ಹಿಂದುಗಳಿಗೆ ಅಲ್ಪಸಂಖ್ಯಾತರ ಸ್ಥಾನ ನೀಡುವಂತೆ ಆಗ್ರಹ
ಬೆಂಗಳೂರು, ಅಕ್ಟೋಬರ್ 29: ಭಾರತದಲ್ಲಿ ಹಿಂದುಗಳಿಗೆ ಅಲ್ಪಸಂಖ್ಯಾತರ ಸ್ಥಾನವನ್ನು ನೀಡುವಂತೆ ಸೃಜನ್ ಪ್ರತಿಷ್ಠಾನದ ಮುಖಂಡರು ಆಗ್ರಹಿಸಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಭಾನುವಾರ ನಡೆದ ಹಿಂದೂ ಚಾರ್ಟರ್ ಕಾರ್ಯಕ್ರಮದಲ್ಲಿ ಹಿಂದುಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನದ ಕುರಿತು ಚರ್ಚೆ ನಡೆಯಿತು.
ಹಿಂದೂಗಳಿಗೆ ಅಲ್ಪಸಂಖ್ಯಾತರ ಹಕ್ಕುಗಳು ನೀಡಬೇಕು,ಪ್ರಪಂಚದಲ್ಲಿರುವ ವಿವಿಧ ರೀತಿಗಳಲ್ಲಿ ಶೋಷಣೆಗೊಳಗಾಗುತ್ತಿರುವ ಅಥವಾ ನಿರಾಶ್ರಿತ ಹಿಂದೂ, ಸಿಖ್, ಜೈನ ಧರ್ಮೀಯರಿಗೆ ಭಾರತದಲ್ಲಿ ಸ್ಥಾನ ನೀಡಬೇಕು ಎನ್ನುವ ವಿಚಾರ ಕುರಿತು ಸಭೆ ನಡೆಯಿತು.

ಹಿಂದುಗಳ ಬೇಡಿಕೆ ಪತ್ರದಲ್ಲೇನಿದೆ?
-ಶ್ರೀ ಸತ್ಯಪಾಲ್ ಸಿಂಗ್-ರವರ 2016ನೇ ಸಾಲಿನ ಪ್ರೈವೇಟ್ ಮೆಂಬರ್ ಬಿಲ್ ಅನ್ನು ಲೋಕಸಭೆಯಲ್ಲಿ ಮಂಡಿಸಿ ಈ ಕೆಳಗಿನ ವಿಷಯಗಳಲ್ಲಿ ಅಲ್ಪಸಂಖ್ಯಾತರಿಗಿರುವಷ್ಟೇ ಹಕ್ಕುಗಳು ಹಿಂದೂಗಳಿಗೂ ನೀಡಬೇಕು, ದೇವಸ್ಥಾನ ಮತ್ತು ಮಠ ಮಂದಿರಗಳನ್ನು ಯಾವುದೇ ಹಸ್ತಕ್ಷೇಪವಿಲ್ಲದೇ ನಡೆಸುವ ಸ್ವಾತಂತ್ರ್ಯ ವಿದ್ಯಾರ್ಥಿವೇತನ, ಸರ್ಕಾರಿ ಯೋಜನೆಗಳು ಮತ್ತು ಇತರ ಹಣಕಾಸು ಸಂಬಂಧಿತ ಪ್ರಯೋಜನಗಳು ಶೈಕ್ಷಣಿಕ ಸಂಸ್ಥೆಗಳಲ್ಲಿ ಭಾರತೀಯ ಪುರಾತನ ಜ್ಞಾನ ಮತ್ತು ಸಾಂಸ್ಕೃತಿಕ, ಧಾರ್ಮಿಕ ಗ್ರಂಥಗಳ ಪಾಠ ಪ್ರಸಾರ ಮಾಡುವ ಹಕ್ಕು ಸರಕಾರದ ಯಾವುದೇ ಹಸ್ತಕ್ಷೇಪವಿಲ್ಲದೆ ಎಲ್ಲಾ ರೀತಿಯ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಡೆಸುವ ಹಕ್ಕು ನೀಡಬೇಕು.
-ಸಾವಿರಾರು ಕೋಟಿ ರೂಗಳ ಒಳಹರಿವಿನ ಮೂಲಕ ನಮ್ಮ ದೇಶದ ಕಾನೂನು, ಶಾಸನ, ನ್ಯಾಯಾಂಗ ಮತ್ತು ಸಾರ್ವಜನಿಕ ನೀತಿಯ ಮೇಲೆ ವಿದೇಶಿ ಸರ್ಕಾರಗಳ ಹಸ್ತಕ್ಷೇಪಕ್ಕೆ ಕಾರಣವಾಗುತ್ತಿರುವ ಎಫ್ಸಿಆರ್ಎ ಕಾನೂನನ್ನು ನಿಷೇಧಿಸಬೇಕು. ಒಸಿಐ(ಅನಿವಾಸಿ ಭಾರತೀಯರು) ಪ್ರಜೆಗಳು ಬಿಟ್ಟು ಇನ್ನಿತರರಾರೂ ದೇಶದ ಒಳಗೆ ಹಣ ತರುವುದಕ್ಕೆ ಅವಕಾಶ ನೀಡಬಾರದು.
-ಧರ್ಮ ಸ್ವಾತಂತ್ರ್ಯ ಕಾನೂನೊಂದನ್ನು ಜಾರಿಗೆ ತರಬೇಕು. ಇದರ ಮುಖಾಂತರ ಹಿಂದೂ ಧರ್ಮದ ಕಟ್ಟು ಪಾಡುಗಳು, ಹಬ್ಬಗಳು, ಆಚಾರ ವಿಚಾರಗಳು ಮತ್ತು ಪದ್ಧತಿಗಳ ಮೇಲೆ ಇಂದು ನಡೆಯುತ್ತಿರುವ ಆಕ್ರಮಣವನ್ನು ಸಂಪೂರ್ಣವಾಗಿ ಕೊನೆಗೊಳಿಸಬೇಕು.

