ಬೆಂಗಳೂರಿನಲ್ಲಿ ಬೀದಿ ನಾಯಿ ಸಮಸ್ಯೆಯೇ? ದೂರು ನೀಡುವುದು ಹೇಗೆ?
'ರೇಬೀಸ್ ನಮ್ಮ ಶತ್ರು, ಬೀದಿ ನಾಯಿಯಲ್ಲ...' ಎಂಬ ಘೋಷ ವಾಕ್ಯದೊಂದಿಗೆ ಬೀದಿ ನಾಯಿ ನಿಯಂತ್ರಣಕ್ಕಾಗಿ ಬಿಬಿಎಂಪಿ ಸನ್ನದ್ಧವಾಗಿದೆ. ನೀವು ದೂರು ನೀಡಿದರೆ ಸಾಕು, ಬಿಬಿಎಂಪಿ ಪರಿಹಾರ ನೀಡಲಿದೆ.
ಬೆಂಗಳೂರಿನಲ್ಲಿ ಬೀದಿ ನಾಯಿ ಸಮಸ್ಯೆ ಇಂದು, ನಿನ್ನೆಯದಲ್ಲ. ರಾಜಧಾನಿಯಲ್ಲಿ 3.3 ಲಕ್ಷಕ್ಕಿಂತ ಹೆಚ್ಚು ಬೀದಿನಾಯಿಗಳಿವೆ ಎಂಬುದು ಒಂದು ಸಮೀಕ್ಷೆಯ ವರದಿ. ಬೀದಿನಾಯಿಗಳ ಸಂತಾನಹರಣ ಚಿಕಿತ್ಸೆ ನಡೆಯುತ್ತಲೇ ಇದ್ದರೂ ಅವುಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ.
ಪ್ರತಿ ಬಾರಿ ಬೀದಿ ನಾಯಿ ದಾಳಿಯಿಂದ ಅಮಾಯಕ ಮಗುವೊಂದು ಕಣ್ಮುಚ್ಚಿದಾಗಲೇ ನಮಗೆ ಈ ಸಮಸ್ಯೆಯ ತೀವ್ರತೆ ಅರಿವಿಗೆ ಬರುತ್ತದೆ. ಈಗಲೂ ಅಷ್ಟೇ! ಇಂದು ಬೆಂಗಳೂರಿನ ಆನೇಕಲ್ ನಲ್ಲಿ ಎರಡು ವರ್ಷದ ಅಂಜಲಿ ಎಂಬ ಮಗು ಬೀದಿ ನಾಯಿ ದಾಳಿಯಿಂದ ಹತಳಾದ ಸುದ್ದಿ ಕೇಳಿ ಹೃದಯ ಕಿವುಚಿದಾಗ ಮಾತ್ರ ಸರ್ಕಾರಕ್ಕೆ ಹಿಡಿಶಾಪ ಹಾಕಲು ನಮಗೆ ನೆನಪಾಗುತ್ತದೆ!

ಉದ್ಯಾನ ನಗರಿಯ ಯಾವುದೇ ಭಾಗದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಕಂಡು ಬಂದರೆ ಈ ಬಗ್ಗೆ ಆಯಾ ಭಾಗದ ಯಾವುದೇ ಒಬ್ಬ ವ್ಯಕ್ತಿ, ಅಥವಾ ಒಂದಷ್ಟು ಸಾರ್ವಜನಿಕರ ಗುಂಪು ಬಿಬಿಎಂಪಿ ಗೆ ದೂರು ನೀಡಬಹುದು. ದೂರನ್ನು ಸ್ವೀಕರಿಸಿದ ಬಿಬಿಎಂಪಿ ಸಿಬ್ಬಂದಿ ಬೀದಿ ನಾಯಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಾರೆ. ಆದರೆ ಈ ಬಗ್ಗೆ ಎಷ್ಟು ಜನರಿಗೆ ಮಾಹಿತಿ ಇದೆ?
ನಿಮ್ಮ ಏರಿಯಾದಲ್ಲಿ ಬೀದಿ ನಾಯಿ ಸಮಸ್ಯೆ ಏನೇ ಇದ್ದರೂ ಬಿಬಿಎಂಪಿ ಕಂಟ್ರೋಲ್ ರೂಮಿನ 22221188 ಅಥವಾ 22660000 ಈ ಸಂಖ್ಯೆಗೆ ಕರೆ ಮಾಡಬಹುದು. 'ರೇಬೀಸ್ ನಮ್ಮ ಶತ್ರು, ಬೀದಿ ನಾಯಿಯಲ್ಲ...' ಎಂಬ ಘೋಷ ವಾಕ್ಯದೊಂದಿಗೆ ಬೀದಿ ನಾಯಿ ನಿಯಂತ್ರಣಕ್ಕಾಗಿ ಬಿಬಿಎಂಪಿ ಸನ್ನದ್ಧವಾಗಿದೆ.
