ಪೆಟ್ರೋಲ್ಗೆ ಹೆಲ್ಮೆಟ್ ಕಡ್ಡಾಯ: ಕ್ಯಾರೇ ಎನ್ನದ ಸವಾರರು, ಬಂಕ್ ಮಾಲೀಕರು
ಬೆಂಗಳೂರು, ಆಗಸ್ಟ್ 6: ಪೆಟ್ರೋಲ್ ಬೇಕಿದ್ದರೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿರಲೇಬೇಕು ಎನ್ನುವ ನಿಯಮಕ್ಕೆ ಪೆಟ್ರೋಲ್ ಬಂಕ್ ಮಾಲೀಕರೇ ವಿರೋಧ ವ್ಯಕ್ತಪಡಿಸಿದ್ದಾರೆ.
ಪೆಟ್ರೋಲ್ ಬಂಕ್ ಮಾಲೀಕರ ಅಸಹಕಾರ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿ ಸಂಚಾರ ಪೊಲೀಸರು ಜಾರಿಗೊಳಿಸಲು ಉದ್ದೇಶಿಸಿದ್ದ ಹೆಲ್ಮೆಟ್ ಇಲ್ಲದ ದ್ವಿಚಕ್ರ ವಾಹನ ಸವಾರರಿಗೆ ಪೆಟ್ರೋಲ್ ಪೂರೈಕೆ ನಿರ್ಬಂಧಿಸುವ ನಿಯಮಕ್ಕೆ ಬ್ರೇಕ್ ಬಿದ್ದಿದೆ.
ಹೆಲ್ಮೆಟ್ ಧಾರಣೆ ಕಡ್ಡಾಯಗೊಳಿಸುವ ಧ್ಯೇಯದಿಂದ ಪೊಲೀಸರು, ಹೆಲ್ಮೆಟ್ ಧರಿಸದವರಿಗೆ ಪೆಟ್ರೋಲ್ ಪೂರೈಕೆ ಸ್ಥಗಿತಗೊಳಿಸುವಂತೆ ಬಂಕ್ ಮಾಲೀಕರು ಮನವಿ ಮಾಡಿದ್ದರು. ಆದರೆ ಈ ನಿಯಮವು ತಮ್ಮ ವ್ಯಾಪಾರ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಕಾರಣ ನೀಡಿ ಮಾಲೀಕರು ಅಸಮ್ಮತಿ ಸೂಚಿಸಿದ್ದಾರೆ.

ನಾವು ಹೆಲ್ಮೆಟ್ ಧರಿಸದವರಿಗೂ ಪೆಟ್ರೋಲ್ ನೀಡಿದ್ದೇವೆ, ಯಾವುದೇ ನಿಯಮ ಜಾರಿಗೆ ಬಂದಿಲ್ಲ ಎಂದು ಪೆಟ್ರೋಲ್ ಬಂಕ್ ಮಾಲೀಕರು ತಿಳಿಸಿದ್ದಾರೆ.
ಖುದ್ದು ಬಂಕ್ಗಳಲ್ಲಿ ಹೆಲ್ಮೆಟ್ ಧರಿಸದವರನ್ನು ನಿರ್ವಹಣೆ ಮಾಡುವುದಾದರೆ ನಿಯಮ ಜಾರಿಗೊಳಿಸುವುದಾಗಿ ಮಾಲೀಕರು ಹೇಳಿದ್ದರು. ಆದರೆ ಇದಕ್ಕೆ ಪೊಲೀಸರಿಂದ ಸ್ಪಂದನೆ ಲಭಿಸಿರಲಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ಎಂದಿನಂತೆ ನಗರದ ಎಲ್ಲಾ ಬಂಕ್ಗಳು ಕಾರ್ಯ ನಿರ್ವಹಿಸಿವೆ. ಈ ಹಿಂದೆ ಮೈಸೂರಲ್ಲೂ ಇಂತಹದ್ದೊಂದು ನಿರ್ಧಾರ ಮಾಡಿ ಬಳಿಕ ಕೈಬಿಟ್ಟಿತ್ತು.ವಾಹನ ಸವಾರರ ಮತ್ತು ರಸ್ತೆ ಸುರಕ್ಷತೆಯ ಹಿತದೃಷ್ಟಿಯಿಂದ ಸಂಚಾರ ಪೊಲೀಸರು ಹೆಲ್ಮೆಟ್ ಇಲ್ಲದಿದ್ದರೆ ಪೆಟ್ರೋಲ್ ಇಲ್ಲ ಎಂಬ ನಿಯಮವನ್ನು ಜಾರಿಗೊಳಿಸಲು ಮುಂದಾಗಿದ್ದಾರೆ.
ದ್ವಿಚಕ್ರ ವಾಹನ ಅಪಘಾತ ಪ್ರಕರಣಗಳಲ್ಲಿ ಬಹುತೇಕ ಸಾವುಗಳು ಹೆಲ್ಮೆಟ್ ಧರಿಸದೇ ಇರುವ ಕಾರಣ ಸಂಭವಿಸುತ್ತವೆ.ಹೆಲ್ಮೆಟ್ ಧರಿಸಿದ್ದರೆ ಗಾಯ ಮತ್ತು ಸಾವಿನ ಪ್ರಮಾಣ ಕಡಿಮೆಯಾಗುತ್ತದೆ. ಬಿದ್ದಾಗ ತಲೆಗೆ ಪೆಟ್ಟಾಗುವ ಕಾರಣ ಸಾವು ಸಂಭವಿಸುತ್ತವೆ.
ಉತ್ತರಪ್ರದೇಶದ ನೊಯ್ಡಾದಲ್ಲಿ ಜೂನ್ ತಿಂಗಳಿನಿಂದ ಈ ನಿಯಮ ಜಾರಿಗೆ ತರಲಾಗಿದೆ. ಅಲಿಗಢದಲ್ಲಿ ಈ ನಿಯಮ ಈಗಾಗಲೇ ಜಾರಿಯಲ್ಲಿದೆ. ಮೈಸೂರಿನಲ್ಲಿ ನಿಯಮವನ್ನು ಜಾರಿಗೆ ತರಲು ನಿರ್ಧರಿಸಲಾಗಿತ್ತು ಆದರೆ ಇದುವರೆಗೂ ಜಾರಿಗೆ ಬಂದಿಲ್ಲ.












Click it and Unblock the Notifications