ಅರೆರೆ.. ಅವರೆ ಮೇಳ.. ಕೊಂಚ ದುಬಾರಿ, ಆದ್ರೂ ಬರ್ರಿ!
ಬೆಂಗಳೂರು, ಜನವರಿ 07 : ಉದ್ಯಾನ ನಗರಿ ಹೃದಯ ಭಾಗದಲ್ಲಿ ಮತ್ತೆ ಹಬ್ಬದ ವಾತಾವರಣ. ಕಡಲೆಕಾಯಿ ಪರಿಷೆ ಮುಗಿದು ಇನ್ನು ತಿಂಗಳು ಕಳೆದಿಲ್ಲ.. ಅದಾಗಲೆ ಅವರೆಕಾಳು ಮೇಳ ಆರಂಭವಾಗಿದೆ. ವಿ ವಿ ಪುರದ ಸಜ್ಜನ್ ರಾವ್ ವೃತ್ತದಲ್ಲಿಗ ಅವರೆಕಾಳಿನ ಬಗೆ ಬಗೆಯ ತಿಂಡಿಗಳದ್ದೇ ಘಮ.
ಕೊಂಚ ತಡವಾಗಿ ಆರಂಭವಾಗಿರುವ ಮೇಳ ಜನವರಿ 7 ರಿಂದ 24ರ ತನಕ ನಡೆಯಲಿದೆ. ವಾಸವಿ ಕಾಂಡಿಮೆಂಟ್ಸ್ ನೇತೃತ್ವದಲ್ಲಿ ನಡೆಯುತ್ತಿರುವ ಅವರೆ ಮೇಳಕ್ಕೆ ಈ ಬಾರಿ 16 ರ ಹರೆಯ.[ಅವರೆ ಮೇಳದ ಚಿತ್ರಗಳು]
ನಟಿ, ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧಾ ಅವರೆ ಮೇಳಕ್ಕೆ ಗುರುವಾರ ಚಾಲನೆ ನೀಡಿದರು. ನಟಿ ರೂಪಿಕಾ ಸಹ ಅವರ ಮೇಳದಲ್ಲಿ ಪಾಲ್ಗೊಂಡಿದ್ದರು. ಪುದೀನ ಹಿತಕ ಬೇಳೆ ಈ ಬಾರಿಯ ಅವರೆ ಕಾಳು ಮೇಳದ ಹೊಸ ತಿಂಡಿ. ಉಳಿದಂತೆ 108ಕ್ಕೂ ಅಧಿಕ ಭಕ್ಷ್ಯಗಳನ್ನು ಒಂದೇ ಕಡೆ ಸವಿಯಬಹುದು.[ಆಹಾ... ಬಗೆ ಬಗೆಯ ಭಕ್ಷ್ಯಗಳಿವು]
ಜಹಾಂಗೀರು, ಹಿತಕಬೇಳೆ ಹಲ್ವಾ, ಕಾಜು ಬರ್ಫಿ, ಸ್ವೀಟ್ ಬೂಂದಿ, ಕಟ್ಲೆಟ್ಗಳು ವಿಶೇಷವಾಗಿವೆ. ಅವರೆಕಾಯಿ ಹೋಳಿಗೆ, ನಿಪ್ಪಟ್ಟು, ಕೋಡುಬಳೆ, ಜಾಮೂನು, ಪಾಯಸ, ವಡೆ, ದೋಸೆ, ಉಪ್ಪಿಟ್ಟು, ಅವರೆಕಾಳು ಚಿತ್ರಾನ್ನ, ಮಸಾಲೆ ವಡೆ, ಅವಲಕ್ಕಿ ಮಿಕ್ಸ್.... ಅಬ್ಬಾ ಪಟ್ಟಿ ಮುಂದುವರಿಯುತ್ತದೆ ಜತೆಗೆ ಬಾಯಲ್ಲಿ ನೀರು ಬರುತ್ತದೆ.. ಬನ್ನಿ ಅವರೆಕಾಳು ಮೇಳವನ್ನು ಒಂದು ರೌಂಡ್ ಹಾಕಿಕೊಂಡು ಬರೋಣ.....
ಸಜ್ಜನ್ ರಾವ್ ಸರ್ಕಲ್ ಎಲ್ಲಿದೆ?

ಸಂಜೆಗೆ ಎಲ್ಲವೂ ಸಿದ್ಧ
ವಾಸವಿ ಕಾಂಡಿಮೆಂಟ್ಸ್ ಸಿಂಗಾರಗೊಂಡಿದ್ದರೆ, ರಸ್ತೆಯ ಉದ್ದಕ್ಕೂ ಇರುವ ಅಂಗಡಿಗಳು ಮೇಳಕ್ಕೆ ಜನರನ್ನು ಬರಮಾಡಿಕೊಳ್ಳಲು ಸಿದ್ಧವಾಗಿವೆ. ಬಗೆ ಬಗೆಯ ತಿಂಡಿ ತಿನಿಸುಗಳನ್ನು ಸಿದ್ಧಮಾಡುತ್ತಿರುವುದು ಕಂಡು ಬಂತು.

