ಯಶವಂತಪುರ ಉಪ ಚುನಾವಣೆ; ಜವರಾಯಿ ಗೌಡ ಹೇಳಿದ್ದೇನು?
ಬೆಂಗಳೂರು, ಅಕ್ಟೋಬರ್ 30 : "ಅಧಿಕಾರದ ಆಸೆಗಾಗಿ ಜೆಡಿಎಸ್ ಪಕ್ಷಕ್ಕೆ ದ್ರೋಹ ಬಗೆದು ಯಾವುದೇ ಕಾರಣಕ್ಕೂ ಪಕ್ಷಾಂತರ ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿಲ್ಲ" ಎಂದು ಜೆಡಿಎಸ್ ನಾಯಕ ಟಿ. ಎನ್. ಜವರಾಯಿ ಗೌಡ ಸ್ಪಷ್ಟಪಡಿಸಿದರು.
ಟಿ. ಎನ್. ಜವರಾಯಿ ಗೌಡಗೆ ಕಾಂಗ್ರೆಸ್ನಿಂದ ಆಹ್ವಾಬ ಬಂದಿದೆ. ಯಶವಂತಪುರ ಕ್ಷೇತ್ರದ ಉಪ ಚುನಾವಣೆಗೆ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಈ ಕುರಿತು ಜವರಾಯಿ ಗೌಡ ಮಾತನಾಡಿದ್ದಾರೆ.
"ಕಾಂಗ್ರೆಸ್ನವರು ಪಕ್ಷಕ್ಕೆ ಬಂದರೆ ಟಿಕೆಟ್ ನೀಡಿ ಎಂಎಲ್ಎ ಮಾಡುವುದಾಗಿ ಹೇಳಿದ್ದಾರೆ. ಅದೇ ರೀತಿ ಬಿಜೆಪಿಯವರು ಉಪ ಚುನಾವಣೆಗೆ ನಿಲ್ಲಬೇಡಿ. ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವುದಾಗಿ ಹೇಳಿದ್ದಾರೆ. ಎಂಎಲ್ಸಿ ಮಾಡುವುದಾಗಿಯೂ ಒತ್ತಾಯಿಸಿದ್ದಾರೆ" ಎಂದು ಜವರಾಯಿ ಗೌಡ ಹೇಳಿದರು.
ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಟಿ. ಎನ್. ಜವರಾಯಿ ಗೌಡ ಕಳೆದ ಎರಡು ಚುನಾವಣೆಯಲ್ಲಿ ಯಶವಂತಪುರದಲ್ಲಿ ಜೆಡಿಎಸ್ನಿಂದ ಕಣಕ್ಕಿಳಿದು ಸೋತಿದ್ದಾರೆ. ಈಗ ಶಾಸಕ ಎಸ್. ಟಿ. ಸೋಮಶೇಖರ್ ಅನರ್ಹಗೊಂಡಿರುವುದರಿಂದ ಉಪ ಚುನಾವಣೆ ಎದುರಾಗಿದೆ.

ಲಕ್ಷಕ್ಕೂ ಅಧಿಕ ಮತ ಪಡೆದಿದ್ದೇನೆ
"ಕಳೆದ ಎರಡು ಚುನಾವಣೆಯಲ್ಲಿ ನಾನು ಸೋತಿದ್ದರೂ ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದಿದ್ದೇನೆ. ಆದ್ದರಿಂದ, ರಾಷ್ಟ್ರೀಯ ಪಕ್ಷಗಳು ನನ್ನನ್ನು ಆಹ್ವಾನಿಸಿವೆ ಎಂಬುದು ಗೊತ್ತಿದೆ. ಕಷ್ಟ ಕಾಲದಲ್ಲಿಯೂ ಪಕ್ಷ ಹಾಗೂ ಕಾರ್ಯಕರ್ತರು ಜೊತೆಗಿದ್ದಾರೆ. ಯಶವಂತಪುರ ನನ್ನ ಕರ್ಮಭೂಮಿ, ಜೆಡಿಎಸ್ನಿಂದ ರಾಜಕಾರಣ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ಪಕ್ಷ ಬಿಡುವ ಯೋಚನೆ ಮಾಡಿಲ್ಲ" ಎಂದು ಜವರಾಯಿ ಗೌಡ ಸ್ಪಷ್ಟಪಡಿಸಿದರು.

ಅಲ್ಪ ಮತದಿಂದ ಸೋತಿದ್ದೇನೆ
"ಎರಡು ಬಾರಿಯೂ ನಾನು ಅಲ್ಪ ಮತದಿಂದ ಯಶವಂತಪುರ ಕ್ಷೇತ್ರದಲ್ಲಿ ಸೋತಿದ್ದೇನೆ. ಮತದಾರರ ತೀರ್ಪಿಗೆ ವಿರುದ್ಧವಾಗಿ ಈಗ ಉಪ ಚುನಾವಣೆ ಬಂದಿದೆ. ಕಾರ್ಯಕರ್ತರು, ಮುಖಂಡರು ಚುನಾವಣೆಯನ್ನು ಸವಾಲಾಗಿ ಸ್ವೀಕಾರ ಮಾಡಿ ಕೆಲಸ ಮಾಡಬೇಕು" ಎಂದು ಜವರಾಯಿ ಗೌಡ ಕರೆ ನೀಡಿದರು.

ಚುನಾವಣೆ ಸೋಲು
ಟಿ. ಎನ್. ಜವರಾಯಿ ಗೌಡ 2013ರಲ್ಲಿ 91,280 ಮತಗಳನ್ನು ಪಡೆದು ಕಾಂಗ್ರೆಸ್ನ ಎಸ್. ಟಿ. ಸೋಮಶೇಖರ್ ವಿರುದ್ಧ ಸೋತಿದ್ದರು. 2018ರ ಚುನಾವಣೆಯಲ್ಲಿ 104562 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.

ಸಿದ್ದರಾಮಯ್ಯ ತಂತ್ರ
2018ರಲ್ಲಿ ಕಾಂಗ್ರೆಸ್ನಿಂದ ಗೆದ್ದಿದ್ದ ಎಸ್. ಟಿ. ಸೋಮಶೇಖರ್ ಶಾಸಕ ಸ್ಥಾನದಿಂದ ಅನರ್ಹರಾಗಿದ್ದಾರೆ. ಜವರಾಯಿ ಗೌಡರನ್ನು ಕಾಂಗ್ರೆಸ್ಗೆ ಸೇರಿಸಿಕೊಂಡು ಯಶವಂತಪುರದಿಂದ ಉಪ ಚುನಾವಣೆಗೆ ಕಾಂಗ್ರೆಸ್ನಿಂದ ಕಣಕ್ಕಿಳಿಸುವುದು ಸಿದ್ದರಾಮಯ್ಯ ತಂತ್ರವಾಗಿತ್ತು.












Click it and Unblock the Notifications