ಶಾಲೆ ಇಲ್ಲ..ಆಫೀಸ್ ಇಲ್ಲ..: ಸಿಲ್ಕ್ಬೋರ್ಡ್ ಟ್ರಾಫಿಕ್ಗೆ ಬೆಂಗಳೂರಿನ ಜನ ಹೈರಾಣು
ಬೆಂಗಳೂರು, ಆಗಸ್ಟ್ 12: ಬೆಂಗಳೂರಿನಲ್ಲಿ ನಿನ್ನೆ ತಡರಾತ್ರಿ ಭಾರೀ ಮಳೆಯಾಗಿದ್ದು, ಸಿಲಿಕಾನ್ ಸಿಟಿ ಜನರ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಭಾನುವಾರ ತಡರಾತ್ರಿಯಿಂದ ಮುಂಜಾವಿನ ವರೆಗೂ ಸುರಿದ ಧಾರಾಕಾರ ಮಳೆಯಿಂದ ಸೋಮವಾರ ಬೆಳಗ್ಗೆ ಶಾಲಾ-ಕಾಲೇಜು ಹಾಗೂ ಆಫೀಸ್ಗೆ ಹೋಗಬೇಕಾದವರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಎಲೆಕ್ಟ್ರಾನಿಕ್ ಸಿಟಿಯಿಂದ ಸೆಂಟ್ ಜಾನ್ಸ್ ತನಕ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿದ್ದು, ಒಂಡೆದೆ ವಾಹನ ಸವಾರರು ಪರದಾಡಿದರೆ, ಮತ್ತೊಂದೆಡೆ ಒಂದಷ್ಟು ಜನರು ಬಸ್ನಲ್ಲಿ ಸಿಲುಕಿಕೊಂಡು ಕಿರಿಕಿರಿ ಅನುಭವಿಸಿದ್ದಾರೆ.
ಸಿಲ್ಕ್ ಬೋರ್ಡ್ನಲ್ಲಿ ಬಳಿ ಕಾರೊಂದು ನೀರಲ್ಲಿ ಮುಳುಗಿದೆ ಪರಿಣಾಮ ಬೆಳ್ಳಂಬೆಳಗ್ಗೆಯೇ ಈ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಸಾಮಾನ್ಯವಾಗಿ ಸಿಲ್ಕ್ ಬೋರ್ಡ್ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಇರುತ್ತದೆ. ಆದರೆ ಇಂದು ಆಗಸ್ಟ್ 12 ಸೋಮವಾರ ಬೆಳಗ್ಗೆ ಜನ ಹಿಂದೆದೂ ಕಾಣದ ಟ್ರಾಫಿಕ್ ಜಾಮ್ ಕಾಣುವಂತಾಗಿದೆ. ಸುಮಾರು ಎರಡು ಮೂರು ಗಂಟೆಗಳ ಕಾಲ ಅವಧಿಯಲ್ಲಿ ಬಸ್ಗಳು ಕೇವಲ ಎರಡು ಮೂರು ನಿಲ್ದಾಣಗಳನ್ನಷ್ಟೇ ತಲುವಂತಾಗಿತ್ತು.

ಟ್ರಾಫಿಕ್ ಜಾಮ್ನಿಂದ ಬಸ್ಗಳು ಮುಂದೆ ಚಲಿಸದ ಕಾರಣ, ಪ್ರಯಾಣಿಕರು ಗಂಟೆ ಗಟ್ಟಲೇ ಬಸ್ ನಿಲ್ದಾಣದಲ್ಲಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಕಚೇರಿಗೆ ತೆರಳುವವರು ಸರಿಯಾದ ಸಮಯಕ್ಕೆ ಬಸ್ ಬಾರದೇ ಬಸ್ ನಿಲ್ದಾಣದಲ್ಲಿಯೇ ಇರುವಂತಾಗಿದೆ. ಇನ್ನು ಕೆಲವು ಬಸ್ಗಳು ಪ್ರಯಾಣಿಕರಿಂದ ತುಂಬಿದ್ದು, ಯಾರನ್ನು ಕೂಡ ಮತ್ತೆ ಹತ್ತಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಇದಿಷ್ಟು ಬಸ್ ನಿಲ್ದಾಣಗಳಲ್ಲಿ ಕಾಯುತ್ತಿರುವ ಜನರ ಸ್ಥಿತಿಯಾದರೆ, ಬಸ್ನ ಒಳಗೆ ಸಿಲುಕಿಕೊಂಡ ಪ್ರಯಾಣಿಕರ ಸ್ಥಿತಿ ಅಧೋಗತಿ ಎನ್ನುವಂತಾಗಿತ್ತು.
ಇನ್ನೇನು ಎರಡು ಮೂರು ಸ್ಟಾಪ್ ಎಂದುಕೊಂಡು ಸಿಲ್ಕ್ ಬೋರ್ಡ್ ಮಾರ್ಗದಲ್ಲಿ ಚಲಿಸುವ ಬಸ್ ಹತ್ತಿಕೊಂಡವರ ಸ್ಥಿತಿ ಇಂದು ಹೇಳತೀರದಾಗಿದೆ. ಎರಡು ಮೂರು ಗಂಟೆಗಳ ಅವಧಿಯಲ್ಲಿ ಬಸ್ಗಳು ಕೇವಲ ಎರಡು ಮೂರು ನಿಲ್ದಾಣಗಳನ್ನಷ್ಟೇ ತಲುಪುತ್ತಿದ್ದವು. ಹೀಗಾಗಿ ಬಸ್ನಲ್ಲಿ ನಿಂತು ಪ್ರಯಾಣಿಸಿದ ಪ್ರಯಾಣಿಕರು ಹೈರಾಣಾಗಿ ಹೋಗಿದ್ದಾರೆ. ಸರಿಯಾದ ಸಮಯಕ್ಕೆ ಆಫೀಸ್ ಶಾಲಾ-ಕಾಲೇಜು ತಲುಪಲಾಗದೇ ಬಸ್ನಲ್ಲೇ ಸಮಯ ಕಳೆದು ಹೋಗಿದೆ. ಇನ್ನೂ ಕೆಲವರು ಬಸ್ ನಿಲ್ಲಿಸಿದ ಜಾಗದಲ್ಲೇ ಎಲ್ಲೇಂದರಲ್ಲಿ ಇಳಿದು ಹೋಗಿದ್ದಾರೆ. ಈ ಟ್ರಾಫಿಕ್ ಜಾಮ್ಗೆ ಬಿಎಂಟಿಸಿ ಚಾಲಕರು ಹಾಗೂ ನಿರ್ವಹಕರು ಕೂಡ ಹೈರಾಣಾಗಿ ಹೋಗಿದ್ದಾರೆ. ಒಟ್ಟಾರೆ ನಿನ್ನೆ ತಡರಾತ್ರಿ ಸುರಿದ ಮಳೆಗೆ ಬೆಂಗಳೂರಿನ ಜನರು ತತ್ತರಿಸಿ ಹೋಗಿದ್ದಾರೆ.












Click it and Unblock the Notifications