ಕೋರ್ಟ್ ಆವರಣದಲ್ಲೇ ವಕೀಲೆ ಹತ್ಯೆ: ಜೀವಾವಧಿ ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್
ಬೆಂಗಳೂರು, ಮೇ 17: ಸುಮಾರು ಒಂಬತ್ತು ವರ್ಷಗಳ ಹಿಂದೆ ಹೈಕೋರ್ಟ್ ಕಾರಿಡಾರ್ನಲ್ಲಿಯೇ ಮಹಿಳಾ ವಕೀಲೆ, ಪ್ರೇಯಸಿಯನ್ನು ಚಾಕುವಿನಿಂದ ಹಲವು ಬಾರಿ ಇರಿದು ಹತ್ಯೆ ಮಾಡಿದ್ದ ಆರೋಪದಲ್ಲಿ ವಕೀಲ ಎಸ್.ಎಲ್. ರಾಜಪ್ಪ ಅವರಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ರಾಜಪ್ಪ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪನ್ನು ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಮತ್ತು ಎಚ್.ಬಿ. ಪ್ರಭಾಕರ ಶಾಸ್ತ್ರಿ ಅವರನ್ನು ಒಳಗೊಂಡ ವಿಭಾಗೀಯ ನ್ಯಾಯಪೀಠ ಎತ್ತಿ ಹಿಡಿಯಿತು.

ಹೈಕೋರ್ಟ್ ಆವರಣದಲ್ಲಿ 2010ರ ಜುಲೈ 8ರಂದು ಈ ಘಟನೆ ನಡೆದಿತ್ತು. ವಕೀಲೆ ನವೀನಾ ಅವರ ಎದೆ, ಹೊಟ್ಟೆ ಮತ್ತು ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದ ರಾಜಪ್ಪ, ವಿಷಮಿಶ್ರಿತ ಮದ್ಯ ಸೇವಿಸಿ ಶೌಚಗೃಹಕ್ಕೆ ಹೋಗಿ ಬಾಗಿಲು ಹಾಕಿಕೊಂಡಿದ್ದರು. ಆತ್ಮಹತ್ಯೆಗೆ ಯತ್ನಿಸಿದ್ದ ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ರಕ್ತಸ್ರಾವದಿಂದ ನವೀನಾ ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನವರಾದ 34 ವರ್ಷದ ರಾಜಪ್ಪ, ವಿಲ್ಸನ್ ಗಾರ್ಡನ್ನಲ್ಲಿ ವಾಸವಿದ್ದ ಕೋಲಾರ ಜಿಲ್ಲೆಯ ಸಿಗಲಪಾಳ್ಯದ ನವೀನಾ ಅವರನ್ನು ಪ್ರೀತಿಸುತ್ತಿದ್ದರು. ಹಿರಿಯ ವಕೀಲ ಪ್ರಕಾಶ ಶೆಟ್ಟಿ ಅವರ ಬಳಿ ನವೀನಾ ಪ್ರಾಕ್ಟೀಸ್ಗಾಗಿ ಸೇರಿಕೊಂಡಿದ್ದರು. ಅವರ ಜತೆ ನವೀನಾ ಸಲುಗೆಯಿಂದ ಇದ್ದಾರೆ ಎಂಬ ಕಾರಣಕ್ಕೆ ಕೋಪಗೊಂಡು ಅವರ ಹತ್ಯೆಗೆ ರಾಜಪ್ಪ ಸಂಚು ರೂಪಿಸಿದ್ದರು.
ರಾಜಪ್ಪ ಅವರ ಜೇಬಿನಲ್ಲಿ ಅವರ ಸಹಿಯುಳ್ಳ ಡೆತ್ ನೋಟ್ ದೊರಕಿತ್ತು. ಸಾಕ್ಷ್ಯಗಳನ್ನು ಆಧರಿಸಿ ವಿಚಾರಣಾ ನ್ಯಾಯಾಲಯ ರಾಜಪ್ಪ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.












Click it and Unblock the Notifications