ಕೊಂಚ ದುಬಾರಿ
ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರತಿಯೊಂದು ತಿಂಡಿಯ ಬೆಲೆ 5 ರು. ಜಾಸ್ತಿಯಾಗಿದೆ. ಅವರೆಕಾಳು ದೋಸೆಗೆ 50 ರು. ನೀಡಬೇಕು. ಅವರೆಕಾಳು ಮಲ್ಲಿಗೆ ಇಡ್ಲಿಗೆ 20 ರು. ಮೊಸರು ಕೊಡುಬಳೆ 30 ರು. ಇದೆ.

ಹೊಸ ತಿಂಡಿಗಳೇನು?
ಪುದೀನ ಹಿತಕಬೇಳೆ, ಮತ್ತು ಕಾರ ಹಿತಕ ಬೇಳೆ ಈ ಬಾರಿಯ ಹೊಸ ಐಟಂಗಳು. ಕೆಜಿಗೆ 600 ರು. ನಿಗದಿಪಡಿಸಿದ್ದರೂ ರುಚಿಯನ್ನು ಒಮ್ಮೆ ಸವಿಯಲೆಬೇಕು.

ಸವಿ ಸವಿ ನೆನಪು
ನಾನು ಆಟವಾಡಿ ಬೆಳೆದ ಜಾಗ ಸಜ್ಜನ್ ರಾವ್ ವೃತ್ತ. ಮೇಳದಲ್ಲಿ ಭಾಗವಹಿಸಿದ್ದೇನೆ ಎನ್ನುವುದಕ್ಕಿಂತ ಇದು ನಮ್ಮ ಅಡ್ಡ... ಇದು ನಮ್ಮ ಜಾಗ ಎಂದು ಹರ್ಷದಿಂದ ನುಡಿದವರು ನಟಿ ರೂಪಿಕಾ.

ಮೇಳ ಪರಿಷೆಯಾಗಿದೆ
ಪ್ರತಿ ವರ್ಷವೂ ಅವರೆಕಾಳು ಮೇಳಕ್ಕೆ ನಾನು ಬರುತ್ತೇನೆ. ಮೇಳ ಇದೀಗ ಪರಿಷೆಯಾಗಿ, ಹಬ್ಬವಾಗಿ ಬದಲಾಗಿದೆ. ಬೆಂಗಳೂರಿನ ನಾಗರಿಕ ಒಮ್ಮೆ ಮೇಳಕ್ಕೆ ಭೇಟಿ ನೀಡಲೇಬೇಕು ಎಂದು ತಾರಾ ಹೇಳಿದರು.

ಎದುರುಗೊಳ್ಳುವ ಕೆಂಪೇಗೌಡರು
ಮೇಳದ ಹೆಬ್ಬಾಗಿಲನ್ನು ದಾಟಿ ಒಳಕ್ಕೆ ಕಾಲಿಟ್ಟರೆ ಕೈ ಯಲ್ಲಿ ಖಡ್ಗ ಹಿಡಿದ ಕೆಂಪೇಗೌಡ ಪುತ್ಥಳಿ ನಿಮ್ಮನ್ನು ಎದುರುಗೊಳ್ಳುತ್ತದೆ. ಪಕ್ಕದಲ್ಲಿಯೇ ಪೊಲೀಸ್ ಸಹಾಯವಾಣಿಯನ್ನು ತೆರೆಯಲಾಗಿದೆ.

ರಾಮನಗರದ ಡೊಳ್ಳು
ಅವರೆ ಕಾಳು ಮೇಳದ ಚಾಲನೆ ಕಾರ್ಯಕ್ರಮಕ್ಕೆ ಸಾಂಪ್ರದಾಯಿಕ ಸ್ಪರ್ಶ ನೀಡಿದವರು ರಾಮನಗರದ ಡೊಳ್ಳು ಕಲಾವಿದರು. ಇವರು ಹವ್ಯಾಸಿ ಕಲಾವಿದರು. ವಿದ್ಯಾರ್ಥಿಗಳು, ರೈತರು ಎಲ್ಲರೂ ಸೇರಿಕೊಂಡು ತಂಡ ಕಟ್ಟಿಕೊಂಡು ಡೊಳ್ಳು ಬಾರಿಸುತ್ತಾರೆ.

ಸಜ್ಜನ್ ರಾವ್ ವೃತ್ತ ತಲುಪೋದು ಹೇಗೆ?
ಮೆಜೆಸ್ಟಿಕ್ ನಿಂದ ಹೊರಟು ಕಾರ್ಪೋರೇಶನ್ ಮಾರ್ಗವಾಗಿ ಕೆಆರ್ ಮಾರುಕಟ್ಟೆ ತಲುಪಿ ಮುಂದೆ ನೇರವಾಗಿ ಬಂದರೆ ಸಜ್ಜನ್ ರಾವ್ ವೃತ್ತ ತಲುಪಬಹುದು.












Click it and Unblock the Notifications