ನೇಣು ಬಿಗಿದು ಗೃಹಿಣಿ ಆತ್ಮಹತ್ಯೆ, ಕಿರುಕುಳದ ಆರೋಪ
ಬೆಂಗಳೂರು, ಡಿಸೆಂಬರ್ 13: ತನಗೆ ಪತಿಯ ಮನೆಯವರು ಕಿರುಕುಳ ನೀಡಿದರೆಂದು ಬೇಸತ್ತ ಗೃಹಿಣಿಯು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದು ನಗರದ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶಿಲ್ಪಾ(27) ಎಂಬ ಗೃಹಿಣಿಯೇ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವಂತದ್ದು. ಆತ್ಮಹತ್ಯೆ ಮಾಡಿಕೊಂಡಿರುವ ಶಿಲ್ಪಾ ಹೊಸಕೋಟೆಯ ಹಿಂಡಿಗನಾಳ ಗ್ರಾಮದ ರಾಮಪ್ಪ ಹಾಗೂ ದೇವಮ್ಮ ಸಂಪತಿಯ ಮಗಳು. ಕಳೆದ ವರ್ಷದ ಹಿಂದೆಯಷ್ಟೇ ನಾಗೇಶ್ ಎಂಬುವವನ ಜೊತೆ ಮದುವೆಯಾಗಿತ್ತು.
ಮಹದೇವಪುರ ಸಮೀಪದ ಹೂಡಿ ಎಂಬಲ್ಲಿ ಗುರುವಾರ ಪತಿಯ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ರೂಮ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶಿಲ್ಪಾಳ ಶವ ಪತ್ತೆಯಾಗಿದೆ. ತಮ್ಮ ಮಗಳ ಸಾವಿಗೆ ಶಿಲ್ಪಾಳ ಪೋಷಕರು ಅನುಮಾನ ವ್ಯಕ್ತಪಡಿಸಿದ್ದು, ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿರುವ ಮಹದೇವಪುರ ಪೊಲೀಸರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಮದುವೆಯಾದ ಕೆಲವು ತಿಂಗಳುಗಳ ಕಾಲ ಚೆನ್ನಾಗಿಯೇ ಇದ್ದ ದಂಪತಿ, ಬರುಬರುತ್ತಾ ಪತಿಯ ಮನೆಯವರು ಪದೇ ಪದೇ ಕಿರುಕುಳ ನೀಡುತ್ತಿದ್ದರು.
ಎರಡೂ ಮನೆಯ ಹಿರಿಯರ ನಡುವೆ ಪಂಚಾಯಿತಿ ಮಾಡಿಸಿ, ಬುದ್ದಿವಾದ ಹೇಳಿದ್ದರೂ, ಪತಿ ಹಾಗೂ ಆತನ ಮನೆಯವರು ಕಿರುಕುಳ ನೀಡಿ ನೇಣು ಹಾಕಿ ಕೊಲೆ ಮಾಡಿದ್ದಾರೆ ಎಂದು ಶಲ್ಪಾಳ ಪೋಷಕರು ಆರೋಪ ಮಾಡಿದ್ದಾರೆ, ನಮಗೆ ನ್ಯಾಯ ಕೊಡಿಸಿ ಎಂದು ಒತ್ತಯಿಸಿದ್ದಾರೆ.












Click it and Unblock the Notifications