ಹೆಬ್ಬಾಳ ಮೇಲ್ಸೇತುವೆಯನ್ನು ಶೀಘ್ರ ವಿಸ್ತರಣೆ ಮಾಡಲಿದೆ ಬಿಡಿಎ
ಬೆಂಗಳೂರು, ಡಿಸೆಂಬರ್ 20: ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಜವಾಬ್ದಾರಿಯನ್ನು ಬಿಡಿಎ ವಹಿಸಿಕೊಂಡಿದೆ. ಇದರಿಂದ ವಿಸ್ತರಣೆ ಕಾಮಗಾರಿ ಬಗೆಗಿದ್ದ ಗೊಂದಲಗಳು ದೂರವಾಗಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಗರದೊಳಗೆ ಬರುವ ವಾಹನಗಳಿಗೆ ಎದುರಾಗುತ್ತಿರುವ ಸಂಚಾರ ದಟ್ಟಣೆ ನೀಗಿಸಲು ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಮಾಡುವ ಕುರಿತು ಕಳೆದ ಬಜೆಟ್ನಲ್ಲಿ ಘೋಷಿಸಲಾಗಿತ್ತು. ಅದರಂತೆ ಬಿಡಿಎ ಈಗಾಗಲೇ ಕಾಮಗಾರಿ ಆರಂಭಿಸಬೇಕಿತ್ತು.
ಬಿಡಿಎಯಿಂದಲೇ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೂಚನೆ ನೀಡಿದ್ದಾರೆ. ಬಿಡಿಎ ನಷ್ಟದಲ್ಲಿದೆ ಹಾಗಾಗಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ, ಹೀಗಾಗಿ ಬಿಬಿಎಂಪಿಯಿಂದಲೇ ಕಾಮಗಾರಿ ಪೂರ್ಣಗೊಳಸಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು.

ಆದರೆ ಮುಖ್ಯ ಕಾರ್ಯದರ್ಶಿಗಳು ನಡೆಸಿದ ವಿವಿಧ ಇಲಾಖೆಗಳ ಸಮನ್ವಯ ಸಮಿತಿ ಸಭೆಯಲ್ಲಿ ಬಿಡಿಎಯಿಂದಲೇ ಕಾಮಗಾರಿ ನಡೆಸುವಂತೆ ಸೂಚನೆ ನೀಡಿದ್ದಾರೆ.ಜಯದೇವ ಜಂಕ್ಷನ್ ಬಳಿ ಮೆಟ್ರೋ ರೈಲು ಹಾಗೂ ವಾಹನಗಳು ಏಕಕಾಲದಲ್ಲಿ ಸಂಚರಿಸಬಲ್ಲ ರೋಡ್ ಕಂ ರೇಲ್ ಮೇಲ್ಸೇತುವೆ ನಿರ್ಮಾಣ ಕಾರ್ಯ ಶೀಘ್ರ ಆರಂಭವಾಗಲಿದೆ.
ಬನ್ನೇರುಘಟ್ಟ ಕಡೆಯಿಂದ ಈಗಿರುವ ಗ್ರೇಡ್ ಸಪರೇಟರ್ ಗೆ ಸಂಪರ್ಕ ಕಲ್ಪಿಸುವ ಅರ್ಧ ಚಂದ್ರಾಕೃತಿ ಮೇಲ್ಸೇತುವೆ 2019ರ ಏಪ್ರಿಲ್ನಲ್ಲಿ ತೆರವಾಗಲಿದೆ.
ನಮ್ಮ ಮೆಟ್ರೋ ಎರಡನೇ ಹಂತದ ಆರ್ವಿ ರಸ್ತೆ-ಬೊಮ್ಮಸಂದ್ರ ಮೆಟ್ರೋ ಕಾಮಗಾರಿ ಚುರುಕಿನಿಂದ ಸಾಗಿದೆ. ಆರ್ವಿ ರಸ್ತೆಯಿಂದ ಎಚ್ಎಸ್ಆರ್ ಲೇಔಟ್ ವರೆಗೆ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಹಿಂದುಸ್ತಾನ್ ಕನ್ಸ್ಟ್ರಕ್ಷನ್ ಕಂಪನಿ ಲಿಮಿಟೆಡ್ ಹಾಗೂ ಯುಆರ್ಸಿ ಕಂ. ಪ್ರೈವೇಟ್ ಲಿ.ಗೆ ಬಿಎಂಆರ್ಸಿಎಲ್ ಗುತ್ತಿಗೆ ನೀಡಿದೆ.
ಆರ್ವಿ ರಸ್ತೆ, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಸಿಲ್ಕ್ ಬೋರ್ಡ್ ಮೆಟ್ರೋ ನಿಲ್ದಾಣ ನಿರ್ಮಾಣ ಸೇರಿ ಒಟ್ಟು 6.34 ಕಿ.ಮೀ ಮೆಟ್ರೋ ಮಾರ್ಗ ನಿರ್ಮಾಣದ ಗುತ್ತಿಗೆ ಇದಾಗಿದೆ.
ಮಾರೇನಹಳ್ಳಿ ರಸ್ತೆ ಹಾಗೂ ಹೊರವರ್ತುಲ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ಚುರುಕಿನಿಂದ ಸಾಗಿದ್ದು, ನಿತ್ಯ ಟ್ರಾಫಿಕ್ ಹೆಚ್ಚಿದೆ. ಬನಶಂಕರಿ ಹಾಗೂ ಹೊರವರ್ತುಲ ರಸ್ತೆಯಿಂದ ಸಿಲ್ಕ್ ಬೋರ್ಡ್ ತಲುಪಲು ಜಯದೇವ ಜಂಕ್ಷನ್ ಮೂಲಕ ದಿನಕ್ಕೆ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ. ಬನಶಂಕರಿಯಿಂದ ಬರುವ ವಾಹನಗಳು ಜಯದೇವ ಜಂಕ್ಷನ್ ಬಳಿಯಿಂದ ಮೇಲ್ಸೇತುವೆ ಹತ್ತಿ ಇನ್ನೊಂದು ಕಡೆ ಇಳಿಯುತ್ತವೆ.












Click it and Unblock the Notifications