ನಾನು ಬದುಕಿರಬೇಕೆಂದರೆ ನನ್ನನ್ನು ಗೆಲ್ಲಿಸಿ: ಕುಮಾರಸ್ವಾಮಿ
ಬೆಂಗಳೂರು, ಮೇ 10: ಬಹಿರಂಗ ಚುನಾವಣೆ ಕೊನೆಯ ದಿನವಾದ ಇಂದು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಭಾವನಾತ್ಮಕವಾಗಿ ಚುನಾವಣಾ ಪ್ರಚಾರಕ್ಕೆ ಅಂತ್ಯ ಹೇಳಿದ್ದಾರೆ.
ನಗರದ ಲಗ್ಗೆರೆಯಲ್ಲಿ ಇಂದು ತಮ್ಮ ಪಕ್ಷದ ಅಭ್ಯರ್ಥಿ ರಾಮಚಂದ್ರ ಪರ ಪ್ರಚಾರದಲ್ಲಿ ತೊಡಗಿದ್ದ ಕುಮಾರಸ್ವಾಮಿ ಅವರು, ನನಗೆ ಆರೋಗ್ಯ ಸಮಸ್ಯೆ, ಹೆಚ್ಚು ದಿನ ಬದುಕಲಾರೆನೇನೋ, ನನ್ನನ್ನು ಬದುಕಿಸಿಕೊಳ್ಳಬೇಕು ಎಂದಿದ್ದರೆ ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ.

ನಿಮ್ಮ ಕುಮಾರಸ್ವಾಮಿ ಬದುಕಿರಬೇಕು ಅಂದರೆ ಈ ಬಾರಿ ಜೆಡಿಎಸ್ ಗೆಲ್ಲಿಸಿ ಎಂದು ಭಾವನಾತ್ಮಕವಾಗಿ ಮತ ಕೇಳಿರುವ ಅವರು, ನನ್ನನ್ನು ಗೆಲ್ಲಿಸಿ ಬದುಕಿಸಿದರೆ, ನಾನು ನಿಮ್ಮನ್ನು ಉಳಿಸುತ್ತೇನೆ. ನನ್ನನ್ನು ಬದುಕಿಸುವ ಶಕ್ತಿ ನಿಮಗೆ ಮಾತ್ರವೇ ಇದೆ. ನಿಮಗಾಗಿ ಕೆಲಸ ಮಾಡುವುದಕ್ಕೆ ಸಿದ್ದ ಇದ್ದೇನೆ. ನನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿ. ನನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ನಾನು ಗೆದ್ದಂತೆ ಎಂದು ಮನವಿ ಮಾಡಿದ್ದಾರೆ.
ಜೆಡಿಎಸ್ ಅಭ್ಯರ್ಥಿಗಳು ದುಡ್ಡು ದುಡ್ಡು ಅಂತ ಬಂದು ಕುಳಿತಿದ್ದಾರೆ. ನಾನು ಚಂದಾ ಎತ್ತಿ ಅವರಿಗೆಲ್ಲಾ ದುಡ್ಡು ಕೊಡಬೇಕಾಗಿದೆ. ನಾನೆಲ್ಲಿಂದ ತರಲಿ ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಅವರು ಭಾವನಾತ್ಮಕವಾಗಿ ಮಾತನಾಡಿದರು.
ಪ್ರಚಾರ ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, 'ನನಗೆ ಆರೋಗ್ಯದ ಸಮಸ್ಯೆ ಇದ್ದರೂ ಕೊನೆಯ ಹಂತದಲ್ಲೂ ನಾನು 113 ಸ್ಥಾನಗಳನ್ನು ಗೆಲ್ಲಬೇಕು ಎಂದು ಹೋರಾಟ ಮಾಡುತ್ತಿದ್ದೇನೆ. ನಾಡಿನ ಜನತೆಗೆ ನನ್ನ ಬಗ್ಗೆ ಅನುಕಂಪ ವ್ಯಕ್ತಪಡಿಸುತ್ತಿರುವುದನ್ನು ನಾನು ಕಾಣುತ್ತಿದ್ದೇನೆ. ಜನತೆಯ ಆರ್ಶೀವಾದ ಇವತ್ತು ಜೆಡಿಎಸ್ ಪಕ್ಷದ ಪರವಾಗಿದ್ದು ಒಂದು ನಿಜವಾದ ಜನತಾ ಸರ್ಕಾರವನ್ನು ಆಡಳಿತಕ್ಕ ತರಲಿಕ್ಕೆ ಎಲ್ಲರೂ ಸಹಕಾರ ಕೊಡುತ್ತಾರೆ ಎಂದು ನಂಬಿದ್ದೇನೆ ಎಂದು ಹೇಳಿದರು.
ಇಂದು ಕುಮಾರಸ್ವಾಮಿ ಮಾಧ್ಯಮಗಳ ಜೊತೆ ಸಂವಾದ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಜ್ವರದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ರದ್ದಾಗಿದೆ.











Click it and Unblock the Notifications