ಕೋವಿಡ್: ಬೆಂಗಳೂರಿನ ಜನಪ್ರಿಯ ರೆಸ್ಟೋರೆಂಟ್ 'ಟಾವೊ ಟೆರೇಸ್' ಕ್ಲೋಸ್
ಬೆಂಗಳೂರು ಜನವರಿ 10: ಸಿಲಿಕಾನ್ ಸಿಟಿಯಲ್ಲಿ ರಾತ್ರಿ ಮತ್ತು ವಾರಾಂತ್ಯದ ಕರ್ಫ್ಯೂನಿಂದಾಗಿ ಬಾರ್ ಮತ್ತು ರೆಸ್ಟೋರೆಂಟ್ ಉದ್ಯಮಗಳಿಗೆ ಭಾರೀ ಪೆಟ್ಟು ಬಿದ್ದಿದೆ. ಕಳೆದ ವರ್ಷ ಏಪ್ರಿಲ್ನಲ್ಲಿ ಕೊರೊನಾ ಎರಡನೇ ಅಲೆಯ ಸಮಯದಲ್ಲಿ ವಿಧಿಸಲಾಗಿದ್ದ ನೈಟ್ ಕರ್ಫ್ಯೂ ಅನ್ನು ಏಳು ತಿಂಗಳ ನಂತರ ನವೆಂಬರ್ 8 ರಂದು ತೆಗೆದುಹಾಕಲಾಯಿತು. ಇದಾಗಿ ಎರಡು ತಿಂಗಳಾದ ಬಳಿಕ ಮತ್ತೆ ನೈಟ್ ಕರ್ಫ್ಯೂ ವಾರಾಂತ್ಯದ ಲಾಕ್ಡೌನ್ ಹೇರಲಾಗಿದೆ. ಇದರಿಂದ ಬಾರ್ ಮತ್ತು ರೆಸ್ಟೋರೆಂಟ್ಗಳ ಸಿಬ್ಬಂದಿ ಮತ್ತು ಮಾಲೀಕರ ಮೇಲೆ ವಾರಾಂತ್ಯದ ಕರ್ಫ್ಯೂ ಭಾರೀ ದೊಡ್ಡ ಪರಿಣಾಮವನ್ನೇ ಬೀರಿದ್ದು ಆರ್ಥಿಕ ನಷ್ಟಕ್ಕೆ ಗುರಿಯಾಗಿವೆ.
ನಗರದಲ್ಲಿ ಉತ್ತಮ ಸಂಗೀತಕ್ಕೆ ಹಾಗೂ ಉತ್ತಮ ಊಟಕ್ಕೆ ಹೆಸರುವಾಸಿಯಾಗಿರುವ ಟಾವೊ ಟೆರೇಸ್ನ್ನು ಶನಿವಾರ ಸಂಜೆ ಕ್ಲೋಸ್ ಮಾಡಲಾಗಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಟಾವೊ ಟೆರೇಸ್ ಮಾಲೀಕ ನರೇನ್ ಬೆಳ್ಳಿಯಪ್ಪ ಪುನರಾವರ್ತಿತ ಕರ್ಫ್ಯೂ, ಹೆಚ್ಚಿನ ಬಾಡಿಗೆಗಳು, ಬಾಡಿಗೆ ನೀಡಲು ಪಟ್ಟುಹಿಡದ ಭೂಮಾಲೀಕರು ಮತ್ತು ಸರ್ಕಾರದ ನಿರಾಸಕ್ತಿಯಿಂದಾಗಿ ಸದ್ಯಕ್ಕೆ ಟಾವೊ ಟೆರೇಸ್ ಮುಚ್ಚುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಹೇಳಿದ್ದಾರೆ.
