ಹಿಜಾಬ್ ವಿವಾದ: ಬೆಂಗಳೂರಿನ ಶಾಲಾ, ಕಾಲೇಜು ವ್ಯಾಪ್ತಿಯಲ್ಲಿ ನಿಷೇಧಾಜ್ಞೆ
ಬೆಂಗಳೂರು ಫೆ. 09: ಹಿಜಾಬ್ ವಿವಾದ ಕುರಿತ ಪ್ರಕರಣಗಳು ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲೇ ಬೆಂಗಳೂರು ನಗರದಲ್ಲಿ ಫೆ. 09 ರಿಂದ ಫೆ. 22 ರ ವರೆಗೆ ಶಾಲಾ ಕಾಲೇಜು ವ್ಯಾಪ್ತಿಯ 200 ಮೀಟರ್ ವರೆಗೂ ನಿಷೇಧಾಜ್ಞೆ ಜಾರಿಗೊಳಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಆದೇಶಿಸಿದ್ದಾರೆ.
ಈ ಕುರಿತು ಅಧಿಕೃತ ಆದೇಶ ಹೊರಡಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್, ಹಿಜಾಬ್ ಕುರಿತು ರಾಜ್ಯದ ಹಲವು ಭಾಗಗಳಲ್ಲಿ ಪ್ರತಿಭಟನೆ, ಮುಷ್ಕರ ನಡೆಯುತ್ತಿವೆ. ಕೆಲವು ಕಡೆ ಮುಷ್ಕರ, ಹೋರಾಟಗಳು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಬೆಂಗಳೂರಿನಲ್ಲಿ ಸಹ ಈ ರೀತಿಯ ಪ್ರತಿಭಟನೆ, ಮುಷ್ಕರ ನಡೆಯುವ ಸಾಧ್ಯತೆ ಇರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಫೆ. 09 ರಿಂದ ಫೆ. 22 ರ ವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
Recommended Video
ಬೆಂಗಳೂರು ನಗರ ಕಮೀಷನರೇಟ್ ವ್ಯಾಪ್ತಿಯ ಶಾಲಾ ಕಾಲೇಜು ಸಮೀಪದ 200 ಮೀಟರ್ ಅಂತರದಲ್ಲಿ ಯಾವುದೇ ಪ್ರತಿಭಟನೆ, ಹೋರಾಟ, ಸಂಘಟನೆ ಮಾಡುವಂತಿಲ್ಲ. ಐದಕ್ಕಿಂತಲೂ ಹೆಚ್ಚು ಮಂದಿ ಒಂದಡೆ ಸೇರುವಂತಿಲ್ಲ ಎಂದು ಆದೇಶದಲ್ಲಿ ಸೂಚಿಸಲಾಗಿದೆ. ಬೆಂಗಳೂರಿನಲ್ಲಿ ನಗರದ ಶಾಲಾ, ಪಿಯು ಕಾಲೇಜುಗಳು, ಪದವಿ ಕಾಲೇಜುಗಳು ಅಥವಾ ಇತರ ಶಿಕ್ಷಣ ಸಂಸ್ಥೆಗಳ ಗೇಟ್ನಿಂದ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಪ್ರತಿಭಟನೆಗಳು, ಸಭೆಗಳು, ಆಂದೋಲನಗಳು ಅಥವಾ ಪ್ರತಿಭಟನೆಗಳನ್ನು ಎರಡು ವಾರಗಳವರೆಗೆ ನಿಷೇಧಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ರಾಜ್ಯದ ಕೆಲವು ಕಾಲೇಜುಗಳಲ್ಲಿನ ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ ಪುನರಾರಂಭಿಸಿತು. ಮಂಗಳವಾರ ಈ ಕುರಿತ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ, ವಿದ್ಯಾರ್ಥಿಗಳು ಮತ್ತು ಜನರು ಶಾಂತಿ, ನೆಮ್ಮದಿ ಕಾಪಾಡುವಂತೆ ಮನವಿ ಮಾಡಿತ್ತು. ಇಂದು ನ್ಯಾಯಾಲಯ ವಿಚಾರಣೆ ನಡೆಸಿ ಅರ್ಜಿಯನ್ನು ನ್ಯಾ. ಕೃಷ್ಣ ದೀಕ್ಷಿತ್ ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಿ ಆದೇಶಿಸಿದೆ.

