'ಫ್ರೀ ಕಾಶ್ಮೀರ' ಯುವತಿಗೆ ಬೆಂಬಲ ಆದರೆ ವಕಾಲತ್ತು ಸಾಧ್ಯವಿಲ್ಲ: ಸಿದ್ದರಾಮಯ್ಯ
ಬೆಂಗಳೂರು, ಜನವರಿ 25: ಸಿಎಎ ವಿರುದ್ಧ ಪ್ರತಿಭಟನೆ ಸಂದರ್ಭ 'ಫ್ರೀ ಕಾಶ್ಮೀರ' ಪ್ಲಕಾರ್ಡ್ ಹಿಡಿದಿದ್ದ ಯುವತಿ ಪರ ಸಿದ್ದರಾಮಯ್ಯ ನ್ಯಾಯಾಲಯದಲ್ಲಿ ವಕಾಲತು ವಹಿಸುತ್ತಾರೆಯೇ ಎಂಬ ಪ್ರಶ್ನೆಗೆ ಅವರೇ ಉತ್ತರ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾನು ವಕೀಲಿಕೆ ಮರು ಪ್ರಾರಂಭಿಸುತ್ತಿಲ್ಲ. ಅದು ಸಾಧ್ಯವೂ ಆಗುವುದಿಲ್ಲ. ನನ್ನ ಸನ್ನದನ್ನು (ಲೈಸೆನ್ಸ್) ಅಮಾನತು ಮಾಡಿದ್ದರು. ಅಮಾನತು ತೆಗೆಯುವಂತೆ ಬಾರ್ ಅಸೋಸಿಯೇಷನ್ ಗೆ ಅರ್ಜಿ ಸಲ್ಲಿಸಿದ್ದೇನೆ' ಎಂದಿದ್ದಾರೆ.
'ಮೈಸೂರಿನಲ್ಲಿ ಫ್ರೀ ಕಾಶ್ಮೀರ ಪ್ಲಕಾರ್ಡ್ ಹಿಡಿದಿದ್ದ ಯುವತಿಯ ಪರ ನಾನು ವಕಾಲತ್ತು ವಹಿಸುತ್ತಿಲ್ಲ. ಆದರೆ ವಕಾಲತ್ತು ವಹಿಸುವವರನ್ನು ಬೆಂಬಲಿಸುತ್ತೇನೆ' ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಫಲಕ ಪ್ರದರ್ಶಿಸಿದ ನಳಿನಿ ಪರವಾಗಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಹಾಗಾಗಿ ಅವರೇ ವಕೀಲಿಕೆಗೆ ಬರುತ್ತಾರೆಯೇ ಎಂದು ನಳಿನಿ ಪ್ರಕರಣದಲ್ಲಿ ವಿರೋಧಿ ವಕೀಲರು ಬಹಿರಂಗ ಪತ್ರ ಬರೆದಿದ್ದರು. ಅದು ವೈರಲ್ ಆಗಿತ್ತು. ಹಾಗಾಗಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
'ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ 14 ಗಣ್ಯರಿಗೆ ಕೊಲೆ ಬೆದರಿಕೆ ಪತ್ರ ಬರೆದಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.ಇದನ್ನು ಸೂಕ್ತ ತನಿಖೆ ಮಾಡಿಸಿ ತಪ್ಪಿತಸ್ಥರನ್ನು ಶಿಕ್ಷಿಸಲೆ ಬೇಕು' ಎಂದು ಸಹ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
'ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ವಿಳಂಬದ ಬಗ್ಗೆ ನಾನೇನು ಪ್ರತಿಕ್ರಯಿಸಲ್ಲ. ಅದು ಅವರ ಪಕ್ಷದ ಆಂತರಿಕ ವಿಷಯ. ಹಿಂದೆ ನನ್ನ ಜತೆಗಿದ್ದಾಗ ಆ 17 ಜನರೂ ಮಿತ್ರರಾಗಿದ್ದರು. ಯಾವಾಗ ರಾಜೀನಾಮೆ ಕೊಟ್ಟು ಹೋದರೋ ಆಗಲೇ ಅವರು ಶತ್ರುಗಳಾದರು' ಎಂದು ಮೈತ್ರಿ ಸರ್ಕಾರ ಬಿದ್ದ ದಿನಗಳನ್ನು ನೆನಪಿಸಿಕೊಂಡರು.












Click it and Unblock the Notifications