'10 ವರ್ಷಗಳ ನಂತರ ನಿಮ್ಮ ನೆಚ್ಚಿನ ಸಂಗೀತ ತಾಣವಾದ ಟಾವೊ ಟೆರೇಸ್ಗಳನ್ನು ಇಂದು ಮುಚ್ಚಲಾಗುತ್ತಿದೆ' ಎಂದು ಬೆಳ್ಳಿಯಪ್ಪ ಅವರು ಹೇಳಿದ್ದಾರೆ. ನಮ್ಮ ದೊಡ್ಡ ಸವಾಲೆಂದರೆ ಹೆಚ್ಚಿನ ಬಾಡಿಗೆಗಳು. ಜೊತೆಗೆ ನಿರ್ಬಂಧಗಳನ್ನು ಘೋಷಿಸಿದಾಗಲೆಲ್ಲಾ ಮುಚ್ಚುವುದು ಮತ್ತೆ ಮರು-ತೆರೆಯುವುದು. ಕಳೆದ ವರ್ಷ ಮಾರ್ಚ್ನಲ್ಲಿ ನಾವು ಟಾವೊ ಟೆರೇಸ್ನ್ನು ತಾತ್ಕಾಲಿಕವಾಗಿ ಮುಚ್ಚಿದಾಗ, 21 ತಿಂಗಳ ನಂತರವೂ ಕೋವಿಡ್ ಇನ್ನೂ ಪ್ರಚಲಿತದಲ್ಲಿದೆ ಎಂದು ನಾವ್ಯಾರೂ ಊಹಿಸಿರಲಿಲ್ಲ.
''ಆದರೆ, ಅಸಾಧ್ಯವಾದ ಪರಿಸ್ಥಿತಿಯ ನಡುವೆಯೂ ನಾವು ತಾತ್ಕಾಲಿಕವಾಗಿ ಟಾವೊ ಟೆರೇಸ್ ಮುಚ್ಚುವ ಮೂಲಕ ಗ್ರಾಹಕರ ಭರವಸೆಯನ್ನು ಹಾಗೇ ಉಳಿಸಿಕೊಂಡಿದ್ದೆವು. ಏಕೆಂದರೆ ನಾವು ಮಾಡುವ ಕೆಲಸವನ್ನು ನಾವು ತುಂಬಾ ಇಷ್ಟಪಡುತ್ತೇವೆ. ವಿಶ್ವದ ಅತ್ಯುತ್ತಮ ಪ್ರೇಕ್ಷಕರಿಗೆ ಅತ್ಯುತ್ತಮ ಸಂಗೀತವನ್ನು ಪ್ರಸ್ತುತಪಡಿಸುತ್ತೇವೆ. ಪದೇ ಪದೇ ಮುಚ್ಚುವುದರಿಂದ ನಗರದಲ್ಲಿ ಎಫ್ ಅಂಡ್ ಬಿ ಉದ್ಯಮ ಅಧೋಗತಿಗೆ. ಆರ್ಥಿಕ ನಷ್ಟವನ್ನು ಅನುಭವಿಸುತ್ತಿವೆ" ಎಂದು ಬೆಳ್ಳಿಯಪ್ಪ ತಿಳಿಸಿದ್ದಾರೆ.
