ಪತ್ರಕರ್ತ ಅಗ್ನಿ ಶ್ರೀಧರ್ ವಿರುದ್ಧ ದೇಶದ್ರೋಹದ ದೂರು
Recommended Video

ಬೆಂಗಳೂರು, ಡಿಸೆಂಬರ್ 26:ಪತ್ರಕರ್ತ ಅಗ್ನಿಶ್ರೀಧರ್ ವಿರುದ್ಧ ಬಿಜೆಪಿ ಮುಖಂಡರೊಬ್ಬರು ದೇಶದ್ರೋಹದ ಆರೋಪ ಹೊರೆಸಿ, ಸೈಬರ್ ಕ್ರೈಂ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಭಾರತಮಾತೆಗೆ ಅವಮಾನವಾಗುವಂಥ ಕವನವೊಂದನ್ನು ಪ್ರಕಟಿಸಿದ್ದಾರೆ. ಅಲ್ಲದೆ, ಅಗ್ನಿ ಶ್ರೀಧರ್ ಅವರ ಖಾತೆಯಿಂದ ಪ್ರಸಾರವಾಗಿರುವ ಆಡಿಯೊ, ವೀಡಿಯೊ ತುಣುಕುಗಳಲ್ಲೂ ಈ ಕವನದ ಬಗ್ಗೆ ಉಲ್ಲೇಖವಿದೆ.
ಅಗ್ನಿ ಅಸ್ತ್ರ ಹೆಸರಿನ ವೆಬ್ ಸೈಟ್ ನಲ್ಲಿ ಕವನ ಪೋಸ್ಟ್ ಮಾಡಿರುವ ಪತ್ರಕರ್ತ ಅಗ್ನಿಶ್ರೀಧರ್, ಕವನ ಬರೆದಿರುವ ಯತಿರಾಜ್ ಎಂಬುವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಅವರ ಒಡೆತನದ ಜಾಲತಾಣ ಖಾತೆಗಳನ್ನು ನಿರ್ಬಂಧಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಮುಖಂಡರು ನಗರದ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

ಅಗ್ನಿ ಅಸ್ತ್ರ ಎಂಬ ವೆಬ್ ತಾಣದಲ್ಲಿ ಪ್ರಕಟವಾಗಿರುವ ಕವನದಲ್ಲಿ ಭಾರತ ಮಾತೆಯನ್ನು ವ್ಯಭಿಚಾರಿಗೆ ಹೋಲಿಕೆ ಮಾಡಲಾಗಿದೆ. ಅಗ್ನಿ ಶ್ರೀಧರ್ ಅವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ, ಶಾಂತಿ ಭಂಗ ತರುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡರಾದ ಸಿ.ಟಿ.ಮಂಜುನಾಥ್, ಶಿವಕುಮಾರ್ ಆರಾಧ್ಯ, ಎಂ.ಸಿ.ವರದರಾಜು ಎಂಬುವವರು ಆನ್ ಲೈನ್ ನಲ್ಲಿ ದೂರು ನೀಡಿದ್ದಾರೆ ಎಂದು ಸೈಬರ್ ಕ್ರೈಂ ವಿಭಾಗದ ಬೆಂಗಳೂರು ಪೊಲೀಸರು ಹೇಳಿದರು.












Click it and Unblock the Notifications