ಕುಷ್ಠರೋಗಿಯ ಅನ್ನ, ಪಿಂಚಣಿ ಕಿತ್ತುಕೊಂಡ ಆಧಾರ್!
ಬೆಂಗಳೂರು, ಡಿಸೆಂಬರ್ 06: ಆಧಾರ್ ಕಾರ್ಡ್ ಎಂಬ ಸಾರ್ವತ್ರಿಕ ಗುರುತಿನ ಚೀಟಿ, ಒಂದೆಡೆ ಅಕ್ರಮ ನುಸುಳುಕೋರರನ್ನು ತಡೆಗಟ್ಟಲು, ಸರ್ಕಾರದ ಯೋಜನೆಗಳು ನೈಜ ಫಲಾನುಭವಿಗಳಿಗೆ ಸಿಗುವಂತೆ ಮಾಡಲು ಸಹಕಾರಿಯಾಗುತ್ತಿರುವ ಹೊತ್ತಲ್ಲೇ, ಇನ್ನೊಂದೆಡೆ ಹಲವು ಬಡವರ ಪಾಲಿಗೆ ಆಧಾರ್ ಕಾರ್ಡ್ ಒಂದು ಶಾಪವಾಗಿ ಪರಿಣಮಿಸಿದೆ!
ಬರೇಲಿಯಲ್ಲಿ ಮಹಿಳೆಯನ್ನು ಬಲಿತೆಗೆದುಕೊಂಡಿತೇ ಆಧಾರ್ ಕಡ್ಡಾಯ ನೀತಿ?
ಹೌದು, ಮಾಗಡಿ ರಸ್ತೆಯಲ್ಲಿ ವಾಸಿಸುತ್ತಿರುವ 65 ವರ್ಷದ ಸಾಜಿದಾ ಬೇಗಂ ಅಡ್ಡಿ ಆತಂಕಗಳಿಲ್ಲದೆ ಜೀವನ ಸಾಗಿಸಲು ಪರದಾಡುತ್ತಿದ್ದಾರೆ. ಏಕೆಂದರೆ, ಅವರ ಬಳಿ ಎಲ್ಲ ಕೆಲಸ ಕಾರ್ಯಗಳಿಗೆ ಲಿಂಕ್ ಆಗಿರುವ ಆಧಾರ್ ಕಾರ್ಡ್ ಇಲ್ಲ!
ಕುಷ್ಠ ರೋಗದಿಂದ ತಮ್ಮ ಕೈಬೆರಳುಗಳನ್ನೂ, ಕಣ್ಣಿನ ದೃಷ್ಟಿಯನ್ನೂ ಕಳೆದುಕೊಂಡ ಅವರಿಗೆ ಬೆರಳಚ್ಚು ನೀಡುವುದಕ್ಕೆ, ಕಣ್ಣಿನ ರೆಟಿನಾ ಅಚ್ಚು ನೀಡುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಆಧಾರ್ ಕಾರ್ಡ್ ಇಲ್ಲ! ಆಧಾರ್ ಕಾರ್ಡ್ ಇಲ್ಲವೆಂಬ ಕಾರಣಕ್ಕೆ ಅವರಿಗೆ ಪ್ರತಿ ತಿಂಗಳು ಬರುತ್ತಿದ್ದ 1000ರೂ. ಪಿಂಚಣಿಯೂ ನಿಂತುಬಿಟ್ಟಿದೆ!
ಕೈ ಬೆರಳು ಇಲ್ಲದವರು, ಕುಷ್ಠ ರೋಗಿಗಳು ಆಧಾರ್ ಕಾರ್ಡ್ ಮಾಡಿಸುವುದು ಹೇಗೆ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ.
ಜಾತಿ, ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿಗೆ 'ಡಿಜಿಟಲ್ ಟಚ್'
ಈ ಕುರಿತು ಮಾತನಾಡಿದ ಮಾಗಡಿ ರಸ್ತೆಯಲ್ಲಿರುವ ಕುಷ್ಠರೋಗ ಆಸ್ಪತ್ರೆಯ ವೈದ್ಯಕೀಯ ಆಡಳಿತಾಧಿಕಾರಿ ಡಾ.ಅಯುಬ್ ಅಲಿ ಜೈ, "100 ಹಾಸಿಗೆಯ ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 57 ಜನರಲ್ಲಿ 10 ಜನರ ಬಳಿ ಆಧಾರ್ ಕಾರ್ಡ್ ಇಲ್ಲ. ರೋಗಿಗಳು ಹೇಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂಬ ಬಗ್ಗೆ ಸ್ಪಷ್ಟನೆ ಇಲ್ಲ' ಎಂದಿದ್ದಾರೆ.
ಆಟೋ ಲೈಸೆನ್ಸ್ ಗೆ ಆಧಾರ್ ಲಿಂಕ್ ಕಡ್ಡಾಯ: ಸಾರಿಗೆ ಇಲಾಖೆ ಆದೇಶ
ಸಾಜಿದಾ ಬೇಗಂ ರಂತೆಯೇ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇನ್ನೊಬ್ಬ ಕುಷ್ಠರೋಗಿ, ಆಧಾರ್ ಕಾರ್ಡ್ ಮಾಡಿಸುವುದಕ್ಕಾಗಿ ಬಹಳಷ್ಟು ಬಾರಿ ಬೆಂಗಳೂರು ಒನ್ ಕೇಂದ್ರಕ್ಕೆ ಅಲೆದಿದ್ದಾರೆ. ಅಲ್ಲಿನ ಸಿಬ್ಬಂದಿಗಳು, 'ನಿಮಗೆ ಆಧಾರ್ ಕಾರ್ಡ್ ನೀಡುವುದಕ್ಕೆ ಸಾಧ್ಯವಿಲ್ಲ' ಎಂದು ವಾಪಸ್ ಕಳಿಸಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿದ UIDAI (Unique Identification Authority of India ), ಮೊದಲು ಅವರು ಎನ್ ರೋಲ್ ಮಾಡಿಸಿಕೊಳ್ಳಬೇಕು. ಅಕಸ್ಮಾತ್ ಏನಾದರೂ ದೋಷವಿದ್ದರೆ ಅದಕ್ಕೂ ಒಂದು ಪತ್ರ ಬರುತ್ತದೆ ಎಂದಿದೆ. ಆದರೂ ಆಧಾರ್ ಕಾರ್ಡ್ ಗೆ ಅತ್ಯಗತ್ಯವಾದ ಬೆರಳಚ್ಚು ನೀಡುವುದಕ್ಕೆ ಸಾಧ್ಯವಿಲ್ಲದವರು ಏನು ಮಾಡಬೇಕೆಂಬ ಬಗ್ಗೆ ಸ್ಪಷ್ಟನೆ ಇಲ್ಲ.