿಯಲ್ ಸ್ಟ್ರೀಟ್ ಪೊಲೀಸರಿಂದ ತನಿಖೆ
ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಮೊದಲಿಗೆ ಐಎಂಐ ಜ್ಯುವೆಲ್ಸ್ ವಿರುದ್ಧ ದೂರು ದಾಖಲಾಗಿತ್ತು. ನಂತರ ಈ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್ ಐಟಿ) ಕ್ಕೆ ವಹಿಸಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಇಲ್ಲಿ ತನಕ ಬಂಧಿಸಲಾಗಿದ್ದು, ಶುಕ್ರವಾರದಿಂದ ವಿಚಾರಣೆ ನಡೆಸಲಾಗುತ್ತಿದೆ.
ವಿಮಾನ ನಿಲ್ದಾಣದಲ್ಲಿ ಐಎಂಎ ಸಂಸ್ಥೆ ಸಂಸ್ಥಾಪಕ ಮನ್ಸೂರ್ ಖಾನ್ ಅವರಿಗೆ ಸೇರಿಸಿದ್ದ ಕಾರುಗಳು ಸೀಜ್ ಆಗಿದೆ. ಒಟ್ಟು ಐದು ಕಾರುಗಳು ಸೀಜ್ ಆಗಿವೆ ಎನ್ನಲಾಗಿದೆ. ಕಾರನ್ನು ನಾಲ್ಕು ದಿನಗಳ ಹಿಂದೆ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು ಎಂದು ದಾಖಲೆಗಳು ಹೇಳುತ್ತಿವೆ.
ಬಂಧಿತರ ಪಾಸ್ ಪೋರ್ಟ್ ವಶಕ್ಕೆ
ಐಎಂಎ ಹಗರಣಕ್ಕೆ ಸಂಬಂಧಿಸಿದ ಏಳು ನಿರ್ದೇಶಕರ ಪಾಸ್ ಪೋರ್ಟ್ ವಶಪಡಿಸಿಕೊಳ್ಳಲಾಗಿದೆ. ಐಎಂಎ ಸಂಸ್ಥೆಗೆ ಸೇರಿರುವ ಜಾಗ್ವಾರ್ ಹಾಗೂ ರೇಂಜ್ ರೋವರ್ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಮಾನ ನಿಲ್ದಾಣದ ಬಳಿ ನಿಲ್ಲಿಸಲಾಗಿದ್ದ ಎರಡು ಕಾರುಗಳು ಮನ್ಸೂದ್ ಗೆ ಸೇರಿದ್ದು ಎಂದು ತಿಳಿದು ಬಂದಿದೆ. 27 ಸಾವಿರಕ್ಕೂ ಅಧಿಕ ದೂರುಗಳು ದಾಖಲಾಗಿವೆ. ಮೈಸೂರು, ಹುಬ್ಬಳ್ಳಿ, ಬೆಳಗಾವಿ ಹಾಗೂ ಮಂಗಳೂರಿನಲ್ಲಿ ಪೊಲೀಸರು ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಪ್ರತಿದಿನ ದೂರುಗಳು ಹರಿದು ಬರುತ್ತಲೆ ಇವೆ ಎಂದು ತನಿಖಾಧಿಕಾರಿಯೊಬ್ಬರು ಹೇಳಿದ್ದಾರೆ.
ಕಂಪನಿಯ ಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್
ಕಂಪನಿಯ ಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಮನ್ಸೂರ್ ಖಾನ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದ ಆಡಿಯೋ ವೈರಲ್ ಆಗಿತ್ತು. ಈಗ ಮತ್ತೊಂದು ಆಡಿಯೋ ಬಂದಿದೆ. ಎಲ್ಲರಿಗೂ ಹಣ ವಾಪಸ್ ಮಾಡುವ ಭರವಸೆ ಸಿಕ್ಕಿದೆ, ಆದರೆ, ಆಡಿಯೋ ಸತ್ಯಾಸತ್ಯತೆ ಬಗ್ಗೆ ಇನ್ನು ಸ್ಪಷ್ಟವಾಗಿಲ್ಲ. ಹೂಡಿಕೆ ಮಾಡಲಾಗಿರುವ ಎಲ್ಲ ಹಣವನ್ನು ನಾನು ಆಭರಣ, ವಜ್ರ, ಆಸ್ಪತ್ರೆ ಹಾಗೂ ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಿದ್ದೇನೆ, ನನ್ನ ಆಸ್ತಿಯನ್ನು ಮಾರಿಯಾದರೂ ಹೂಡಿಕೆದಾರರಿಗೆ ಹಣ ಹಿಂತಿರುಗಿಸುವುದಾಗಿ ಖಾನ್ ಹೇಳಿಕೊಂಡಿದ್ದಾರೆ.