ಇದು ಕಾರ್ಯಸಾಧ್ಯವಲ್ಲದ ಮತ್ತು ಸಮರ್ಥನೀಯವಲ್ಲದ ಮಾರ್ಪಾಡು. ಪುನರಾವರ್ತಿತವಾಗಿ ಬಂದ್ ಮಾಡಿದರೆ ನಾವು ಅಬಕಾರಿ ಸುಂಕವನ್ನು ಹೇಗೆ ಪಾವತಿಸಬೇಕು? ನಮ್ಮ ವ್ಯವಹಾರವನ್ನು ಹೇಗೆ ನಡೆಸಬೇಕು? ಮತ್ತು ನಮ್ಮ ಸಿಬ್ಬಂದಿಗೆ ಪಾವತಿಸುವುದು ಹೇಗೆ? ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ನ್ಯಾಷನಲ್ ರೆಸ್ಟೊರೆಂಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಎನ್ಆರ್ಎಐ) ಬೆಂಗಳೂರು ವಿಭಾಗದ ಮುಖ್ಯಸ್ಥ ಮತ್ತು ಜನಪ್ರಿಯ ಮೈಕ್ರೋಬ್ರೂವರಿ ಟಾಯ್ಟ್ನ ಸಹ-ಸಂಸ್ಥಾಪಕ ಮುಖೇಶ್ ತೊಲಾನಿ ಅವರು ರಾತ್ರಿ ಕರ್ಫ್ಯೂ ಅನ್ನು ವಾರದ ದಿನಗಳಲ್ಲಿ ರಾತ್ರಿ 10 ರ ಬದಲು ರಾತ್ರಿ 11.30 ರವರೆಗೆ ಸಡಿಲಿಸುವಂತೆ ಮನವಿಯೊಂದಿಗೆ ಅಬಕಾರಿ ಇಲಾಖೆಯನ್ನು ಸಂಪರ್ಕಿಸಿದ್ದೇವೆ ಎಂದು ಹೇಳಿದರು. ಮನವಿಯಲ್ಲಿ ಸಾಂಕ್ರಾಮಿಕ ರೋಗದಿಂದಾಗಿ ನಾವು ವ್ಯಾಪಾರದ ಪ್ರಮುಖ ಭಾಗವನ್ನು ಕಳೆದುಕೊಂಡಿದ್ದೇವೆ. ಐಟಿ ಜನರ ಕೊರತೆಯಿಂದಾಗಿ ನಮ್ಮ ವಾರದ ದಿನದ ವ್ಯಾಪಾರ ಕಡಿಮೆಯಾಗಿದೆ.
''ರಾತ್ರಿ 10 ರಿಂದ ರಾತ್ರಿ ಕರ್ಫ್ಯೂ, ಮತ್ತು ಈಗ ವಾರಾಂತ್ಯದ ಕರ್ಫ್ಯೂ ಇದು ರೆಸ್ಟೋರೆಂಟ್ಗಳು, ಪಬ್ಗಳು ಮತ್ತು ಬಾರ್ಗಳಿಗೆ ಭಾರೀ ಪೆಟ್ಟು ನೀಡಿದೆ. ವ್ಯಾಪಾರವನ್ನು ಮರೆತುಬಿಡಿ, ನಮ್ಮ ಉಳಿವು ಮತ್ತು ನಮ್ಮ ಸಿಬ್ಬಂದಿ ಅಪಾಯದಲ್ಲಿದೆ ಎಂದು ಅವರು ಹೇಳಿದ್ದಾರೆ. ಅವರು ವಾರಾಂತ್ಯದಲ್ಲಿ ವ್ಯಾಪಾರ ಮಾಡಲು ಮುಖ್ಯಮಂತ್ರಿ ಮತ್ತು ಅಬಕಾರಿ ಆಯುಕ್ತರನ್ನು ಭೇಟಿ ಮಾಡುವ ಅವರ ಪ್ರಯತ್ನಗಳು ವ್ಯರ್ಥವಾಗಿವೆ" ಎಂದು ಅವರು ಅಸಮಧಾನಗೊಂಡಿದ್ದಾರೆ.