ನೀವು ಬೀದಿ ನಾಯಿ ಕಾಟದ ಕುರಿತು ನೀಡಿದ ದೂರಿಗೆ ಸಂಬಂಧಿಸಿದಂತೆ 48 ಗಂಟೆಯವರೆಗೂ ನಿಮಗೆ ಯಾವುದೇ ಪ್ರತಿಕ್ರಿಯೆ ಬಾರದಿದ್ದಲ್ಲಿ ನೀವು ಪಶುಸಂಗೋಪನೆ ಇಲಾಖೆಯ ಉಪ ನಿರ್ದೇಶಕ ಅಥವಾ ಜಂಟಿ ನಿರ್ದೇಶಕರನ್ನು ಸಂಪರ್ಕಿಸಬಹುದು. ಅವರ ಸಂಪರ್ಕ ಸಂಖ್ಯೆ: 9480683608 (ಉಪ ನಿರ್ದೇಶಕರು), 9480683010 (ಜಂಟಿ ನಿರ್ದೇಶಕರು)
ಇದರೊಂದಿಗೆ ನಾಯಿ ಕಚ್ಚಿದಾಗ ಏನೆಲ್ಲ ಪ್ರಥಮ ಚಿಕಿತ್ಸೆ ಕೈಗೊಳ್ಳಬೇಕೆಂಬ ಬಗ್ಗೆಯೂ ಬಿಬಿಎಂಪಿ ಒಂದಷ್ಟು ಸೂಚನೆ ನೀಡಿದೆ.
* ನಾಯಿ ಕಚ್ಚಿದ ಕೂಡಲೆ ಅದು ಕಚ್ಚಿದ ಜಾಗವನ್ನು ಕನಿಷ್ಠ ಹತ್ತು ನಿಮಿಷ ಸ್ವಚ್ಛವಾಗಿ ತೊಳಯಿರಿ. ತೊಳೆಯುವುದಕ್ಕೆ ಹರಿವ ನೀರನ್ನೇ ಬಳಸಿ.
* ನಂತರ ಗಾಯವನ್ನು ಸೋಪಿನಿಂದ ತೊಳೆಯಿರಿ
* ಇದಾದ ನಂತರ ಅಂಟಿಸಪ್ಟಿಕ್ ಗಳನ್ನು ಲೇಪಿಸಿ
* ಇವೆಲ್ಲ ಪ್ರಥಮ ಚಿಕಿತ್ಸೆಗಳಾದರೆ, ಇದರ ನಂತರ ತಕ್ಷಣವೇ ಪೋಸ್ಟ್ ಬೈಟ್ ಅಂಟಿ ರೇಬಿಸ್ ವಾಕ್ಸಿನ್ ಹಾಕಿಸಿಕೊಳ್ಳಿ
* ಎಲ್ಲ ಸರ್ಕಾರಿ ಮತ್ತು ಬಿಬಿಎಂಪಿ ಆಸ್ಪತ್ರೆಗಳಲ್ಲೂ ಈ ವಾಕ್ಸಿನೇಶನ್ ಲಭ್ಯವಿರುತ್ತದೆ.
ಮುನ್ನೆಚ್ಚರಿಕೆಯೇನು?
* ಮರಿಗಳೊಂದಿಗೆ ಇರುವ ನಾಯಿಗಳ ಬಳಿ ಹೋಗಲೇಬೇಡಿ, ಆ ಸಂದರ್ಭದಲ್ಲಿ ನಾಯಿಗಳು ದಾಳಿ ಮಾಡುವ ಸಂಭವ ಹೆಚ್ಚು
* ವಿನಾ ಕಾರಣ ನಾಯಿಗಳಿಗೆ ಕಲ್ಲು ಹೊಡೆಯುವುದು, ಅಥವಾ ಹಿಂಸಿಸುವುದನ್ನು ಮಾಡಬೇಡಿ, ಅಂಥ ಸಂದರ್ಭದಲ್ಲಿ ಸ್ವರಕ್ಷಣೆಗಾಗಿ ನಾಯಿಗಳು ಪ್ರತಿ ದಾಳಿ ಮಾಡುವ ಸಂಭವವಿರುತ್ತದೆ.
* ನಾಯಿಗಳ ಮುಂದೆ ಓಡುವುದಕ್ಕೆ ಹೋಗಬೇಡಿ
* ಕಟ್ಟಿಹಾಕಿರುವ ನಾಯಿಯ ಹತ್ತಿರ ನಿಲ್ಲಬೇಡಿ
* ಆಹಾರವಿರುವ ಪೊಟ್ಟಣವನ್ನು ನಾಯಿಗಳ ಎದುರಲ್ಲಿ ತರಲೇಬೇಡಿ. ಹಸಿದ ನಾಯಿಗಳು ಆಹಾರಕ್ಕಾಗಿ ದಾಳಿ ಮಾಡಬಹುದು.












Click it and Unblock the Notifications