ಬೆಂಗಳೂರು : ಜಯನಗರದಲ್ಲಿ ಒಂಟಿ ಮಹಿಳೆ ಕೊಲೆ
ಬೆಂಗಳೂರು, ಜು. 31 : ಒಂಟಿ ಮಹಿಳೆಯನ್ನು ಕೊಲೆ ಮಾಡಿ ಹೊರಗಿನಿಂದ ಬಾಗಿಲಿಗೆ ಬೀಗ ಹಾಕಿಕೊಂಡು ಹೋಗಿದ್ದ ಪ್ರಕರಣ ಜಯನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಜಯನಗರ ಆರನೇ ಬ್ಲಾಕ್ ನ ಯಡಿಯೂರು ಸಮೀಪದ ಮನೆಯೊಂದರಲ್ಲಿ ಭಾನುವಾರ ರಾತ್ರಿ ಈ ಕೊಲೆ ನಡೆದಿದೆ. ಗುರುವಾರ ಮನೆಯಿಂದ ವಾಸನೆ ಬಂದ ಹಿನ್ನೆಲೆಯಲ್ಲಿ ಮನೆಯ ಬೀಗ ಒಡೆದು ಒಳಗೆ ಪ್ರವೇಶಿಸಿದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಕೊಲೆಯಾದ ಮಹಿಳೆಯನ್ನು ಪ್ರತಿಮಾ (64) ಎಂದು ಗುರುತಿಸಲಾಗಿದೆ.

ಪ್ರತಿಮಾ ಈ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿಮಾ ಅವರ ತಲೆಗೆ ರಾಡ್ ನಿಂದ ಹೊಡೆದು ಅಥವಾ ತಲೆಯನ್ನು ಗೋಡೆಗೆ ಜಜ್ಜಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಬಹಳ ಹಿಂದೆಯೇ ಸಾಂಸಾರಿಕ ಬಂಧನದಿಂದ ಹೊರಬಂದಿರುವ ಪ್ರತಿಮಾ ಅವರ ಪತಿ, ಕನಕಪುರ ರಸ್ತೆಯ ಶ್ರೀ ಶ್ರೀ ರವಿಶಂಕರ್ ಆಶ್ರಮ ಸೇರಿಕೊಂಡಿದ್ದಾರೆ. ಆಗಿನಿಂದಲೂ ಇವರು ಒಂಟಿಯಾಗಿ ನೆಲೆಸಿದ್ದಾರೆ.
ಒಂಟಿಯಾಗಿದ್ದರು : ಪ್ರತಿಮಾ ಅವರ ಪುತ್ರ ವಿವಾಹದ ನಂತೆ ಪ್ರತ್ಯೇಕವಾಗಿ ಮನೆ ಮಾಡಿಕೊಂಡು ವಾಸಿಸುತ್ತಿದ್ದಾರೆ. ಆಗಾಗ ದೂರವಾಣಿ ಮೂಲಕ ಆಗಾಗ ತಾಯಿಯ ಆರೋಗ್ಯ ವಿಚಾರಿಸುತ್ತಾ ಅಗತ್ಯವಿದ್ದಾಗ ಮನೆಗೆ ಬಂದು ಮಾತನಾಡಿಸಿಕೊಂಡು ಹೋಗುತ್ತಿದ್ದರು. ಭಾನುವಾರ ಸಂಜೆಯೂ ತಾಯಿಗೆ ಅವರು ಕರೆ ಮಾಡಿದ್ದರು.
ಆದರೆ ತಾಯಿ ಕರೆ ಸ್ವೀಕರಿಸಿರಲಿಲ್ಲ. ಸೋಮವಾರ ಬೆಳಿಗ್ಗೆಯೂ ಕರೆ ಮಾಡಿದರೆ ತಾಯಿ ಉತ್ತರ ನೀಡಿರಲಿಲ್ಲ. ಆಗಾಗ ಮಂತ್ರಾಲಯ ಅಥವಾ ತಿರುಪತಿಗೆ ಹೋಗುವ ಅಭ್ಯಾಸ ವಿಟ್ಟುಕೊಂಡಿದ್ದ ಪ್ರತಿಮಾ ಅವರು ಅಲ್ಲಿಗೆ ಹೋಗಿರಬಹುದು ಎಂದು ಮಗ ಸುಮ್ಮನಾಗಿದ್ದರು. ಕೊಲೆಯ ನಂತರ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ದೋಚಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಹಲ್ಲೆಯಾಗಿತ್ತು : ಒಂಟಿಯಾಗಿ ವಾಸವಾಗಿರುವ ಪ್ರತಿಮಾ ಅವರ ಮೇಲೆ 2008ರಲ್ಲಿ ಮನೆಗೆ ನುಗ್ಗಿದ ಅಪರಿಚಿತರು ಹಲ್ಲೆ ಮಾಡಿದ್ದರು. ಬಾಯಿಗೆ ಬಟ್ಟೆ ತುರುಕಿ ಮೈಮೇಲಿದ್ದ ಒಡವೆಗಳನ್ನು ದೋಚಿಕೊಂಡು ಪರಾರಿಯಾಗಿದ್ದರು ಎಂದು ಪ್ರತಿಮಾ ಅವರು ಜಯನಗರ ಠಾಣೆಗೆ ದೂರು ನೀಡಿದ್ದರು. ಈ ಕುರಿತು ನಾಲ್ವರು ಅಪರಾಧಿಗಳಿಗೆ ಶಿಕ್ಷೆ ಸಹ ಆಗಿತ್ತು.












Click it and Unblock the Notifications