ಜೆಡಿಎಸ್ ಕೇಂದ್ರ ಕಚೇರಿ ಕಾಂಗ್ರೆಸ್ ವಶಕ್ಕೆ
ಬೆಂಗಳೂರು, ಅ.11: ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಜೆಡಿಎಸ್ ಕೇಂದ್ರ ಕಚೇರಿ ಕಾಂಗ್ರೆಸ್ ಪಾಲಾಗಿದೆ. ಜೆಡಿಎಸ್ ಕಚೇರಿ ಇರುವ ಸ್ಥಳ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು ಎಂಬ ಸಿಟಿ ಸಿವಿಲ್ ಕೋರ್ಟ್ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಹೈಕೋರ್ಟ್ ವಿಭಾಗೀಯ ಪೀಠದ ಆದೇಶದ ಪ್ರಕಾರ ಜಾತ್ಯಾತೀತ ಜನತಾ ದಳ ತನ್ನ ಕೇಂದ್ರ ಕಚೇರಿ ಮೂರು ತಿಂಗಳೊಳಗೆ ಎತ್ತಂಗಡಿ ಮಾಡಬೇಕಾಗಿದೆ. ಹಾಲಿ ಕಚೇರಿಯನ್ನು ಈಗ ಇರುವ ಸ್ಥಿತಿಯಲ್ಲೇ ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ನೀಡತಕ್ಕದ್ದು. ಜತೆಗೆ ಕೋರ್ಟ್ ಶುಲ್ಕ ಕೂಡಾ ಪಾವತಿಸಲು ಸೂಚನೆ ನೀಡಿದೆ.
ಜೆಡಿಎಸ್ ಕಚೇರಿ ಕಾಂಗ್ರೆಸ್ ಗೆ ಸೇರಿದ್ದು ಎಂದು ಸಿಟಿ ಸಿವಿಲ್ ಕೋರ್ಟ್ 2005ರಲ್ಲೇ ಆದೇಶ ನೀಡಿತ್ತು. ಮೂರು ವರ್ಷಗಳ ಹಿಂದೆ ಕೂಡ ಹೈಕೋರ್ಟ್ ಈ ಕಚೇರಿ ಕಾಂಗ್ರೆಸ್ ಗೆ ಸೇರಿದ್ದು ಎಂದು ಆದೇಶ ಕೊಟ್ಟಿತ್ತು.
ಆದರೆ,
ಈ
ಆದೇಶವನ್ನು
ಪ್ರಶ್ನಿಸಿ
ಜೆಡಿಎಸ್
ನಾಯಕರು
ವಿಭಾಗೀಯ
ಪೀಠಕ್ಕೆ
ಮನವಿ
ಮಾಡಿದ್ದರು.
ಮೂರು
ವರ್ಷಗಳ
ನಂತರ
ತೀರ್ಪು
ನೀಡಿರುವ
ವಿಭಾಗೀಯ
ಪೀಠ
ಹೈಕೋರ್ಟ್
ಆದೇಶವನ್ನೇ
ಎತ್ತಿ
ಹಿಡಿದಿದೆ.
ವಿವಾದದ ಹಿನ್ನೆಲೆ: 1969ರಲ್ಲಿ ಅಖಿಲ ಭಾರತ ಮಟ್ಟದಲ್ಲಿ ಕಾಂಗ್ರೆಸ್, ಸಂಸ್ಥಾ ಕಾಂಗ್ರೆಸ್ ಮತ್ತು ಇಂದಿರಾಗಾಂಧಿ ಕಾಂಗ್ರೆಸ್ ಎಂದು ಎರಡು ಹೋಳಾಯಿತು. ಆಗ ಸಂಸ್ಥಾ ಕಾಂಗ್ರೆಸ್ ವೀರೇಂದ್ರ ಪಾಟೀಲರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿತ್ತು. ಆಗ ಈ ಕಚೇರಿ ಕಾಂಗ್ರೆಸ್ ಕಚೇರಿಯಾಗಿಯೇ ಇತ್ತು.
ಇಂದಿರಾಗಾಂಧಿ ಕಾಂಗ್ರೆಸ್ ಬಣದಲ್ಲಿ ಗುರುತಿಸಿಕೊಂಡಿದ್ದ ಯುವ ಕಾಂಗ್ರೆಸ್ ಮುಖಂಡರಾಗಿದ್ದ ರಘುಪತಿ ಈ ಕಚೇರಿಯನ್ನು ತಮ್ಮ ವಶಕ್ಕೆ ಪಡೆಯಲು ಅನೇಕ ಬೆಂಬಲಿಗರೊಂದಿಗೆ ಕಚೇರಿಗೆ ನುಗ್ಗಿ ವಶಕ್ಕೆ ಪಡೆಯುವ ಪ್ರಯತ್ನ ನಡೆಸಿದ್ದರು. ಆದರೆ, ಫಲ ಸಿಕ್ಕಿರಲಿಲ್ಲ.
ನಂತರ ಸಂಸ್ಥಾ ಕಾಂಗ್ರೆಸ್ ನ ಮುಖಂಡರೆಲ್ಲರೂ ಜನತಾ ಪರಿವಾರಕ್ಕೆ ಬಂದಿದ್ದರಿಂದ ಈ ಕಚೇರಿ ಜನತಾ ಪರಿವಾರ, ಆ ನಂತರ ಜನತಾದಳದ ವಶಕ್ಕೆ ಬಂದಿತ್ತು. ಸುಮಾರು 30 ವರ್ಷಗಳಿಂದಲೂ ಕಚೇರಿಯನ್ನು ವಶಕ್ಕೆ ತೆಗೆದುಕೊಳ್ಳುವ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಕಾನೂನು ಹೋರಾಟ ನಡೆಯುತ್ತಲೇ ಬಂದಿದ್ದು, ಈಗ ವಿಭಾಗೀಯ ಪೀಠ ಈ ಕಚೇರಿ ಕಾಂಗ್ರೆಸ್ ಗೆ ಸೇರಿದ್ದು ಎಂದು ಆದೇಶ ನೀಡಿದೆ.
ಕಾನೂನು ಹೋರಾಟ: ಈ ನಡುವೆ ಹೈಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪ ಅವರು, ಕಾನೂನು ಹೋರಾಟವನ್ನು ಪಕ್ಷ ಮುಂದುವರಿಸಲಿದೆ ಎಂದು ತಕ್ಷಣದ ಪ್ರತಿಕ್ರಿಯೆ ಕೊಟ್ಟಿದ್ದಾರೆ. ತೀರ್ಪು ಹೊರಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಪಂಡಿತರು ಹಾಗೂ ಪಕ್ಷದ ಕಾನೂನು ಘಟಕದ ಸಲಹೆ-ಅಭಿಪ್ರಾಯ ಪಡೆದು ಕಾನೂನು ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ.