ಆರ್. ಆರ್. ನಗರ ಉಪ ಚುನಾವಣೆ ಹಾದಿ ಸುಗಮ
ಬೆಂಗಳೂರು, ಮಾರ್ಚ್ 20 : ಬೆಂಗಳೂರಿನ ರಾಜರಾಜೇಶ್ವರಿ ನಗರದ ಉಪ ಚುನಾವಣೆ ನಡೆಸಲು ಇದ್ದ ಕಾನೂನು ಅಡೆ-ತಡೆಗಳು ನಿವಾರಣೆಯಾಗಿವೆ. ಶಾಸಕರಾಗಿದ್ದ ಮುನಿರತ್ನ ಅನರ್ಹಗೊಂಡಿದ್ದು, ಕ್ಷೇತ್ರಕ್ಕೆ ಶಾಸಕರಿಲ್ಲ.
2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುನಿರತ್ನ ಗೆಲುವು ಸಾಧಿಸಿದ್ದರು. ಅವರ ವಿರುದ್ಧ ಬಿಜೆಪಿಯಿಂದ ಮುನಿರಾಜು ಗೌಡ ಕಣಕ್ಕಿಳಿದಿದ್ದರು. ಮುನಿರತ್ನ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕ ಸದಸ್ಯ ಪೀಠ ಮುನಿರಾಜು ಗೌಡ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ತಮ್ಮನ್ನು ವಿಜೇತ ಅಭ್ಯರ್ಥಿ ಎಂದು ಘೋಷಣೆ ಮಾಡುವಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಜೂನ್ 15ಕ್ಕೆ ಮುಂದೂಡಿದೆ.
ಕರ್ನಾಟಕದಲ್ಲಿ ಮೈತ್ರಿ ಸರ್ಕಾರವಿದ್ದಾಗ ರಾಜೀನಾಮೆ ನೀಡಿದ್ದ 17 ಶಾಸಕರಲ್ಲಿ ಮುನಿರತ್ನ ಅವರು ಸಹ ಒಬ್ಬರು. ಸ್ಪೀಕರ್ ಆದೇಶದಂತೆ ಅವರು ಅನರ್ಹಗೊಂಡಿದ್ದು, ಆರ್. ಆರ್. ನಗರ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿಲ್ಲ.

ಮುನಿರತ್ನ ಗೆಲುವು
2018ರ ಮೇ 28ರಂದು ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆ ನಡೆದಿತ್ತು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುನಿರತ್ನ 108,065 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಬಿಜೆಪಿಯಿಂದ ಕಣಕ್ಕಿಳಿದಿದ್ದ ಮುನಿರಾಜು ಗೌಡ 82,573 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು.

ಮುನಿರಾಜು ಗೌಡ ಅರ್ಜಿ
ಚುನಾವಣೆಯಲ್ಲಿ ಸೋತಿದ್ದ ಮುನಿರಾಜು ಗೌಡ ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಮುನಿರತ್ನ ಆಯ್ಕೆ ಅಸಿಂಧು ಎಂದು ಘೋಷಣೆ ಮಾಡಬೇಕು. 2ನೇ ಸ್ಥಾನಗಳಿಸಿರುವ ತನ್ನನ್ನು ಶಾಸಕ ಎಂದು ಘೋಷಣೆ ಮಾಡಬೇಕು ಎಂದು ಮನವಿ ಮಾಡಿದ್ದರು. ಹೈಕೋರ್ಟ್ ಮುನಿರತ್ನ ಅಸಿಂಧು ಎಂದು ಘೋಷಣೆ ಮಾಡಲು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದೆ. ಮತ್ತೊಂದು ಅರ್ಜಿಯ ವಿಚಾರಣೆ ಮುಂದೂಡಿದೆ.

ಅರ್ಜಿಯಲ್ಲಿನ ಆರೋಪವೇನು?
ಆರ್. ಆರ್. ನಗರದ ಚುನಾವಣೆಗೆ ಕೆಲವೇ ದಿನಗಳು ಇರುವಾಗ ಜಾಲಹಳ್ಳಿಯ ಫ್ಲ್ಯಾಟ್ ಒಂದರಲ್ಲಿ ನಕಲಿ ವೋಟರ್ ಐಡಿ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಮುನಿರತ್ನ ಸೇರಿ 10 ಜನರ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಮುನಿರತ್ನ ಆಯೋಗ ನಿಗದಿ ಮಾಡಿದ್ದಕ್ಕಿಂತ ಹೆಚ್ಚಿನ ಹಣವನ್ನು ಚುನಾವಣೆಗೆ ಖರ್ಚು ಮಾಡಿದ್ದಾರೆ. ಚುನಾವಣಾ ಅಕ್ರಮ ನಡೆಸಿರುವ ಅವರನ್ನು ಅಸಿಂಧುಗೊಳಿಸಬೇಕು ಎಂದು ಮುನಿರಾಜು ಗೌಡ ಅರ್ಜಿಯಲ್ಲಿ ಮನವಿ ಮಾಡಿದ್ದರು.

ಬಿಜೆಪಿಯಲ್ಲಿದ್ದಾರೆ
ಈಗ ಎಲ್ಲವೂ ಬದಲಾಗಿದ್ದು ಮುನಿರತ್ನ ಬಿಜೆಪಿಯಲ್ಲಿದ್ದಾರೆ. ಆರ್. ಆರ್. ನಗರ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಬೇಕಿದೆ. ತಕರಾರು ಅರ್ಜಿ ಹೈಕೋರ್ಟ್ನಲ್ಲಿದ್ದ ಕಾರಣ ಉಪ ಚುನಾವಣೆಯನ್ನು ಆಯೋಗ ಘೋಷಣೆ ಮಾಡಿರಲಿಲ್ಲ.












Click it and Unblock the Notifications