"ಮಾಂಸ, ತರಕಾರಿಗಳು ಇತ್ಯಾದಿಗಳನ್ನು ಒಳಗೊಂಡಂತೆ ನಮ್ಮ ವಾರಾಂತ್ಯದ ಬಿಲ್ಗಳು ಸುಮಾರು 4 ಲಕ್ಷ ರೂಪಾಯಿ ಆಗಿರುತ್ತದೆ. ವಾರಾಂತ್ಯದಲ್ಲಿ ಆದಾಯವಿರಲಿ ಖರ್ಚಾದ ಹಣವೂ ಸಿಗುವುದು ಕಷ್ಟ ಆಗಿದೆ. ಇದು ಪೂರೈಕೆದಾರರು ಮತ್ತು ಸಿಬ್ಬಂದಿಯಂತಹ ಮಧ್ಯಸ್ಥಗಾರರ ಮೇಲೂ ಪರಿಣಾಮ ಬೀರುತ್ತದೆ. ವಾರಾಂತ್ಯದ ಲಾಕ್ಡೌನ್ F&B ವಲಯಕ್ಕೆ ಗಂಭೀರ ಪರಿಣಾಮ ಬೀರಿದೆ. ಇಂತಹ ಸಮಯದಲ್ಲಿ ನೈಟ್ ಕರ್ಫ್ಯೂ ಸಾಕು. ವಾರಾತ್ಯಂದ ಲಾಕ್ಡೌನ್ ಅಗತ್ಯ ಇರಲಿಲ್ಲ" ಎಂದು ಎಬೋನಿ ರೆಸ್ಟೋರೆಂಟ್ನ ರಾಜೇಶ್ ರಾಜಾರಾಮ್ ಅಭಿಪ್ರಾಯಪಟ್ಟರು.
NRAI ರಾಷ್ಟ್ರೀಯ ಸಮಿತಿಯ ಸದಸ್ಯ ವ್ಯಾಟ್ಸನ್ನ ಅಮಿತ್ ರಾಯ್ ಮಾತನಾಡಿ, ''ಕರ್ನಾಟಕದಲ್ಲಿ F&B ಉದ್ಯಮವು ಮಾರ್ಚ್ 2020 ರಿಂದ ಪಾತಾಳಕ್ಕೆ ಕುಸಿದಿದೆ. "ನಾವು ಮುಂಗಡವಾಗಿ ಅಬಕಾರಿ ಪರವಾನಗಿ ಶುಲ್ಕವನ್ನು ಪಾವತಿಸಿದ್ದೇವೆ, 2020 ರ ಆರಂಭದಲ್ಲಿ ರಾಷ್ಟ್ರೀಯ ಲಾಕ್ಡೌನ್ ಸಮಯದಲ್ಲಿ ನಾವು ಸಂಪೂರ್ಣವಾಗಿ ಮುಚ್ಚಲ್ಪಟ್ಟ ತಿಂಗಳುಗಳ ಹೊರತಾಗಿಯೂ ಟ್ಯಾಕ್ಸ್ ಕಟ್ಟಿದ್ದೇವೆ. ನಾವು ಯಾವುದೇ ರಿಯಾಯಿತಿಗಾಗಿ ಸರ್ಕಾರವನ್ನು ಕೇಳಿಲ್ಲ. ಈಗ ನಾವು ಬಾರ್ ಮತ್ತು ರೆಸ್ಟೋರೆಂಟ್ ಮುಚ್ಚಲ್ಪಟ್ಟ ತಿಂಗಳುಗಳ ಪರವಾನಗಿ ಶುಲ್ಕವನ್ನು ಮನ್ನಾ ಮಾಡಲು ಅವರಿಗೆ ವಿನಂತಿಸುತ್ತಿದ್ದೇವೆ. ಸರ್ಕಾರದಿಂದ ಯಾವುದೇ ಬೆಂಬಲವಿಲ್ಲ ಮತ್ತು ಸಕಾಲದಲ್ಲಿ ಬಾಡಿಗೆ ಪಾವತಿಸಲು ಭೂಮಾಲೀಕರ ಒತ್ತಡವು ಹೆಚ್ಚಾಗಿದೆ. ಅದೇ ಕೊರೊನಾ ಸಂದರ್ಭದಲ್ಲಿ ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಆದರೆ ಅಂಗಡಿಗಳನ್ನು ಮಾತ್ರ ಮುಚ್ಚುವಂತೆ ಮಾಡಲಾಗಿದೆ. ಸಾಂಕ್ರಾಮಿಕ-ಸಂಬಂಧಿತ ನಿರ್ಬಂಧಗಳು ನಮ್ಮ ಉಸಿರುಗಟ್ಟಿಸುವಂತೆ ಮಾಡಿದೆ "ಎಂದು ರಾಯ್ ಹೇಳಿದರು.