ಇತ್ತ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದದ ಬಗ್ಗೆ ಮಾತನಾಡಿ, ಅದು ಬಿಕಿನಿಯಾಗಿರಲಿ, 'ಹಿಜಾಬ್' ಆಗಿರಲಿ, ತಾನು ಏನು ಧರಿಸಬೇಕೆಂದು ನಿರ್ಧರಿಸುವುದು ಮಹಿಳೆಯ ಹಕ್ಕು ಎಂದು ಹೇಳಿದ್ದಾರೆ. ಜೊತೆಗೆ ಶಾಲೆ ಅಥವಾ ಕಾಲೇಜುಗಳಲ್ಲಿ ನಿಗದಿತ ಸಮವಸ್ತ್ರವಿದ್ದರೆ ಅದನ್ನು ಅನುಸರಿಸಬೇಕು ಎಂದು ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ಬುಧವಾರ ಹೇಳಿದ್ದಾರೆ. "ಶಿಕ್ಷಣದ ಕೇಂದ್ರಗಳಲ್ಲಿ ಶಿಕ್ಷಣ ಮಾತ್ರ ಕೇಂದ್ರೀಕೃತವಾಗಿರಬೇಕು. ಧಾರ್ಮಿಕ ಅಥವಾ ರಾಜಕೀಯ ವಿಷಯಗಳನ್ನು ಶಾಲಾ/ಕಾಲೇಜುಗಳಿಗೆ ತರಬಾರದು" ಎಂದು ಅವರು ಹೇಳಿದ್ದಾರೆ.
Gatherings, agitations or protest of any type within the area of 200-meter radius from the gate(s) of schools, PU colleges, degree colleges or other similar educational institutions in Bengaluru city, prohibited for two weeks with immediate effect: Police Dept, Govt of Karnataka pic.twitter.com/zoxCYQ9SOo
— ANI (@ANI) February 9, 2022
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ಏಕಸದಸ್ಯ ಪೀಠದಲ್ಲಿ ಬುಧವಾರ ವಿಚಾರಣೆ ಆರಂಭವಾಯಿತು. ವಕೀಲ ಸಂಜಯ್ ಹೆಗಡೆ ಅರ್ಜಿದಾರರ ಪರವಾಗಿ ಬುಧವಾರ ವಾದ ಮಂಡನೆ ಮಾಡುತ್ತಿದ್ದಾರೆ. ಈ ಪ್ರಕರಣದ ಸಮಸ್ಯೆ ಬಗೆಹರಿಯಬೇಕು. ಇದು ನನ್ನ ಸ್ವಂತ ಊರು ಮತ್ತು ನನ್ನ ಕಾಲೇಜಿನ ಪ್ರಕರಣ. ಸಮವಸ್ತ್ರ ನಿಗದಿಪಡಿಸುವ ಅಧಿಕಾರವಿದೆಯೇ? ಎಂದು ವಕೀಲ ಸಂಜಯ್ ಹೆಗಡೆ ವಾದ ಮಂಡಿಸಿದರು. ನ್ಯಾಯಾಲಯ ಅರ್ಜಿಯ ವಿಚಾರಣೆಯನ್ನು ವಿವರವಾಗಿ ನಡೆಸಲಿ. ಆದರೆ ಮಧ್ಯಂತರ ಆದೇಶವೊಂದನ್ನು ನೀಡಲಿ ಎಂದು ಅರ್ಜಿದಾರರ ಪರ ವಕೀಲ ಸಂಜಯ್ ಹೆಗಡೆ ಕೋರ್ಟ್ಗೆ ಮನವಿ ಮಾಡಿದರು.












Click it and Unblock the Notifications