ಹುಚ್ಚ ವೆಂಕಟ್ ರಾಜಕೀಯಕ್ಕೆ ಎಂಟ್ರಿ, ಮುನಿರತ್ನ ವಿರುದ್ಧ ಕಣಕ್ಕೆ
ಬೆಂಗಳೂರು, ಏಪ್ರಿಲ್ 07: ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರು ರಾಜಕೀಯಕ್ಕೆ ಕಾಲಿಡುತ್ತಿದ್ದಾರೆ. ಅವರು ರಾಜರಾಜೇಶ್ವರಿ ನಗರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜರಾಜೇಶ್ವರಿ ನಗರದಿಂದ ಕಾಂಗ್ರೆಸ್ ಶಾಸಕ ಮುನಿರತ್ನ ವಿರುದ್ಧವಾಗಿ ಸ್ಪರ್ಧಿಸಿ ಅವರನ್ನು ಮಣಿಸುವುದೇ ನನ್ನ ಗುರಿ ಎಂದಿದ್ದಾರೆ. ಅವರು ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಮುನಿರತ್ನ ಕುಕ್ಕರ್ ರಾಜಕಾರಣಕ್ಕೆ ಮುನಿದ ಹುಚ್ಚಾ ವೆಂಕಟ್
ಮುನಿರತ್ನ ಅವರು ಮತದಾರರನ್ನು ಸೆಳೆಯಲು ಕುಕ್ಕರ್ ಹಂಚಿದ್ದಾರೆ ಎಂದು ಸಿಟ್ಟಿಗೆದ್ದಿದ್ದ ಹುಚ್ಚ ವೆಂಕಟ್ ಅವರು ತಮ್ಮ ಮಾಮೂಲಿ ವರಸೆಯಲ್ಲಿ ಮುನಿರತ್ನ ಅವರ ವಿರುದ್ಧ ಫೇಸ್ಬುಕ್ನಲ್ಲಿ ಕ್ಲಾಸ್ ತೆಗೆದುಕೊಂಡಿದ್ದರು. ಅದು ಟಿವಿ ಮೆಟ್ಟಿಲು ಏರಿ ಅಲ್ಲಿಯೂ ಸಹ ಹುಚ್ಚ ವೆಂಟಕ್ ಅವರು ಮುನಿರತ್ನ ಮೇಲೆ ಹರಿಹಾಯ್ದಿದ್ದರು.
ಯಾವುದೇ ರಾಜಕಾರಣಿ ಮತಕ್ಕೆ ಬದಲಾಗಿ ಕುಕ್ಕರ್ ನೀಡಲು ಬಂದರೆ, ಅದೇ ಕುಕ್ಕರ್ ತೆಗೆದುಕೊಂಡು ಆತನಿಗೆ ಹೊಡೆಯಿರಿ ಎಂಬು, ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಮಿಂಚಿ, ವಿವಾದಾತ್ಮಕವಾಗಿ ಹೊರಬಂದಿದ್ದ ಹುಚ್ಚ ವೆಂಕಟ್ ಅವರು ಅಬ್ಬರಿಸಿದ್ದಾರೆ. ವೆಂಕಟ್ ಅವರ ಈ ಮಾತನ್ನು ಮತದಾರರು ಗಂಭೀರವಾಗಿ ಪರಿಗಣಿಸಲಿ.
ಮುನಿರತ್ನ ಅವರ ಭ್ರಷ್ಟ ಆಡಳಿತಕ್ಕೆ ಕೊನೆ ಹಾಡಲೆಂದು ತಾವು ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ಹೇಳಿರುವ ಹುಚ್ಚ ಅವರಿಗೆ ಎಷ್ಟು ಮತ ದೊರಕುತ್ತದೆ, ಅವರನ್ನು ಚುನಾವಣೆಗೆ ಸ್ಪರ್ಧಿಸಲು ಆಯೋಗ ಅವಕಾಶ ನೀಡುತ್ತದೆಯಾ ಕಾದು ನೋಡಬೇಕಿದೆ.
ತಮ್ಮ ಸಿನಿಮಾ ನೋಡಿದಾಗ ಪ್ರೇಕ್ಷಕರ ಮೇಲೆ ಸಿಟ್ಟಿಗೆದ್ದು, 'ನನ್ ಮಗಂದ್', 'ನನ್ ಎಕ್ಕಡಾ' ಎಂದಿದ್ದ ಹುಚ್ಚ ವೆಂಕಟ್ ಚುನಾವಣೆಯಲ್ಲಿ ಮತದಾರರು ಮತಹಾಕದಿದ್ದರೆ ಏನೇನು ಬೈಯುತ್ತಾರೊ ಏನೊ..?