ಹಿಂದೂಯೇತರ ವ್ಯಾಪಾರಿಗಳಿಗೆ ಅನುಮತಿ ನೀಡದಂತೆ ಬಿಬಿಎಂಪಿಗೆ ಮನವಿ
ನವೆಂಬರ್ 26, ಬೆಂಗಳೂರು: ಬಸವನಗುಡಿ ಕಡಲೆಕಾಯಿ ಪರಿಷೆ ಬಳಿಕ ಇದೀಗ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಹಿಂದೂಯೇತರ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹಿಂದುಪರ ಸಂಘಟನೆಗಳು ಮನವಿ ಮಾಡಿವೆ.
ಬೆಂಗಳೂರು ನಗರದ ಸಜ್ಜನ್ ರಾವ್ ವೃತ್ತದ ಬಳಿ ವಿವಿ ಪುರಂನಲ್ಲಿರುವ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನಡೆಯಲಿರುವ 'ಬೆಳ್ಳಿ ತೇರು' ಜಾತ್ರೆಯಲ್ಲಿ ಹಿಂದೂಯೇತರ ವ್ಯಾಪಾರಿಗಳಿಗೆ ಅನುಮತಿ ನೀಡಬಾರದು. ಕೇವಲ ಹಿಂದುಗಳಿಗೆ ಮಾತ್ರ ಅನುಮತಿ ನೀಡಬೇಕು ಎಂದು ಭಜರಂಗದಳ ಕಾರ್ಯಕರ್ತರು ಬಿಬಿಎಂಪಿ ಆಯುಕ್ತ ತುಷಾರ್ಗಿರಿನಾಥ್ಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ 7-8 ತಿಂಗಳಿನಿಂದ ಶಾಂತವಾಗಿದ್ದ ಧರ್ಮ ಧ್ವೇಷವು ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತ್ತೆ ಮುನ್ನೆಲೆ ಬಂದಿದೆ. ಇತ್ತೀಚೆಗೆ ಬಸವನಗುಡಿಯ ಕಡಲೆಕಾಯಿ ಪರಿಷೆಯಲ್ಲಿ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಷಷ್ಠಿ ಮಹೋತ್ಸವದಲ್ಲೂ ಹಿಂದೂಯೇತರ ವ್ಯಾಪಾರಿಗಳಿಗೆ ನಿರ್ಬಂಧಿಸುವಂತೆ ಮನವಿ ಮಾಡಿದ್ದರು. ದೇವಸ್ಥಾನ ಮುಂದೆ ನಾಮಫಲಕ ಹಾಕಿದ್ದು ಸಾಕಷ್ಟು ಸುದ್ದಿಯಾಗಿತ್ತು. ಒಟ್ಟಾರೆ ಧರ್ಮ ದಂಗಲ್ ಇದೀಗ ಕರಾವಳಿ ಭಾಗದಲ್ಲಿ ರಾಜ್ಯದೆಲ್ಲಡೆ ಹಬ್ಬುತ್ತಿದೆ.
ಹಿಂದೂಪರ ಸಂಘಟನೆಗಳು ರಾಜ್ಯ ದತ್ತಿ ಇಲಾಖೆ ಮತ್ತು ರಾಜ್ಯ ಸರ್ಕಾರಕ್ಕೆ ಹಿಂದೂಯೇತರ ವ್ಯಾಪಾರಿಗಳಿಗೆ ಹಿಂದೂ ದೇವಸ್ಥಾನದ ಜಾತ್ರೆಯಲ್ಲಿ ವ್ಯಾಪಾರಕ್ಕೆ ಅನುಮತಿ ನೀಡದಂತೆ ಮನವಿ ಮಾಡಿಕೊಂಡಿದ್ದವು. ಜಾತ್ರಾ ಮಹೋತ್ಸವಗಳು ನಡೆಯುವ ಸಂದರ್ಭದಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರ ನಡೆಸಲು ಅವಕಾಶ ನೀಡಲು ಆಗ್ರಹಿಸಿದ್ದವು.
ಭಜರಂಗದಳದಿಂದ ಬಿಬಿಎಂಪಿ, ಪೊಲೀಸರಿಗೆ ಮನವಿ
ಬೆಂಗಳೂರಿನ ಹಿಂದೂ ದೇವಾಲಯಗಳಲ್ಲಿ ನಡೆಯಲಿರುವ ಜಾತ್ರೆಗಳಲ್ಲಿ ಹಿಂದೂಯೇತರಿಗೆ ಅನುಮತಿ ನೀಡದಂತೆ ಬಿಬಿಎಂಪಿ ಆಯುಕ್ತರಿಗೆ ಹಾಗೂ ಬೆಂಗಳೂರು ದಕ್ಷಿಣ ಉಪ ಪೋಲಿಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ವ್ಯಾಪಾರದ ಹೆಸರಲ್ಲಿ ಜಿಹಾದ್ ಮಾಡುತ್ತಾರೆ. ಅವರ ಉರುಸುಗಳಲ್ಲಿ ಹಿಂದೂಗಳಿಗೆ ಅವಕಾಶ ಕೊಡುವುದಿಲ್ಲ. ಈ ಹಿನ್ನೆಲೆ ನೀವು ಅವಕಾಶ ನೀಡಬಾರದು ಎಂದು ಭಜರಂಗದಳ ಮನವಿ ಮಾಡಿಕೊಂಡಿದೆ.
ಹಿಂದೂಗಳ ಧಾರ್ಮಿಕ ಭಾವನೆಗೆ ಬೆಲೆ ಕೊಡದೇ ಇರುವುದು, ದೇಶದ ಕಾನೂನಿಗೆ ಬೆಲೆ ಕೊಡದೇ ಇರುವುದು, ಮೂರ್ತಿ ಪೂಜೆಯನ್ನು ನಂಬದೇ ಇರುವುದು, ವ್ಯಾಪಾರದ ಹೆಸರಿನಲ್ಲಿ ಜಿಹಾದ್ ಮಾಡುವುದು, ಹಿಂದೂಗಳ ದೇವರುಗಳನ್ನು ಸಾಮಾಜಿಕ ಜಾಲತಾಣದಲ್ಲಿ ವಿಕೃತಗೊಳಿಸುವವರಿಗೆ ವ್ಯಾಪಾರಕ್ಕೆ ಅವಕಾಶ ಕೊಡಬಾರದು ಎಂದು ಮನವಿ ಮಾಡಿದ್ದಾರೆ.