Bengaluru Rains : ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆ; ಪ್ರಯಾಣಿಕರ ಪರದಾಟ
ಬೆಂಗಳೂರು, ಅಕ್ಟೋಬರ್ 19: ಸಿಲಿಕಾನ್ ಸಿಟಿಯಲ್ಲಿ ಬುಧವಾರ ರಾತ್ರಿ ವೇಳೆಗೆ ಶುರುವಾದ ಮಳೆ ಅಬ್ಬರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ನಗರದ ಹಲವೆಡೆ ಸುರಿದ ಧಾರಾಕಾರ ಮಳೆಯಿಂದ ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರಿನ ರಾಜಾಜಿನಗರ, ಮಲ್ಲೇಶ್ವರಂ, ಶಾಂತಿನಗರ, ಡಬಲ್ ರೋಡ್, ಸೌತ್ ಎಂಡ್ ಸರ್ಕಲ್, ಜಯನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದೆ.
ರಾಜಮಹಲ್ ಗುಟ್ಟಹಳ್ಳಿಯಲ್ಲಿ 59 ಮಿ.ಮೀ, ಸಂಪಂಗಿ ರಾಮನಗರ 53 ಮಿ.ಮೀ, ದಯಾನಂದ ನಗರದಲ್ಲಿ 50 ಮಿ.ಮೀ, ಬಾಣಸವಾಡಿಯಲ್ಲಿ 47 ಮಿ.ಮೀ, ವೈಟ್ ಫೀಲ್ಡ್ ಸುತ್ತುತ್ತಲಿನ ಪ್ರದೇಶದಲ್ಲಿ 44 ಮಿ.ಮೀ ಮತ್ತು ಕೆಆರ್ ಪುರಂನಲ್ಲಿ 39 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯು ಮಾಹಿತಿ ನೀಡಿದೆ.
ರಾತ್ರಿ ಸುರಿದ ಮಳೆಗೆ ಪ್ರಯಾಣಿಕರು ಕಂಗಾಲು:
ಬೆಂಗಳೂರಿನಲ್ಲಿ ರಾತ್ರಿ 7.20ರ ಸುಮಾರಿಗೆ ಆರಂಭವಾದ ಮಳೆಯು ನಿರಂತರವಾಗ ಎಡೆಬಿಡದೇ ಸುರಿಯುತ್ತಿದೆ. ನಗರದ ಬಹುತೇಕ ಕಡೆಗಳಲ್ಲಿ ರಸ್ತೆಗಳು ಜಲಾವೃತಗೊಂಡಿವೆ. ಕೆರೆಯಂತೆ ಮಾರ್ಪಟ್ಟಿರುವ ರಸ್ತೆಗಳಲ್ಲಿ ಪ್ರಯಾಣಿಸುವುದಕ್ಕೆ ವಾಹನ ಸವಾರರು ಹರಸಾಹಸ ಪಡುವಂತಾಗಿದೆ. ಇದರ ಮಧ್ಯೆ ಮಳೆಯಿಂದಾಗಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಅಲ್ಲಲ್ಲಿ ವಾಹನ ಸವಾರರು ನಿಂತುಕೊಂಡ ದೃಶ್ಯ ಕಂಡು ಬಂದಿದೆ