ಟೆಂಡರ್ ರದ್ದು: ಏರ್ಪೋರ್ಟ್ ಮೆಟ್ರೋ ನಿಧಾನ
ಬೆಂಗಳೂರು, ಮಾರ್ಚ್ 06: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆದಿದ್ದ ಮೆಟ್ರೋ ಟೆಂಡರ್ ರದ್ದಾಗಿದ್ದು ಗೊಟ್ಟಿಗೆರೆ-ನಾಗವಾರ ಹಾದಿಯ ಸುರಂಗ ಮಾರ್ಗ ಕಾಮಗಾರಿ ಇನ್ನಷ್ಟು ವಿಳಂಬವಾಗಲಿದೆ.
ಇದರಿಂದ ಸುರಂಗ ಮಾರ್ಗ ಕಾಮಗಾರಿ ಪೂರ್ಣಗೊಳ್ಳುವ ದಿನ ಮತ್ತಷ್ಟು ಮುಂದಕ್ಕೆ ಹೋಗುವುದು ಖಚಿತವಾಗಿದೆ. ಟೆಂಡರ್ ನಲ್ಲಿ ಭಾಗವಹಿಸಿದ್ದ ಕಂಪನಿಗಳು ಅಂದಾಜು ಮೊತ್ತಕ್ಕಿಂತ ಅಧಿಕ ಮೊತ್ತ ಉಲ್ಲೇಖಿಸಿದ್ದೇ ಇದಕ್ಕೆ ಕಾರಣ. ಗೊಟ್ಟಿಗೆರೆಯಿಂದ ನಾಗವಾರದವರೆಗೆ ನಿರ್ಮಾಣವಾಗಲಿರುವ 21.42 ಕಿಮೀ ಉದ್ದದ ಮಾರ್ಗದಲ್ಲಿ 13.91 ಕಿ.ಮೀ ಉದ್ದದ ಮಾರ್ಗವು ಸುರಂಗವಾಗಿದೆ.
ಹಸಿರು ಮಾರ್ಗ: ಮೆಟ್ರೋ ಸಂಚಾರ ಪುನರಾರಂಭ
ಈ ಮಾರ್ಗ ಅತಿ ಉದ್ದವಾಗಿರುವುದರಿಂದ ಹಾಗೂ ಜನವಸತಿ ಪ್ರದೇಶಗಳ ಕೆಳಗೆ ಸುರಂಗ ಕೊರೆಯಬೇಕಾಗಿರುವುದರಿಂದ ಕಾಮಗಾರಿ ಕಷ್ಟಕರವಾಗಲಿದೆ. ಎತ್ತರಿಸಿದ ಮಾರ್ಗದ ಕಾಮಗಾರಿಗೆ ಹೋಲಿಸಿದರೆ ಸುರಂಗ ಕಾಮಗಾರಿ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅಂದಾಜು ಮೊತ್ತಕ್ಕಿಂತ ಅಧಿಕ ಮೊತ್ತದ ಟೆಂಡರ್ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಟೆಂಡರ್ ರದ್ದುಪಡಿಸಲಾಗಿದೆ.
ಈಗ ಮತ್ತೆ ಟೆಂಡರ್ ಕರೆಯಬೇಕಿದ್ದು, ಒಟ್ಟು ಕಾಮಗಾರಿ ಮುಗಿಯುವ ದಿನ ಕನಿಷ್ಠ 8 ತಿಂಗಳು ಮುಂದಕ್ಕೆ ಹೋಗಬಹುದು. 2021ರೊಳಗೆ ಈ ಮಾರ್ಗದ ಕಾಮಗಾರಿ ಪೂರ್ಣಗೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಟೆಂಡರ್ ತಡವಾಗಿರುವುದರಿಂದ 2022ಕ್ಕೆ ಮಾರ್ಗದ ಕಾಮಗಾರಿ ಪೂರ್ಣಗೊಳ್ಳಬಹುದು.