-ಸಂವಿಧಾನದ 370ನೇ ವಿಧಿಯನ್ನು ಅಮಾನ್ಯ ಮಾಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನವನ್ನು ಹಿಂಪಡೆಯಬೇಕು. 35ಎನೇ ವಿಧಿಯನ್ನು ಸಹ ಹಿಂಪಡೆದು ಜಮ್ಮು ಮತ್ತು ಕಾಶ್ಮೀರವನ್ನು ಜಮ್ಮು, ಕಾಶ್ಮೀರ ಮತ್ತು ಲಡಾಖ್ ಎಂದು ತ್ರಿವಳಿ ರಾಜ್ಯಗಳನ್ನಾಗಿ ವಿಭಜಿಸಬೇಕು.
-ದೇಶದಿಂದ ಮಾಂಸ ಮತ್ತು ಗೋಮಾಂಸ ರಫ್ತನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಇದರಿಂದ ಆಗುತ್ತಿರುವ ಪರಿಸರ ಹಾನಿ, ಮಾಂಸದ ಬೆಲೆಯ ಏರಿಕೆ, ಗೋ ಕಳ್ಳತನ ಮತ್ತು ಸಾಮಾಜಿಕ ಅಶಾಂತಿ ಇವನ್ನು ಕೊನೆಗೊಳಿಸಬೇಕು.
-ಹೈಂದವ ಸಂಸ್ಕೃತಿ ಜೀರ್ಣೋದ್ಧಾರ ನಿಗಮವೊಂದನ್ನು ಸ್ಥಾಪಿಸುವುದರ ಜತಗೆ ಅದಕ್ಕೆ ಪ್ರಾರಂಭದಲ್ಲೇ ಹತ್ತು ಸಾವಿರ ಕೋಟಿ ರುಪಾಯಿಗಳ ಬಂಡವಾಳವನ್ನು ನೀಡಬೇಕು. ಈ ಸಂಸ್ಥೆಯು ಪಾಳುಬಿದ್ದಿರುವ ದೇವಸ್ಥಾನಗಳ ಜೀರ್ಣೋದ್ಧಾರ ಮತ್ತು ವಿನಾಶದ ಅಂಚಿನಲ್ಲಿರುವ ಕಲೆ, ನೃತ್ಯ ಹಾಗೂ ಇತರ ಸಾಂಸ್ಕೃತಿಕ ಮಾಧ್ಯಮಗಳ ಪುನರುತ್ಥಾನದ ಕೆಲಸವನ್ನು ಕೈಗೊಳ್ಳಬೇಕು.
-ಪ್ರಸ್ತುತ ಸಂಸತ್ತಿನಲ್ಲಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂದಕ್ಕೆ ಪಡೆದು, ಇತರ ದೇಶಗಳಲ್ಲಿ ಹಿಂಸೆಗೆ ಒಳಗಾಗುತ್ತಿರುವ ಹಿಂದೂ, ಸಿಖ್, ಜೈನ್ ಮತ್ತು ಬೌದ್ಧರಿಗೆ ಭಾರತದಲ್ಲಿ ಆಶ್ರಯ ಸಿಗುವುದಕ್ಕೆ ಪೂರಕವಾಗುವಂತಹ ಹೊಸ ಕಾನೂನನ್ನು ಜಾರಿಗೆ ತರಬೇಕು.
- ಎಲ್ಲಾ ಭಾರತೀಯ ಭಾಷೆಗಳಿಗೆ ಪ್ರೋತ್ಸಾಹ ನೀಡಿ, ದೇಶೀಯ ಭಾಷೆಗಳ ಮೂಲಕ ಭಾರತದ ಮತ್ತು ಹಿಂದೂ ಧರ್ಮದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪುನಶ್ಚೇತನದ ಕಾರ್ಯಕ್ಕೆ ಚಾಲನೆ ನೀಡಬೇಕು ಈ ಕುರಿತು ಒತ್ತಾಯ ಮಾಡಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ತಿನ ಮುಖಂಡರಾದ ಗಿರೀಶ್ ಭಾರದ್ವಾಜ್, ದೆಹಲಿಯ ಶಾಸಕ ಕಪಿಲ್ ಮಿಶ್ರಾ, ಅಮೆರಿಕದ ಸಾಫ್ಟ್ವೇರ್ ಉದ್ಯೋಗಿ ಸಂಕ್ರಾಂತ್ ಸಾನು ಇದ್ದರು.











Click it and Unblock the Notifications